ವಂಚನೆ ತಡೆಗೆ ಆಸ್ತಿಗಳ ಡಿಜಿಟಲ್ ಖಾತೆ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2020-11-13 18:07 GMT

ಬೆಂಗಳೂರು, ನ.13: ಬಿಬಿಎಂಪಿಯ ಖಾತೆ ನೋಂದಣಿ, ವರ್ಗಾವಣೆ, ವಿಭಜನೆ, ಒಂದುಗೂಡಿಸುವಿಕೆ ಇನ್ನು ಮುಂದೆ ಸಂಪೂರ್ಣವಾಗಿ ಡಿಜಿಟಲ್ ಆಗಲಿದೆ. ಇದರಿಂದ ನಕಲಿ ದಾಖಲೆ, ಆಸ್ತಿಗೆ ಸಂಬಂಧಿಸಿದ ವಂಚನೆ ಪ್ರಕರಣಗಳು ನಿಲ್ಲಲಿವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಈವರೆಗೂ ಕೈಬರಹದ ಮೂಲಕ ಖಾತೆಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದಾಗಿ ಸಾಕಷ್ಟು ನಕಲಿ ದಾಖಲೆ ಸೃಷ್ಟಿ ಹಾಗೂ ಆಸ್ತಿ ಮಾಲಕರಿಗೆ ಮೋಸಗಳಾಗುತ್ತಿತ್ತು. ಇದನ್ನು ತಡೆಯಲು ಡಿಜಿಟಲ್ ಖಾತೆ ವಿತರಣೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ನಗರದ ಶಾಂತಲಾನಗರ, ಶಾಂತಿನಗರ ಹಾಗೂ ನೀಲಸಂದ್ರದಲ್ಲಿ ಜಾರಿ ಮಾಡುತ್ತಿದ್ದು, ಎರಡು ವಾರಗಳಲ್ಲಿ 100 ವಾರ್ಡ್‍ಗಳಲ್ಲಿ ಜಾರಿಗೆ ತರಲಾಗುವುದು. ಈ ವಾರ್ಡ್‍ಗಳಲ್ಲಿ ಈಗಾಗಲೇ ಗಣಕೀಕೃತ ಆಸ್ತಿ ದಾಖಲೆಗಳು ಇರುವುದರಿಂದ ಡಿಜಿಟಲ್ ಖಾತೆಗಳನ್ನು ಬೇಗ ನೀಡಬಹುದು. ನಂತರ ಬೆಂಗಳೂರಿನ ಹೊರವಲಯಗಳಲ್ಲಿ ಮುಂದಿನ ಆರು ತಿಂಗಳೊಳಗೆ ಜಾರಿಗೆ ತರಲಾಗುವುದು ಎಂದರು.

ಇದು ಪಾಲಿಕೆಯ ಕಂದಾಯ ಇಲಾಖೆಗೆ ಸಂಬಂಧಿಸಿದ ಮೈಲಿಗಲ್ಲಾಗಿದ್ದು, ಪಾಲಿಕೆಯ ಮೂರು ವಲಯಗಳಲ್ಲಿ ಖಾತೆಗಳ ನಿರ್ವಹಣೆ, ನೋಂದಣಿಯಲ್ಲಿ ಸಂಪೂರ್ಣ ಬದಲಾವಣೆ ಆಗಲಿದೆ. ಈವರೆಗೆ ಖಾತೆ ನೋಂದಣಿಯಲ್ಲಿ ಹದಿನೆಂಟು ಅಂಶಗಳ ವಿವರಗಳು ಮಾತ್ರ ಇದ್ದು, ಇನ್ಮುಂದೆ 46 ಅಂಶಗಳ ವಿವರ ಇರಲಿದೆ. ಇದರಲ್ಲಿ ಆಸ್ತಿಯ ಫೋಟೋ, ಮಾಲಕನ ಭಾವಚಿತ್ರ, ಅಪಾರ್ಟ್‍ಮೆಂಟ್ ಅಥವಾ ಆಸ್ತಿಯ ಚೆಕ್ ಬಂದಿ, ಅಡವಿಟ್ಟಿರುವ ಮಾಹಿತಿ, ಪ್ರಾಪರ್ಟಿ ಟ್ಯಾಕ್ಸ್ ಮಾಹಿತಿ ಕೂಡ ಇರಲಿದ್ದು, ಆಸ್ತಿ ಖರೀದಿಸುವವರು ಇದನ್ನು ಪರಿಶೀಲಿಸಬಹುದು ಎಂದು ಮಾಹಿತಿ ನೀಡಿದರು.

ಡಿಜಿಟಲ್ ಸರ್ಟಿಫಿಕೇಟ್, ಡಿಜಿಟಲ್ ಸಹಿ ಇರುವುದರಿಂದ ಮೋಸಗಳನ್ನು ತಡೆಯಬಹುದು. ಜೊತೆಗೆ ಇದು ಆಧಾರ್ ಜೊತೆ ಲಿಂಕ್ ಆಗಲಿದ್ದು, ಮಾಲಕನ ಡಿಜಿ ಲಾಕರ್‍ಗೂ ಈ ದಾಖಲೆ ಸೇರಿಕೊಳ್ಳಲಿದೆ ಎಂದು ತಿಳಿಸಿದರು.

ಒಟ್ಟು 100 ವಾರ್ಡ್‍ಗಳಲ್ಲಿ 7.5 ಲಕ್ಷ ಆಸ್ತಿಗಳಿದ್ದು, ಆರಂಭದ ಮೂರು ವಾರ್ಡ್‍ಗಳಲ್ಲಿ 23 ಸಾವಿರ ಆಸ್ತಿಗಳಿವೆ. ಹೀಗಾಗಿ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಕಟ್ಟಿದ ವಿವರ ಹಾಗೂ ಇತರ 46 ಅಂಶಗಳ ವಿವರದೊಂದಿಗೆ ಪಾಲಿಕೆಯ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಗಣಕೀಕರಣಗೊಳಿಸಬೇಕು. ನಂತರ ಗಣಕೀಕೃತ ಡಿಜಿಟಲ್ ಎ, ಬಿ ಖಾತೆ ವಿತರಿಸಲಾಗುವುದು ಎಂದು ವಿವರಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂದಾಯ ವಿಭಾಗದ ಸೇವಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದ್ದು, ನಾಗರಿಕರು ಯಾವುದೇ ಕಚೇರಿಗೆ ಹೋಗದೆ ಸುಲಭ ಹಾಗೂ ತ್ವರಿತವಾಗಿ ಖಾತಾ ನೋಂದಣಿ, ಖಾತಾ ವರ್ಗಾವಣೆ, ವಿಭಜನೆ ಸೇರಿದಂತೆ ಇನ್ನಿತರೆ ಸೇವೆಗಳನ್ನು ಪಡೆಯಬಹುದಾಗಿದೆ. ಮೊದಲ ಹಂತದಲ್ಲಿ ನಗರದ ಕೇಂದ್ರ ಭಾಗ(ಪೂರ್ವ, ಪಶ್ಚಿಮ, ದಕ್ಷಿಣ ವಲಯ)ದ 100 ವಾರ್ಡ್‍ಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಜಾರಿಗೊಳಿಸಲಾಗುವುದು.

-ಗೌರವ್ ಗುಪ್ತಾ, ಬಿಬಿಎಂಪಿ ಆಡಳಿತಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News