ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಜ.6ರಂದು ಖಾಸಗಿ ಶಾಲೆಗಳ ಸಂಘದಿಂದ ಧರಣಿ
ಬೆಂಗಳೂರು, ಜ.5: ಒಂದೇ ಕಂತಿನಲ್ಲಿ ಆರ್ಟಿಇ ಹಣ ಮರು ಪಾವತಿ ಮಾಡಬೇಕು. ಖಾಸಗಿ ಶಾಲಾ ಶಿಕ್ಷಕರ ಹಕ್ಕನ್ನು ಖಾತರಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ವತಿಯಿಂದ ಜ.6(ಇಂದು) ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಖಾಸಗಿ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಖಾಸಗಿ ಶಾಲೆಗಳ ಸಂಘ(ರುಪ್ಸಾ)ದ ವತಿಯಿಂದ ಕಳೆದ ಮೂರು ತಿಂಗಳಿನಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡುತ್ತಾ ಬಂದಿದ್ದೇವೆ. ಆದರೆ, ಸರಕಾರ ನಮ್ಮ ಬೇಡಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು: -ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಶಾಲಾ ಆರಂಭಗೊಂಡಿದ್ದು, ತಕ್ಷಣ ಶೈಕ್ಷಣಿಕ ಕ್ಯಾಲೆಂಡರ್ ಹಾಗೂ ಪಠ್ಯವಸ್ತುವನ್ನು ನಿಗದಿಗೊಳಿಸಿ ತಕ್ಷಣ ಬಿಡಗಡೆ ಮಾಡಬೇಕು.
-1995ರಿಂದ 2010ರವರೆಗಿನ ಎಲ್ಲ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸರಕಾರದ ಅನುದಾನಕ್ಕೊಳಪಡಿಸಬೇಕು.
-ಕಳೆದ 9 ತಿಂಗಳಿನಿಂದ ಖಾಸಗಿ ಶಾಲಾ ನೌಕರರು ಸಂಬಳವಿಲ್ಲದೆ ಕಷ್ಟದಲ್ಲಿದ್ದಾರೆ. ಅವರಿಗೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕನಿಷ್ಠ ಮಾಸಿಕ 10ಸಾವಿರ ರೂ.ನಂತೆ 9ತಿಂಗಳ ಪ್ಯಾಕೇಜ್ ನೀಡಬೇಕು.
-ಖಾಸಗಿ ಶಾಲೆಗಳ ಅಭಿವೃದ್ಧಿಗೆ ತಮಿಳುನಾಡು ಮಾದರಿಯಂತೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು.