ಭಾರೀ ಪ್ರಮಾಣದಲ್ಲಿ ವನ್ಯಜೀವಿ ಅಂಗಾಂಗ ಮಾರಾಟ: ನಾಲ್ವರ ಸೆರೆ

Update: 2020-11-28 17:06 GMT

ಬೆಂಗಳೂರು, ನ.28: ನಾಗರಹೊಳೆ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಿಂದ ವನ್ಯಜೀವಿಗಳನ್ನು ಬೇಟೆಯಾಡಿ ಅವುಗಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ಇಲ್ಲಿನ ಸಿ.ಕೆ. ಅಚ್ಚುಕಟ್ಟು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ಕಾರ್ತಿಕ್(40), ಪ್ರಶಾಂತ್(28) ಹಾಗೂ ಆಂಧ್ರಪ್ರದೇಶ ಮೂಲದ ಪ್ರಮೀಳಾ(40), ಸಾಯಿಕುಮಾರ್(22) ಬಂಧಿತ ಆರೋಪಿಗಳು ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಕತ್ರಿಗುಪ್ಪೆಯ ಬಸ್ ನಿಲ್ದಾಣ ಬಳಿ ಅನುಮಾನಾಸ್ಪದ ವರ್ತನೆ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಾಗ ವನ್ಯಜೀವಿಗಳ ಉಗುರು ಸೇರಿದಂತೆ ಅಂಗಾಂಗಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

6 ಜೊತೆ ಹುಲಿಯ ಉಗುರುಗಳು, 7 ಜೊತೆ ಚಿಪ್ಪು ಹಂದಿಯ ಉಗುರುಗಳು, 3 ಜೊತೆ ಕರಡಿ, 200 ಜೊತೆ ಚಿರತೆ ಉಗುರುಗಳು ಸೇರಿದಂತೆ ವಿವಿಧ ಪ್ರಾಣಿಗಳ ಸುಮಾರು 400ಕ್ಕೂ ಹೆಚ್ಚಿನ ಉಗುರುಗಳು. ಒಂದು ನರಿಯ ಮುಖದ ಆಕೃತಿಯ ಚರ್ಮ, ಒಂದು ನರಿ ತಲೆ ಬುರುಡೆ ಸಮೇತ ಇರುವ ಚರ್ಮ, 2 ಕಾಡು ಬೆಕ್ಕಿನ ಪಂಜಗಳು, ಕೃಷ್ಣಮೃಗ ಚರ್ಮವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಆರೋಪಿಗಳು ಎಲ್ಲಿಂದ ಇಷ್ಟು ಪ್ರಮಾಣದ ವನ್ಯಜೀವಿಗಳ ದೇಹದ ಭಾಗಗಳು ತಂದಿದ್ದರು. ಯಾರಿಗೆ ಮಾರಾಟ ಮಾಡಲು ತಂದಿದ್ದರು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಹರೀಶ್ ಪಾಂಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News