ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಚುನಾವಣೆ: ಅಧಿಸೂಚನೆ ಪ್ರಕಟಿಸಿದ ಚುನಾವಣಾ ಆಯೋಗ

Update: 2020-11-30 11:53 GMT

ಬೆಂಗಳೂರು, ನ.30: ರಾಜ್ಯದ ಸ್ಥಳೀಯ ಚುನಾವಣಾ ಕಣವಾದ ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದ್ದು, ಎರಡು ಹಂತದಲ್ಲಿ ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ.

ಸೋಮವಾರ ವರ್ಚುವಲ್ ಸುದ್ದಿಗೋಷ್ಠಿಯ ಮೂಲಕ ಮಾಹಿತಿ ನೀಡಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ.ಬಸವರಾಜು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಜಿಲ್ಲಾಧಿಕಾರಿಗಳು ಡಿ.7ಕ್ಕೆ ಮೊದಲ ಹಂತದ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಎರಡನೇ ಹಂತಕ್ಕೆ ಡಿ.11 ರಂದು ಅಧಿಸೂಚನೆ ಹೊರಡಿಸುತ್ತಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆಗೂ ಅವಕಾಶ ನೀಡಲಾಗಿದೆ.

ಮೊದಲನೇ ಹಂತದ ನಾಮಪತ್ರ ಸಲ್ಲಿಕೆಗೆ ಡಿ.11 ರಂದು ಕೊನೆ ದಿನ ಹಾಗೂ ಎರಡನೇ ಹಂತದ ನಾಮಪತ್ರ ಸಲ್ಲಿಕೆಗೆ ಡಿ.16 ರಂದು ಕೊನೆಯ ದಿನಾಂಕವಾಗಿರಲಿದೆ. ನಾಮಪತ್ರಗಳ ಪರಿಶೀಲನೆಯು ಮೊದಲನೇ ಹಂತದಲ್ಲಿ ಡಿ.12 ಕ್ಕೆ ನಡೆಯಲಿದೆ, ಎರಡನೇ ಹಂತದಲ್ಲಿ ಡಿ.17 ಕ್ಕೆ ನಡೆಯಲಿದೆ. ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆಯಲು ಮೊದಲನೇ ಹಂತದಲ್ಲಿ ಡಿ.14 ರವರೆಗೆ ಅವಕಾಶವಿದ್ದು, ಎರಡನೇ ಹಂತದಲ್ಲಿ ಡಿ.19 ರವರೆಗೆ ಅವಕಾಶ ನೀಡಲಾಗಿರುತ್ತದೆ.

ಮೊದಲನೇ ಹಂತದ ಚುನಾವಣೆಯು ಡಿ.22 ರಂದು ಹಾಗೂ ಎರಡನೇ ಹಂತದ ಚುನಾವಣೆಯು ಡಿ.27 ಕ್ಕೆ ನಡೆಯುತ್ತದೆ. ಮರು ಮತದಾನ ಅಗತ್ಯವಿದ್ದಲ್ಲಿ ಮೊದಲನೇ ಹಂತಕ್ಕೆ ಡಿ.24 ಕ್ಕೆ ಹಾಗೂ ಎರಡನೇ ಹಂತಕ್ಕೆ ಡಿ.29 ಕ್ಕೆ ನಡೆಯುತ್ತದೆ. ಮತ ಎಣಿಕೆ ಪ್ರಕ್ರಿಯೆಯು ಡಿ.30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

ಮೊದಲನೇ ಹಂತದಲ್ಲಿ ಚುನಾವಣೆ ನಡೆಯುವ ತಾಲೂಕುಗಳು: ಬೆಂಗಳೂರು ಉತ್ತರ, ಯಲಹಂಕ, ಹೊಸಕೋಟೆ, ನೆಲಮಂಗಲ, ರಾಮನಗರ, ಕನಕಪುರ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ದಾವಣಗೆರೆ, ಹೊನ್ನಾಳಿ, ಜಗಳೂರು, ಕೋಲಾರ, ಮಾಲೂರು, ಶ್ರೀನಿವಾಸಪುರ, ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ, ಪಾವಗಡ, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಸರಗೂರು, ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಉಡುಪಿ, ಹೆಬ್ರಿ, ಬ್ರಹ್ಮಾವರ, ಬೈಂದೂರು, ಮಡಿಕೇರಿ, ಸೋಮವಾರಪೇಟೆ, ಹಾಸನ, ಅರಕಲಗೂಡು, ಚನ್ನರಾಯಪಟ್ಟಣ, ಸಕಲೇಶಪುರ, ಮಂಡ್ಯ, ಮದ್ದೂರು, ಮಳವಳ್ಳಿ, ಚಾಮರಾಜನಗರ, ಗುಂಡ್ಲುಪೇಟೆ, ಬೆಳಗಾವಿ, ಖಾನಾಪುರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಗೋಕಾಕ, ಮೂಡಲಗಿ, ವಿಜಯಪುರ, ಬಬಲೇಶ್ವರ, ತಿಕೋಟ, ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ, ತಾಳಿಕೋಟೆ, ಜಮಖಂಡಿ, ಮುಧೋಳ, ಬೀಳಗಿ, ರಬಕವಿ-ಬನಹಟ್ಟಿ, ಧಾರವಾಡ, ಅಳ್ನಾವರ, ಕಲಘಟಗಿ, ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಹಾವೇರಿ, ರಾಣೇಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ, ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ, ಕಲಬುರಗಿ, ಆಳಂದ, ಅಫಜಲಪುರ, ಕಮಲಾಪುರ, ಕಾಳಗಿ, ಶಹಾಬಾದ, ಬಸವಕಲ್ಯಾಣ, ಹುಲಸೂರ, ಚಿಟಗುಪ್ಪ, ಭಾಲ್ಕಿ, ಬಳ್ಳಾರಿ, ಕುರುಗೋಡು, ಸಿರಗುಪ್ಪ, ಹೊಸಪೇಟೆ, ಕಂಪ್ಲಿ, ರಾಯಚೂರು, ದೇವದುರ್ಗ, ಮಾನ್ವಿ, ಸಿರವಾರ, ಶಹಾಪುರ, ಸುರಪುರ, ಹುಣಸಗಿ, ಕೊಪ್ಪಳ, ಯಲಬುರ್ಗಾ, ಕಕನೂರ

ಎರಡನೇ ಹಂತ: ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಆನೇಕಲ್, ದೊಡ್ಡಬಳ್ಳಾಪುರ, ದೇವನಹಳ್ಳಿ, ಚನ್ನಪಟ್ಟಣ, ಮಾಗಡಿ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹರಿಹರ, ಚನ್ನಗಿರಿ, ನ್ಯಾಮತಿ, ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್, ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು, ಸಾಗರ, ಶಿಕಾರಿಪುರ, ಸೊರಬ, ಹೊಸನಗರ, ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಮೈಸೂರು, ನಂಜನಗೂಡು, ಟಿ.ನರಸೀಪುರ, ನರಸಿಂಹರಾಜಪುರ, ಕಡೂರು, ತರಿಕೇರೆ, ಅಜ್ಜಂಪುರ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ, ಕುಂದಾಪುರ, ಕಾರ್ಕಳ, ಕಾಪು, ವಿರಾಜಪೇಟೆ, ಅರಸೀಕೆರೆ, ಬೇಲೂರು, ಆಲೂರು, ಹೊಳೆನರಸೀಪುರ, ಪಾಂಡವಪುರ, ಶ್ರೀರಂಗಪಟ್ಟಣ, ಕೃಷ್ಣರಾಜಪೇಟೆ, ನಾಗಮಂಗಲ, ಯಳಂದೂರು, ಕೊಳ್ಳೆಗಾಲ ಹನೂರು, ಸವದತ್ತ, ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಇಂಡಿ, ಚಡಚಣ, ಸಿಂಧಗಿ, ದೇವರಹಿಪ್ಪರಗಿ, ಬಾಗಲಕೋಟೆ, ಹುನಗುಂದ, ಬಾದಾಮಿ, ಇಳಕಲ್, ಗುಳೇದಗುಡ್ಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ, ಮುಂಡರಗಿ, ರೋಣ, ಗಜೇಂದ್ರಗಡ, ನರಗುಂದ, ಹಾನಗಲ್ಲ, ಶಿಗ್ಗಾಂವ, ಸವಣೂರ, ಬ್ಯಾಡಗಿ, ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ, ಜೋಯಿಡಾ, ಯಡ್ರಾಮಿ, ಜೇವರ್ಗಿ, ಚಿತ್ತಾಪುರ, ಚಿಂಚೊಳ್ಳಿ, ಸೇಡಂ, ಬೀದರ್, ಔರಾದ, ಕಮಲನಗರ, ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ, ಲಿಂಗಸುಗೂರು, ಸಿಂಧನೂರು, ಮಸ್ಕಿ, ಯಾದಗಿರಿ, ಗುರಮಿಟ್ಟಕಲ್, ವಡಗೇರಾ, ಗಂಗಾವತಿ, ಕಾಟರಗಿ, ಕುಷ್ಟಗಿ, ಕನಕಗಿರಿ ತಾಲೂಕುಗಳಿಗೆ ನಡೆಯಲಿದೆ.

ಎಷ್ಟು ಗ್ರಾಮಪಂಚಾಯತ್‍ಗಳಿಗೆ ಚುನಾವಣೆ: ರಾಜ್ಯದ 30 ಜಿಲ್ಲೆಗಳಲ್ಲಿನ 6004 ಗ್ರಾಮ ಪಂಚಾಯತ್‍ಗಳಲ್ಲಿ ಅವಧಿ ಮುಕ್ತಾಯಗೊಳ್ಳದ 162, ನ್ಯಾಯಾಲಯದಲ್ಲಿ ಪ್ರಕರಣವಿರುವ 6 ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆಯಾದ 74(ಪೂರ್ಣ 33, ಭಾಗಶಃ 41) ಸೇರಿ 242 ಗ್ರಾಮ ಪಂಚಾಯತ್‍ಗಳನ್ನು ಹೊರತುಪಡಿಸಿ 5762 ಗ್ರಾಮ ಪಂಚಾಯತ್‍ಗಳ 35,884 ಕ್ಷೇತ್ರಗಳ 92,121 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನೀತಿ ಸಂಹಿತೆ ಜಾರಿ: ರಾಜ್ಯಾದ್ಯಂತ ಬಹುತೇಕ ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಆಯೋಗವು ದಿನಾಂಕ ಘೋಷಣೆ ಮಾಡಿದ ಸೋಮವಾರದಿಂದಲೇ ನೀತಿ ಸಂಹಿತೆ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಅನ್ವಯವಾಗಲಿದೆ. ಪಟ್ಟಣ ಪಂಚಾಯತ್, ನಗರಸಭೆ, ಪುರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 2.97 ಕೋಟಿ ಅರ್ಹ ಮತದಾರರಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು 1,500 ರಿಂದ ಒಂದು ಸಾವಿರಕ್ಕೆ ಇಳಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ಉಳಿದ ಕಡೆಗಳಲ್ಲಿ ಮತ ಪೆಟ್ಟಿಗೆಗಳ ಮೂಲಕ ಮತದಾನ ನಡೆಯಲಿದೆ. 5,847 ಚುನಾವಣಾಧಿಕಾರಿಗಳು ಹಾಗೂ 6,085 ಸಹಾಯಕ ಚುನಾವಣಾಧಿಕಾರಿಗಳು ನೇಮಿಸಲಾಗಿದೆ. ಒಟ್ಟು 45,128 ಮತಗಟ್ಟೆಗಳಿದ್ದು, 2,70,768 ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, 45 ಸಾವಿರ ಅಂಗನವಾಡಿ, ಆಶಾ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರನ್ನು ನಿಯೋಜಿಸಲ್ಪಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಜನರಿಗೆ ಅಧಿಕಾರ ಕೊಡಬೇಕು

'ಗ್ರಾಮ ಪಂಚಾಯತ್ ಚುನಾವಣೆ ನಡೆಯಬೇಕು ಎಂದು ನಾವು ಕೋರ್ಟ್ ಮೆಟ್ಟಿಲೇರಿದ್ದೆವು. ನಮ್ಮ ನಿರೀಕ್ಷೆಯಂತೆ ಈಗ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆ. ಈ ಚುನಾವಣೆ ನಡೆಯಬೇಕು ಎಂಬುದು ನಮ್ಮ ಚಿಂತನೆ. ಬಿಬಿಎಂಪಿ ಚುನಾವಣೆಯನ್ನೂ ನಡೆಸಬೇಕು ಎಂಬುದು ನಮ್ಮ ಬಯಕೆ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News