ಉನ್ನತ ಶಿಕ್ಷಣ ಗುಣಮಟ್ಟ ವರ್ಧನೆಗೆ ಮಹತ್ವದ ಹೆಜ್ಜೆ: ಸಿಎಂ ಯಡಿಯೂರಪ್ಪ

Update: 2020-11-30 11:45 GMT

ಬೆಂಗಳೂರು, ನ. 30: ಡಿಜಿಟಲ್ ಕಲಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರವು ದೇಶದಲ್ಲಿಯೇ ಮೊದಲ ಬಾರಿ ಜಾರಿಗೊಳಿಸಿರುವ ಕರ್ನಾಟಕ ಎಲ್‍ಎಂಎಸ್ ಕಾರ್ಯಕ್ರಮದಿಂದ ಸಮಗ್ರ ಉನ್ನತ ಶಿಕ್ಷಣದ ಗುಣಮಟ್ಟ ಹಾಗೂ ಸಾಮಾನ್ಯ ಪ್ರವೇಶಾತಿ ಅನುಪಾತಗಳು ವರ್ಧಿಸಲಿವೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಶಿಕ್ಷಣ ಇಲಾಖೆಯು ರೂಪಿಸಿರುವ ಕರ್ನಾಟಕ ಲರ್ನಿಂಗ್ ಮ್ಯಾನೇಜ್‍ಮೆಂಟ್ ಸಿಸ್ಟಮ್(ಎಲ್‍ಎಂಎಸ್) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್‍ಎಂಎಸ್ ವ್ಯವಸ್ಥೆಯಡಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆಗೆ ಅವಕಾಶ ದೊರೆಯುವುದಲ್ಲದೆ, ರಾಜ್ಯದ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, 87 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳು ಮತ್ತು 14 ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ ಹಾಗೂ ಶಿಕ್ಷಕರ ನಿರಂತರ ಮೌಲ್ಯಮಾಪನ ನಡೆಯುವ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಕ್ರಮದಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳ ಹಾಗೂ ಸುಮಾರು 24 ಸಾವಿರ ಅಧ್ಯಾಪಕರ ಬೋಧನೆ ಮತ್ತು ಕಲಿಕೆಗಳಲ್ಲಿ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ಡಿಜಿಟಲ್ ಕಲಿಕೆ ಯೋಜನೆಯನ್ನು ಒಟ್ಟು 34.14 ಕೋಟಿ ರೂ.ವೆಚ್ಚದಲ್ಲಿ ಎರಡು ರೀತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮೊದಲನೆಯದಾಗಿ, ಎಲ್‍ಎಂಎಸ್ ಆಧಾರಿತ ಡಿಜಿಟಲ್ ಕಲಿಕೆಯ ಅನುಷ್ಠಾನ ಹಾಗೂ ಎರಡನೆಯದಾಗಿ 2500 ಐಸಿಟಿ ಎನೇಬಲ್ಡ್ ತರಗತಿಗಳ ಸ್ಥಾಪನೆಯನ್ನು ಮಾಡಲಾಗುತ್ತದೆ. ಅಪೇಕ್ಷಿತ ಸಮಯ ಹಾಗೂ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಕರ ಸಾಮಗ್ರಿ ದೊರೆಯಲಿದೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಮಾಹಿತಿ ಆಧರಿಸಿ ವಿಶ್ಲೇಷಿಸುವುದು. ಬೋಧನೆ, ಕಲಿಕೆ, ನಿರಂತರ ಪರೀಕ್ಷೆ ಮತ್ತು ತಿದ್ದುಪಡಿ ಕ್ರಮಗಳ ಮೂಲಕ ಬೋಧನೆ-ಕಲಿಕೆಗಳು ಪರಿಷ್ಕರಿಸಲು ಅವಕಾಶವಿದ್ದು, ಶಿಕ್ಷಣಕ್ಕೆ ಪೂರ್ಣತೆ ದೊರೆಯಲಿದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಕರ್ನಾಟಕ ಎಲ್‍ಎಂಎಸ್ ಕಾರ್ಯಕ್ರಮ ರೂಪಿಸಲಾಗಿದೆ. ಈ ವ್ಯವಸ್ಥೆಯಡಿ ವಿದ್ಯಾರ್ಥಿಗಳು ಯಾವ ಸಮಯದಲ್ಲಾದರೂ, ಎಲ್ಲೇ ಇದ್ದರೂ, ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ತಮ್ಮ ಕಲಿಕೆಯ ಪಠ್ಯಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಪ್ರತಿ ವಿದ್ಯಾರ್ಥಿಯ ಮೌಲ್ಯಮಾಪನದ ಮಾಹಿತಿ ಇದರಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈಗ ಸರಕಾರಿ ಎಂಜಿನಿಯರಿಂಗ್, ಪದವಿ, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಟ್ಟು 8 ಸಾವಿರ ತರಗತಿ ಕೊಠಡಿಗಳಿವೆ. ಇವುಗಳ ಪೈಕಿ 2,500 ಕೊಠಡಿಗಳನ್ನು ಕೂಡಲೇ ಅತ್ಯಂತ ವೇಗದ ವೈಫೈ ವ್ಯವಸ್ಥೆ ಇರುವ ಸ್ಮಾರ್ಟ್ ಕ್ಲಾಸ್ ಕೊಠಡಿಗಳನ್ನಾಗಿ ರೂಪಿಸಲಾಗುತ್ತಿದೆ. ಉಳಿದ 5,500 ಕೊಠಡಿಗಳನ್ನು 4 ರಿಂದ 5 ತಿಂಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಪರಿವರ್ತಿಸಲಾಗುವುದು. ಇಷ್ಟೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ಲಕ್ಷ ವಿದ್ಯಾರ್ಥಿಗಳ ಹಾಗೂ ಎಲ್ಲ ಬೋಧಕರು ಏಕಕಾಲದಲ್ಲಿಯೇ ಲಾಗಿನ್ ಆಗಬಹುದು ಎಂದು ಅವರು ಮಾಹಿತಿ ನೀಡಿದರು.

ತಂತ್ರಜ್ಞಾನ ಮತ್ತು ಶಿಕ್ಷಣದಲ್ಲಿ ರಾಜ್ಯ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಈ ಹೆಗ್ಗಳಿಕೆ ಸೇರಿ ಹೊಸ ಗರಿ ಎಂದರೆ, ನೂತನ ಕಲಿಕಾ ನಿರ್ವಹಣಾ ಪದ್ಧತಿ. ಆನ್‍ಲೈನ್, ಆಫ್‍ಲೈನ್‍ನಲ್ಲೂ ಈ ಮೂಲಕ ಕಲಿಯಬಹುದು. ಕೋವಿಡ್ ಕಾರಣದಿಂದ ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಕಲಿಯಬಹುದು. ಯಾವುದೇ ಸಂದರ್ಭದಲ್ಲಿ, ಎಲ್ಲೇ ಇದ್ದರೂ ತಮ್ಮ ವ್ಯಾಸಂಗವನ್ನು ಮುಂದುವರಿಸಬಹುದು. ಡೆಸ್ಕ್ ಸ್ಟಾಪ್, ಆಂಡ್ರಾಯ್ಡ್, ಐಒಎಸ್‍ಗೆ ಪೂರಕವಾಗಿ ಇದನ್ನು ಅಭಿವೃದ್ಧಿಪಡಿಲಾಗಿದೆ. ಇದೆಷ್ಟು ಪರಿಣಾಮಕಾರಿ ಎಂದರೆ, ದಿನಿತ್ಯದ ಕಂಟೆಂಟ್ ನೀಡಿಕೆಯ ಜತೆಗೆ, ವಿದ್ಯಾರ್ಥಿಗಳ ಮೌಲ್ಯಮಾಪನವನ್ನೂ ಮಾಡಬಹುದು. ಅವರ ಕಲಿಕೆಯ ಗುಣಮಟ್ಟವನ್ನು ಪರಿಶೀಲನೆ ಮಾಡಬಹದು ಎಂದು ಅವರುತಿಳಿಸಿದರು.

ಏನಿದು ಕಲಿಕಾ ನಿರ್ವಹಣಾ ವ್ಯವಸ್ಥೆ?: ಕೋವಿಡ್ ಹಿನ್ನೆಲೆಯಲ್ಲಿ ಡಿಜಿಟಲ್ ಕಲಿಕೆಗೆ ಎಲ್ಲಡೆ ಹೆಚ್ಚು ಒತ್ತು ಸಿಗುತ್ತಿದೆ. ಈ ಕಾರಣದಿಂದ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು 2020-21ನೆ ಶೈಕ್ಷಣಿಕ ಸಾಲಿನಲ್ಲಿ ಎಂಎಲೆಸ್ ಆಧಾರಿತ ಡಿಜಿಟಲ್ ಕಲಿಕೆಯನ್ನು 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, 14 ಸರಕಾರಿ ಇಂಜಿನಿಯರಿಂಗ್ ಮತ್ತು 87 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಜಾರಿ ಮಾಡಲಾಗುತ್ತಿದ್ದು, ಈ ಉಪಕ್ರಮದಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳ ಕಲಿಕೆ ಹಾಗೂ 24 ಸಾವಿರ ಅಧ್ಯಾಪಕರ ಬೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಉಂಟಾಗಲಿವೆ. ನಮ್ಮ ಶಕ್ತಿ, ನಮ್ಮ ಭವಿಷ್ಯ ಎನ್ನುವುದು ಈ ಪರಿಕಲ್ಪನೆಯ ಟ್ಯಾಗ್‍ಲೈನ್ ಆಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿಯ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News