ನನ್ನ ಒಳ್ಳೆತನ ಮೆಚ್ಚಿ ಕಾಂಗ್ರೆಸ್-ಜೆಡಿಎಸ್ ಮುಖಂಡರು ಬಿಜೆಪಿಗೆ ಬಂದಿದ್ದಾರೆ: ಮುನಿರತ್ನ

Update: 2020-10-19 11:24 GMT

ಬೆಂಗಳೂರು, ಅ.19: ನನ್ನ ನಡವಳಿಕೆ ಹಾಗೂ ಒಳ್ಳೆಯತನವನ್ನು ಮೆಚ್ಚಿ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಳೀಯ ಮುಖಂಡರು ಬಿಜೆಪಿಗೆ ಬರುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

ವೈಯಾಲಿಕಾವಲ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲಿನ ನಂಬಿಕೆಯಿಂದ ಕಾರ್ಪೋರೇಟರ್ ಗಳು, ಮಾಜಿ ಕಾರ್ಪೋರೇಟರ್ ಗಳು ಸೇರಿದಂತೆ ಸಾಕಷ್ಟು ಮಂದಿ ಮುಖಂಡರು ಬಿಜೆಪಿಗೆ ಬರುತ್ತಿದ್ದಾರೆ. ಅವರೆಲ್ಲರೂ ಪಕ್ಷದ ಸಿದ್ಧಾಂತವನ್ನು ಒಪ್ಪಿಯೇ ಬಿಜೆಪಿಗೆ ಬರುತ್ತಿದ್ದಾರೆ ಎಂದರು. 

ಇತರ ಪಕ್ಷಗಳಿಂದ ಮುಖಂಡರು ಬಂದಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವುದು ಸಹಜ. ಅದೇ ರೀತಿ ಆರ್.ಆರ್ ನಗರದಲ್ಲಿ ನಮ್ಮ ಪಕ್ಷಕ್ಕೆ ಸೇರಿದ ಜೆಡಿಎಸ್ ಮುಖಂಡ ರಾಮಚಂದ್ರ ಹಾಗೂ ಅಲ್ಲಿನ ಬಿಜೆಪಿ ಪಾಲಿಕೆ ಸದಸ್ಯರ ನಡುವೆ ಸಮಸ್ಯೆಯಾಗಿದೆ. ಅವರಿಬ್ಬರನ್ನು ಕೂರಿಸಿಕೊಂಡು ಸಭೆ ನಡೆಸಿದ್ದೇನೆ. ಎಲ್ಲವನ್ನೂ ಪರಿಹರಿಸಿ ಅವರನ್ನು ಒಂದು ಮಾಡುವ ಕೆಲಸ ಮಾಡಿದ್ದೇನೆ ಎಂದರು.

ಈ ಬಾರಿಯ ಉಪ ಚುನಾವಣೆಯಲ್ಲಿ ಆರ್.ಆರ್.ನಗರ ಕ್ಷೇತ್ರದ ಜನ ನನ್ನ ಕೈ ಬಿಡುವುದಿಲ್ಲ. ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸಗಳೇ ನನ್ನ ಕೈ ಹಿಡಿಯಲಿವೆ. ಒಂದು ವೇಳೆ ಇಲ್ಲಿನ ಜನ ನನ್ನ ಕೈ ಬಿಡುವುದಿದ್ದರೆ 2018ರಲ್ಲಿಯೇ ಬಿಡುತ್ತಿದ್ದರು. ಆದರೆ ಒಳ್ಳೆಯ ಕೆಲಸಗಾರ, ಕ್ಷೇತ್ರಕ್ಕೆ ಕೆಲಸ ಮಾಡಲು ಸೂಕ್ತ ವ್ಯಕ್ತಿ ಎಂದು ಜನತೆ ತೀರ್ಮಾನ ಮಾಡಿ ಗೆಲ್ಲಿಸಿದ್ದರು. ಈಗಲೂ ಗೆಲ್ಲಿಸಲಿದ್ದಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News