ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಯುವಕನ ಕೊಲೆ

Update: 2020-10-20 12:04 GMT

ಬೆಂಗಳೂರು, ಅ.20: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನೊಬ್ಬನನ್ನು ಕೊಲೆಗೈದಿರುವ ಘಟನೆ ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ಮೂಲದ ಸುರೇಶ್(34)ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದ್ದು, ಕೃತ್ಯವೆಸಗಿರುವ ಆರೋಪದಡಿ ದೇವೇಂದ್ರಪ್ಪ ಲೇಔಟ್‍ನ ಮಲ್ಲಪ್ಪ ಎಂಬಾತನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಬುರ್ಗಿ ಮೂಲದ ಆರೋಪಿ ಮಲ್ಲಪ್ಪ 11 ವರ್ಷದ ಹಿಂದೆ ಮದುವೆಯಾಗಿದ್ದು ಪತ್ನಿ, ಮೂವರು ಮಕ್ಕಳೊಂದಿಗೆ ದೇವೇಂದ್ರಪ್ಪ ಲೇಔಟ್‍ನಲ್ಲಿ ವಾಸವಾಗಿದ್ದ. ಈತ ಜೆಪಿ ನಗರದ ಸಿಮೆಂಟ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಮನೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.

ಕೆಲಸಕ್ಕೆ ಹೋಗುವ ವೇಳೆ ಪತ್ನಿಗೆ ಮಂಡ್ಯ ಜಿಲ್ಲೆಯ ಸುರೇಶ್ ಪರಿಚಯವಾಗಿ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ ಎನ್ನಲಾಗಿದ್ದು, ಈ ವಿಷಯ ಗೊತ್ತಾಗಿ ಹಲವು ಬಾರಿ ಬುದ್ಧಿ ಹೇಳಿ ಜಗಳ ಮಾಡಿದರೂ ಪತ್ನಿ ನಡವಳಿಕೆ ಸರಿ ಹೋಗಿರಲಿಲ್ಲ ಎಂದು ಹೇಳಲಾಗುತ್ತಿದೆ.

ಇದೇ ವಿಚಾರವಾಗಿ ಅ.16 ರಂದು ಸುರೇಶ್ ಜತೆಗೆ ಮಲ್ಲಪ್ಪ ಜಗಳವಾಡಿದ್ದು, ಬಳಿಕ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆಗೈದಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News