ಕಮರಿಗೆ ಉರುಳಿ ಬಿದ್ದ ಬಸ್: ಐವರು ಮೃತ, 35 ಮಂದಿಗೆ ಗಾಯ
ಮುಂಬೈ: ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ಬುಧವಾರ ತಡರಾತ್ರಿ ಬಸ್ವೊಂದು ಕಣಿವೆಗೆ ಉರುಳಿಬಿದ್ದ ಪರಿಣಾಮವಾಗಿ ಐವರು ಸಾವನ್ನಪ್ಪಿದ್ದು, ಇತರ 35 ಮಂದಿ ಗಾಯಗೊಂಡಿದ್ದಾರೆ.
ನಂದೂರ್ಬಾರ್ನ ಖಂಚೌಂದರ್ ಗ್ರಾಮದಲ್ಲಿ ಸಂಭವಿಸಿದ ಅಪಘಾತದ ಸ್ಥಳದಿಂದ ರಕ್ಷಿಸಲ್ಪಟ್ಟಿರುವ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ 35 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಂದೂರ್ಬಾರ್ನ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ನಂದೂರ್ಬಾರ್ ಎಸ್ಪಿ ಮಹೇಂದ್ರ ಪಂಡಿತ್ ತಿಳಿಸಿದ್ದಾರೆ.
ಬುಧವಾರ ರಾತ್ರಿ 1 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ. ಬಸ್ ಮಲ್ಕಾಪುರದಿಂದ ಸೂರತ್ಗೆ ತೆರಳುತ್ತಿತ್ತು. ಈ ಬಸ್ಗೆ ಹಿಂದಿನಿಂದ ಬರುತ್ತಿದ್ದ ಸೂರತ್ಗೆ ತೆರಳುತ್ತಿದ್ದ ಮತ್ತೊಂದು ಬಸ್ ಢಿಕ್ಕಿಯಾಗಿತ್ತು. ಎರಡು ಬಸ್ಗಳ ನಡುವಿನ ಢಿಕ್ಕಿಯಿಂದಾಗಿ ಒಂದು ಬಸ್ 60ರಿಂದ 80 ಅಡಿ ಆಳವಿರುವ ಕಂದಕಕ್ಕೆ ಉರುಳಿಬಿದ್ದಿದೆ. ಮೃತಪಟ್ಟಿರುವ ಐವರಲ್ಲಿ ಮೂವರು ಪ್ರಯಾಣಿಕರು ಹಾಗೂ ಓರ್ವ ಬಸ್ ಚಾಲಕ ಹಾಗೂ ನಿರ್ವಾಹಕನಾಗಿದ್ದಾರೆ.