ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್‌ ಖಾನ್‌ಗೆ ಜಾಮೀನು

Update: 2020-10-29 07:16 GMT

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

2019ರ ಆಗಸ್ಟ್ 1ರಿಂದ ಮನ್ಸೂರ್‌ ಖಾನ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತನಾಳಗಳಲ್ಲಿ ಶೇ 100 ಬ್ಲಾಕ್ ಇತ್ತು. ಬೆನ್ನೆಲುಬು ಸವಕಳಿಯಿಂದ ಕಾಣಿಸಿಕೊಳ್ಳುವ ಬೆನ್ನು ನೋವಿನಿಂದಲೂ ಬಳಲುತ್ತಿದ್ದಾರೆ’ ಎಂದು ಮನ್ಸೂರ್ ಪರ ವಕೀಲರು ತಿಳಿಸಿದ್ದಾರೆ.

ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಅಲ್ಲಿನ ಮುಖ್ಯ ವೈದ್ಯಾಧಿಕಾರಿ ನೀಡಿರುವ ‍ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.‘4 ಸಾವಿರ ಕೋಟಿ ರೂ. ಜನರಿಂದ ಸಂಗ್ರಹಿಸಿ ಅದರಲ್ಲಿ 1,323 ಕೋಟಿ ರೂ. ಹಿಂದಿರುಗಿಸಿದ್ದಾರೆ. ಈ ನಡುವೆ 209 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮನ್ಸೂರ್ ಖರೀದಿಸಿದ್ದಾರೆ. ಈ ಆಸ್ತಿಯನ್ನೂ ವಿಲೇ ಮಾಡುವ ಸಾಧ್ಯತೆ ಇದೆ ಮತ್ತು ಹೂಡಿಕೆದಾರರ ಹಿತಾಸಕ್ತಿಗೆ ಧಕ್ಕೆಯಾಗಲಿದೆ’ ಎಂದು ಇ.ಡಿ ‍ಪರ ವಾದ ಮಂಡಿಸಿದ ವಿಶೇಷ ವಕೀಲ ಮಧುಕರ ದೇಶಪಾಂಡೆ ಹೇಳಿದರು.

‘ಮುಖ್ಯ ವೈದ್ಯಾಧಿಕಾರಿ ನೀಡಿರುವ ಪತ್ರದ ಪ್ರಕಾರ, ಮನ್ಸೂರ್‌ ಖಾನ್‌ಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿದೆ. ವಿವಿಧ ದರ್ಜೆಯ ಪರೀಕ್ಷೆ ಮತ್ತು ಚಿಕಿತ್ಸೆ ಅಗತ್ಯವಿದೆ ಎಂಬುದನ್ನು ವೈದ್ಯಾಧಿಕಾರಿ ತಿಳಿಸಿದ್ದು, ಈ ಅಂಶವನ್ನು ಜಾಮೀನು ನೀಡಲು ಪರಿಗಣಿಸಬಹುದು’ ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ ಕುಮಾರ್ ಅಭಿಪ್ರಾಯಪಟ್ಟರು.

5 ಲಕ್ಷ ರೂ. ಮೊತ್ತದ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಮತ್ತೊಬ್ಬರ ಶ್ಯೂರಿಟಿ ನೀಡಬೇಕು. ಆಸ್ತಿಗಳನ್ನು ವಿಲೇ ಮಾಡಬಾರದು. ಕಾಯಿಲೆ ವಿಷಯದಲ್ಲಿ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬೇಕಿದ್ದರೆ, ಆ ನ್ಯಾಯಾಲಯದ ಅನುಮತಿ ಪಡೆಯಬೇಕು. ಅನುಮತಿ ನೀಡುವಾಗ ವಿಚಾರಣಾ ನ್ಯಾಯಾಲಯ ಷರತ್ತುಗಳನ್ನು ವಿಧಿಸಬಹುದು’ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News