ಕೋವಿಡ್ ‌ಲಸಿಕೆಗಾಗಿ ಶೈತ್ಯಾಗಾರಗಳು ಸಿದ್ಧವಿರಲಿ: ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ

Update: 2020-11-24 16:45 GMT

ಹೊಸದಿಲ್ಲಿ,ನ.24: ಕೊರೋನ ವೈರಸ್ ಸ್ಥಿತಿಯನ್ನು ಮತ್ತು ಲಸಿಕೆ ವಿತರಣೆಗಾಗಿ ಸಿದ್ಧತೆಗಳನ್ನು ಚರ್ಚಿಸಲು ಮಂಗಳವಾರ ಸಾಂಕ್ರಾಮಿಕದಿಂದ ಅತ್ಯಂತ ಪೀಡಿತ ಎಂಟು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಲಸಿಕೆ ವಿತರಣೆಯಲ್ಲಿ ಸುರಕ್ಷತೆ ಮತ್ತು ವೇಗ ಎರಡಕ್ಕೂ ಒತ್ತು ನೀಡಿದರು. ಭಾರತವು ತನ್ನ ಪ್ರಜೆಗಳಿಗೆ ಒದಗಿಸುವ ಯಾವುದೇ ಲಸಿಕೆಯು ಎಲ್ಲ ವೈಜ್ಞಾನಿಕ ಮಾನದಂಡಗಳಲ್ಲಿ ಸುರಕ್ಷಿತವಾಗಿರುತ್ತದೆ ಎಂದ ಅವರು, ಲಸಿಕೆಯನ್ನು ಎಲ್ಲರಿಗೂ ಲಭ್ಯವಾಗಿಸುವುದು ನಮ್ಮ ಆದ್ಯತೆಯಾಗಿದೆ. ರಾಜ್ಯಗಳು ಶೈತ್ಯಾಗಾರಗಳು ಸೇರಿದಂತೆ ಅಗತ್ಯ ವ್ಯವಸ್ಥೆಗಳೊಂದಿಗೆ ಸಜ್ಜಾಗಿರಬೇಕು ಎಂದು ಹೇಳಿದರು.

ಕಳೆದ ಹಲವಾರು ದಿನಗಳಿಂದ ದೇಶಾದ್ಯಂತ ಪ್ರತಿದಿನ ಹೊಸ ಪ್ರಕರಣಗಳ ಸಂಖ್ಯೆ 50,000ಕ್ಕಿಂತ ಕಡಿಮೆಯಿದ್ದರೂ ದಿಲ್ಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿಯ ಸ್ಥಿತಿಯು ಕಳವಳಕ್ಕೆ ಕಾರಣವಾಗಿದೆ. ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಮೋದಿ ನುಡಿದರು.

 ರಾಜ್ಯಗಳೊಂದಿಗೆ ಸಂಘಟಿತ ಸಮನ್ವಯದೊಂದಿಗೆ ಲಸಿಕೆ ವಿತರಣೆ ಕಾರ್ಯತಂತ್ರವನ್ನು ರೂಪಿಸಲಾಗುವುದು. ಲಸಿಕೆಗಳನ್ನು ದಾಸ್ತಾನಿಡಲು ಸಾಕಷ್ಟು ಶೈತ್ಯಾಗಾರಗಳನ್ನು ಸಜ್ಜುಗೊಳಿಸಲು ರಾಜ್ಯಗಳು ಕಾರ್ಯಾರಂಭ ಮಾಡಬೇಕು ಎಂದರು.

ಯಾವುದೇ ಅಲಕ್ಷ್ಯಕ್ಕೆ ಅವಕಾಶ ನೀಡದಂತೆ ರಾಜ್ಯಗಳನ್ನು ಎಚ್ಚರಿಸಿದ ಮೋದಿ,ಪಾಸಿಟಿವ್ ದರ ಶೇ.5ರೊಳಗೆ ಮತ್ತು ಸಾವಿನ ದರ ಶೇ.1ರೊಳಗೆ ಇರುವಂತೆ ನೋಡಿಕೊಳ್ಳುವಂತೆ ಅವುಗಳಿಗೆ ಸೂಚಿಸಿದರು. ‘ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಲು ನಮ್ಮ ಪ್ರಯತ್ನಗಳನ್ನು ಇನ್ನಷ್ಟು ಚುರುಕುಗೊಳಿಸುವ ಅಗತ್ಯವಿದೆ. ಪರೀಕ್ಷೆ,ದೃಢೀಕರಣ,ಸಂಪರ್ಕ ಪತ್ತೆ ಮತ್ತು ಮಾಹಿತಿ ಸಂಗ್ರಹ ಇವುಗಳಿಗೆ ಅತ್ಯುನ್ನತ ಆದ್ಯತೆಯನ್ನು ನೀಡಬೇಕು ’ಎಂದರು.

ಮೊದಲ ಹಂತದಲ್ಲಿ ಲಸಿಕೆಯನ್ನು ಕೊರೋನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ,ಎರಡನೇ ಹಂತದಲ್ಲಿ ಪೊಲೀಸ್ ಸಿಬ್ಬಂದಿಗಳು, ಸ್ವಚ್ಛತಾ ನೌಕರರು ಇತ್ಯಾದಿ,ಮೂರನೇ ಹಂತದಲ್ಲಿ 50 ವರ್ಷಕ್ಕೂ ಮೇಲಿನವರಿಗೆ ಹಾಗೂ ನಾಲ್ಕನೇ ಹಂತದಲ್ಲಿ ಇತರ ಅನಾರೋಗ್ಯಗಳನ್ನು ಹೊಂದಿರುವವರಿಗೆ ನೀಡಲಾಗುವುದು ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ತಿಳಿಸಿದರು.

ಕೋವಿಡ್‌ನಿಂದ ತೀವ್ರ ಬಾಧಿತ ರಾಜ್ಯಗಳಾದ ಮಹಾರಾಷ್ಟ್ರ,ಕೇರಳ,ದಿಲ್ಲಿ,ಪ.ಬಂಗಾಳ,ಕರ್ನಾಟಕ,ರಾಜಸ್ಥಾನ ಮತ್ತು ಛತ್ತೀಸ್‌ಗಡ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚಿನ ಸಂದರ್ಭಗಳಲ್ಲಿ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯ ಫಲಿತಾಂಶಗಳು ನಿಖರವಾಗಿರುವುದಿಲ್ಲವಾದ್ದರಿಂದ ತನ್ನ ರಾಜ್ಯವು ಅದನ್ನು ಕೈಬಿಟ್ಟಿದೆ. ಈಗ ಪ್ರತಿದಿನ 30,000ಕ್ಕೂ ಅಧಿಕ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುತ್ತಿದೆ. ಸರಕಾರವು ಇತರ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು.

ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಇತರ ಕಾರಣಗಳೊಂದಿಗೆ ವಾಯುಮಾಲಿನ್ಯವೂ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,ನೆರೆಯ ರಾಜ್ಯಗಳಲ್ಲಿ ಕೃಷಿತ್ಯಾಜ್ಯಗಳ ಸುಡುವಿಕೆಯನ್ನು ನಿಲ್ಲಿಸಲು ಮಧ್ಯಪ್ರವೇಶಿಸುವಂತೆ ಪ್ರಧಾನಿಯವರನ್ನು ಕೋರಿದರು.

ಸಭೆಯಲ್ಲಿ ಇತ್ತೀಚೆಗೆ ಲಸಿಕೆ ವಿಷಯದಲ್ಲಿ ಸರಕಾರವನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನೂ ಮೋದಿ ತರಾಟೆಗೆತ್ತಿಕೊಂಡರು. ರಾಹುಲ್ ಹೆಸರೆತ್ತದೆ,ಅವರು ರಾಜಕೀಯವಾಡುತ್ತಿದ್ದಾರೆ ಎಂದು ಆರೋಪಿಸಿದ ಮೋದಿ,‘ಲಸಿಕೆ ಯಾವಾಗ ಬರುತ್ತದೆ ಎನ್ನುವುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಅದು ನಮ್ಮ ಕೈಗಳಲ್ಲಿಲ್ಲ. ಅದು ವಿಜ್ಞಾನಿಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಕೆಲವರು ಈ ಬಗ್ಗೆ ರಾಜಕೀಯವಾಡುತ್ತಿದ್ದಾರೆ. ಯಾರೇ ರಾಜಕೀಯವಾಡುವುದನ್ನು ನಿಲ್ಲಿಸಲು ಯಾವುದಕ್ಕೂ ಸಾಧ್ಯವಿಲ್ಲ ’ಎಂದರು.

ತನ್ಮಧ್ಯೆ ಮಂಗಳವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 37,975 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ದಿನದ ಪ್ರಕರಣಗಳಿಗಿಂತ ಶೇ.13ರಷ್ಟು ಕಡಿಮೆಯಾಗಿದೆ. ಇದೇ ಅವಧಿಯಲ್ಲಿ 480 ಜನರು ಮೃತಪಟ್ಟಿದ್ದಾರೆ. ಒಟ್ಟಾರೆ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 91.77 ಲಕ್ಷಕ್ಕೆ ಮತ್ತು ಸಾವುಗಳ ಸಂಖ್ಯೆ 1,34,218ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News