ಬೈಕ್ ಕಳವು ಪ್ರಕರಣ: ಮೂವರ ಬಂಧನ, 22 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ
Update: 2020-11-28 16:32 GMT
ಬೆಂಗಳೂರು, ನ.28: ಕಳವು ಮಾಡುತ್ತಿದ್ದ ಆರೋಪದಡಿ ಮೂವರನ್ನು ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿ, 22 ಲಕ್ಷ ಮೌಲ್ಯದ ಮಾಲು ಜಪ್ತಿ ಮಾಡಿದ್ದಾರೆ.
ಬನಶಂಕರಿ, ಕದಿರೇನಹಳ್ಳಿ ನಿವಾಸಿಗಳಾದ ಮುರಳಿ (25), ಪವನ್ ಧಾಮ(23) ಹಾಗೂ ಮಂಜುನಾಥ್(23) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳೆಲ್ಲರೂ ಗ್ಯಾರೇಜ್ನಲ್ಲಿ ಮೆಕ್ಯಾನಿಕ್ಗಳಾಗಿದ್ದು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವ ಆಕಾಂಕ್ಷೆ ಹೊಂದಿದ್ದರು. ಇದಕ್ಕಾಗಿ ಮೆಕ್ಯಾನಿಕ್ ಕೆಲಸ ಬಿಟ್ಟು ರಾತ್ರಿ ವೇಳೆ ಬೈಕ್ಗಳ ಹ್ಯಾಂಡಲ್ ಮುರಿದು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳ ಬಂಧನದಿಂದ ದಕ್ಷಿಣ ವಿಭಾಗದಲ್ಲಿ 20 ಪ್ರಕರಣ ಬೆಳಕಿಗೆ ಬಂದಿವೆ. ಬಂಧಿತರಿಂದ 18 ದ್ವಿಚಕ್ರ ವಾಹನಗಳು ಸೇರಿ 22 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.