ನೆಹರೂ ತತ್ವ-ಸಿದ್ಧಾಂತ, ದೂರದೃಷ್ಟಿ ಸ್ವತಂತ್ರ ಭಾರತದ ಪ್ರಗತಿಯ ಬುನಾದಿ: ಡಿ.ಕೆ.ಶಿವಕುಮಾರ್

Update: 2020-11-14 13:48 GMT

ಬೆಂಗಳೂರು, ನ.14: ಪಂಡಿತ್ ಜವಾಹರಲಾಲ್ ನೆಹರೂ ಅವರ ತತ್ವ ಸಿದ್ಧಾಂತಗಳು, ದೂರದೃಷ್ಟಿಯೇ ಸ್ವತಂತ್ರ ಭಾರತದ ಪ್ರಗತಿ ಇತಿಹಾಸದ ಭದ್ರ ಬುನಾದಿ. ಇದನ್ನು ಉಳಿಸಿಕೊಂಡು ಹೋಗಬೇಕಿರುವುದು ನಮ್ಮ ಜವಾಬ್ದಾರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಬಿಜೆಪಿ ನಾಯಕರು ದೇಶದ ಇತಿಹಾಸ ಬದಲಿಸುತ್ತೇನೆ ಎಂದರೆ ಅದು ದೇಶಕ್ಕೆ ಆಗುವ ನಷ್ಟ. ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. ಕಾಂಗ್ರೆಸ್ ನಾಯಕರ ಇತಿಹಾಸ ದೇಶದ ಅಭಿವೃದ್ಧಿಯ ಇತಿಹಾಸ. ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನವೇ ಭಾರತದ ಸ್ವಾತಂತ್ರ್ಯದ ಇತಿಹಾಸ ಎಂದು ಅವರು ಹೇಳಿದರು.

ನೆಹರೂ ವಿದ್ಯಾಭ್ಯಾಸ ಮುಗಿಸಿ ಬಂದ ಮೇಲೆ 1920ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ನಂತರ ಗಾಂಧೀಜಿ ಅವರ ಜತೆ ಕೆಲಸ ಮಾಡಿದರು. ನೆಹರೂ ಅವರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ ಚಳವಳಿಗೆ ಸಹಾಯ ಮಾಡಿದ್ದರು. ಅವರು 1929ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗುವ ಮುನ್ನ, ಅಲಹಾಬಾದ್ ಪಾಲಿಕೆಯಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು ಎಂದು ಶಿವಕುಮಾರ್ ತಿಳಿಸಿದರು.

ನೆಹರೂ ಅವರಿಗೆ ಪ್ರಧಾನಮಂತಿ ಹುದ್ದೆ ಏಕಾಏಕಿ ಸಿಗಲಿಲ್ಲ. ಅವರ ಹೋರಾಟ, ಸ್ಥಳೀಯ ಸಂಸ್ಥೆಗಳಲ್ಲಿ ನಿರ್ವಹಿಸಿದ ಕಾರ್ಯ, ಸ್ಥಳೀಯ ಮಟ್ಟದಿಂದ ಮಾಡಿದ ಕೆಲಸ ಅವರನ್ನು ನಾಯಕರನ್ನಾಗಿ ಬೆಳೆಸಿತು. ರಾಜಗೋಪಾಲಾಚಾರಿ, ಸುಭಾಷ್ ಚಂದ್ರ ಬೋಸ್ ಅವರು ಕೂಡ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ನೆಹರೂ ಪ್ರಧಾನಿಯಾಗಿ ಮಾಡಿದ ಮೊದಲ ಕೆಲಸ ವಿಧವೆಯರ ಶೋಷಣೆ ತಪ್ಪಿಸಿದ್ದು ಮತ್ತು ಅವರಿಗೆ ಸಮಾನ ಆಸ್ತಿ ಹಕ್ಕು ನೀಡಿದ್ದು ಎಂದು ಅವರು ಹೇಳಿದರು.

ರಾಷ್ಟ್ರದಲ್ಲಿ ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಆರಂಭಿಸಿದರು. ಅಂತಹ ಸಂಸ್ಥೆಗಳನ್ನು ಇದೀಗ ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರಲು ಮುಂದಾಗಿದೆ. ನಮ್ಮ ನಾಯಕರು ಎಚ್.ಎಂ.ಟಿ, ಐಟಿಐ, ಎಚ್‍ಎಎಲ್ ಸೇರಿದಂತೆ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರು. ಈಗ ರೈಲ್ವೆ ವ್ಯವಸ್ಥೆಯನ್ನೂ ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ನಮ್ಮ ನಾಯಕರು ದೇಶಕ್ಕಾಗಿ ಮಾಡಿದ ಆಸ್ತಿಯನ್ನು ಇವರು ಮಾರುತ್ತಿದ್ದಾರೆ. ಇದನ್ನೆಲ್ಲ ಅವರು ತಮ್ಮ ಆಪ್ತರಿಗೆ ಮಾರುತ್ತಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.

ನೆಹರೂ ಅವರ ತ್ಯಾಗ, ಸಿದ್ಧಾಂತ, ಆಚಾರ, ವಿಚಾರ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ. ಅವರು ವಿಶ್ವದ ಅನೇಕ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಬೆಳೆಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ನೆಹರೂ ಅವರ ಹೆಸರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ಸೂಚಿಸಿದ್ದರು. ಹಾಗೆಂದು ಪಟೇಲರ ಪುತ್ರಿಯೇ ಪತ್ರ ಬರೆದಿರುವ ದಾಖಲೆ ಇದೆ. ಭಿನ್ನಾಭಿಪ್ರಾಯ ಏನೇ ಇದ್ದರೂ ವ್ಯಕ್ತಿಗಳು, ರಾಜ್ಯ, ಧರ್ಮಗಳ ನಡುವೆ ವೈಮನಸ್ಸು ಸೃಷ್ಟಿಸಬಾರದು. ಕಿಚ್ಚು ಹಚ್ಚಬಾರದು ಎಂದು ಅವರು ಹೇಳಿದರು.

ನೆಹರೂ ಜೈಲಿನಿಂದ ತಮ್ಮ ಕುಟುಂಬಕ್ಕೆ ಪತ್ರ ಬರೆಯುವಾಗಲೂ ದೇಶವನ್ನು ಹೇಗೆ ಒಗ್ಗಟ್ಟಿನಿಂದ ಮುನ್ನಡೆಸಬೇಕು ಎಂಬುದರ ಬಗ್ಗೆ ಬರೆಯುತ್ತಿದ್ದರು. ಕೇವಲ ಭಾರತ ಅಷ್ಟೇ ಅಲ್ಲ, ಎಲ್ಲ ರಾಷ್ಟ್ರಗಳ ಜತೆಗಿನ ಹೊಂದಾಣಿಕೆ ಬಗ್ಗೆಯೂ ಆಸಕ್ತಿ ಹೊಂದಿದ್ದರು. ಆ ಮೂಲಕ ವಿಶ್ವಮಾನವ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಇಂತಹ ಇತಿಹಾಸ ಇರುವ ಪಕ್ಷದಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ಅದೃಷ್ಟ ಎಂದು ಶಿವಕುಮಾರ್ ಹೇಳಿದರು.

ನಾವು ದೇಶದ ಜಾತ್ಯತೀತ ವ್ಯವಸ್ಥೆಯ ಬುನಾದಿಯನ್ನು ಬಲಪಡಿಸಲು ಕೆಲಸ ಮಾಡಬೇಕು. ನಮ್ಮ ಇತಿಹಾಸ ಉಳಿಸಿಕೊಳ್ಳೋಣ. ಚುನಾವಣೆ ಫಲಿತಾಂಶದ ಬಗ್ಗೆ ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ನಮಗೆ ನಮ್ಮ ಇತಿಹಾಸ ಇದೆ, ಸಿದ್ಧಾಂತ ಇದೆ. ನಮ್ಮ ಯುವ ಪೀಳಿಗೆಯನ್ನು ಸಂಘಟನೆ ಮಾಡಿದರೆ, ಈ ರಾಜ್ಯ ಹಾಗೂ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ 30-35 ವರ್ಷಗಳ ರಾಜಕೀಯ ಇತಿಹಾಸ ನೋಡಿದಾಗ ಕಳೆದ ಉಪಚುನಾವಣೆಯಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬಹಳ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಸೋಲಿನ ಕಾರಣ ವಿಚಾರವಾಗಿ ತನಿಖೆ ನಡೆಸುತ್ತೇವೆ. ಈ ಬಾರಿ ತೋರಿದ ಒಗ್ಗಟ್ಟನ್ನೇ ಮುಂದಿನ ದಿನಗಳಲ್ಲೂ ಮುಂದುವರಿಸಿಕೊಂಡು ಹೋಗೋಣ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಬರಲಿದ್ದು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಜನರಿಗೆ ಶಕ್ತಿ ತುಂಬೋಣ ಎಂದು ಶಿವಕುಮಾರ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ, ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್, ಎಲ್.ಹನುಮಂತಯ್ಯ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಎಚ್.ಆಂಜನೇಯ, ವಿ.ಮುನಿಯಪ್ಪ, ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್ ಶಂಕರ್ ಹಾಗೂ ಇತರ ಮುಖಂಡರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News