ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ: ಪ್ರಕರಣ ದಾಖಲು
Update: 2020-10-24 12:44 GMT
ಬೆಂಗಳೂರು, ಅ.24: ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಆರೋಪ ಸಂಬಂಧ ಓರ್ವನ ವಿರುದ್ಧ ಇಲ್ಲಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೆಂಚಾಲಯ್ಯ ನೀಡಿದ ದೂರಿನ ಮೇರೆಗೆ ಬಸವರಾಜ್ ಎಂಬಾತನ ವಿರುದ್ಧ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಸಿಎಸ್ಒ ಆಗಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ ಬಸವರಾಜ್, ನಾಗಲಕ್ಷ್ಮೀ ಎಂಬಾಕೆಯನ್ನು ಪರಿಚಯಿಸಿಕೊಂಡು ನಕಲಿ ಗುರುತಿನ ಚೀಟಿ ಹಾಗೂ ವಿಸಿಟಿಂಗ್ ಕಾರ್ಡ್ ತೋರಿಸಿದ್ದಾನೆ ಎನ್ನಲಾಗಿದೆ.
ತದನಂತರ, ನಾಗಲಕ್ಷ್ಮೀ ಮಗನಿಗೆ ರೈಲ್ವೆಯಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು 2 ಲಕ್ಷ ರೂ. ನಗದು ವಸೂಲಿ ಮಾಡಿಕೊಂಡಿದ್ದಾನೆ. ಬಳಿಕ, ಮೊಬೈಲ್ ಸಂಪರ್ಕ ಕಡಿತಗೊಳಿಸಿ ಬಸವರಾಜ್ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ವಂಚನೆ ಆರೋಪದಡಿ ದೂರು ದಾಖಲಿಸಿಕೊಂಡಿರುವ ಯಲಹಂಕ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.