ಶ್ರೀಲಂಕಾದಲ್ಲಿ ನಾಲ್ವರು ಭಾರತೀಯ ಮೀನುಗಾರರ ಮೃತದೇಹ ಪತ್ತೆ

Update: 2021-01-22 03:46 GMT

ತಿರುಚ್ಚಿ, ಜ.22: ತಮಿಳುನಾಡಿನ ಪುದುಕೊಟ್ಟಿ ಜಿಲ್ಲೆಯ ಕೊತ್ತಿಯಾಪಟ್ಟಣಂ ಜೆಟ್ಟಿಯಿಂದ ಕಳೆದ ಸೋಮವಾರ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಮೃತದೇಹಗಳು ಶ್ರೀಲಂಕಾದ ಕಡಲ ತೀರದಲ್ಲಿ ಗುರುವಾರ ಪತ್ತೆಯಾಗಿದೆ ಎಂದು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಮಾಹಿತಿ ನೀಡಿದೆ.

ಈ ಮೀನುಗಾರರು ಸಮುದ್ರ ಮಧ್ಯದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಶ್ರೀಲಂಕಾ ಸೇನೆ ದಾಳಿ ಮಾಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸಂತ್ರಸ್ತರನ್ನು ಕರೆತರುವ ದೋಣಿಯ ಜತೆಗೆ ಆಗಮಿಸಲು ಮುಂದಾಗಿರುವ ಮೀನುಗಾರರ ಗುಂಪು ಆಪಾದಿಸಿದೆ.

ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಗುರುವಾರ ಭಾರತೀಯ ಹೈಕಮಿಷನ್‌ಗೆ ಮಾಹಿತಿ ನೀಡಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ ಎಂಬ ಮಾಹಿತಿ ನೀಡಿದೆ. ಆದರೆ ಮೀನುಗಾರರು ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಮೀನುಗಾರರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಆಗ್ರಹಿಸಿದ್ದಾರೆ ಹಾಗೂ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಶ್ರೀಲಂಕಾ ಜತೆ ಈ ವಿಷಯವನ್ನು ಚರ್ಚಿಸುವಂತೆ ಕೋರಿದ್ದಾರೆ.

ಮೃತ ಮೀನುಗಾರರನ್ನು ಎ.ಮೆಸಿಯಾ, ವಿ.ನಾಗರಾಜ್, ಎಸ್.ಸೆಂಥಿಲ್ ಕುಮಾರ್ ಮತ್ತು ಎನ್.ಸ್ಯಾಮ್ಸನ್ ಡಾರ್ವಿನ್ ಎಂದು ಗುರುತಿಸಲಾಗಿದ್ದು, ಎಲ್ಲರೂ ರಾಮನಾಥಪುರಂ ಜಿಲ್ಲೆಯವರು. ಸೋಮವಾರ ಜೆಟ್ಟಿಯಿಂದ ಮೀನುಗಾರಿಕೆಗೆ ತೆರಳಿದ್ದ 214 ದೋಣಿಗಳ ಪೈಕಿ ಇವರ ದೋಣಿಯೂ ಸೇರಿತ್ತು ಎಂದು ತಿಳಿದುಬಂದಿದೆ.

ಕಚ್ಚತೀವು ಎಂಬಲ್ಲಿ ಶ್ರೀಲಂಕಾ ನೌಕಾಪಡೆ ಈ ದೋಣಿಯ ಮೇಲೆ ದಾಳಿ ನಡೆಸಿದ್ದಾಗಿ ಸಹ ಮೀನುಗಾರ ಜಿ.ಆರೋಕ್ಯರಾಜ್ ಆಪಾದಿಸಿದ್ದಾರೆ.

"ಶ್ರೀಲಂಕಾ ಸೇನೆಯ ದೊಡ್ಡ ನಾವೆಗಳನ್ನು ಈ ದೋಣಿಗೆ ಢಿಕ್ಕಿ ಹೊಡೆಸಲಾಯಿತು. ನಮ್ಮ ಸಹಚರರನ್ನು ರಕ್ಷಿಸಲು ನಮ್ಮಲ್ಲಿ ಕೆಲವರು ಪ್ರಯತ್ನಿಸಿದೆವು. ಆದರೆ ಜೀವಭಯದಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯವಾಯಿತು. ನಾವು ವಾಪಸ್ಸಾಗಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆವು" ಎಂದು ವಿವರಿಸಿದ್ದಾರೆ.

ಮರುದಿನ ಮೀನುಗಾರರು ಹಾಗೂ ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News