ಮುಸ್ಲಿಮರ ಶೇ.4ರ ಮೀಸಲಾತಿಯೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ: ಡಾ.ಸಿ.ಎಸ್.ದ್ವಾರಕನಾಥ್

Update: 2021-03-02 17:29 GMT

ಬೆಂಗಳೂರು, ಮಾ.2: ಮುಸ್ಲಿಮರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದು, ಅವರಿಗೆ ಹಿಂದುಳಿದ ವರ್ಗದ ಅಡಿಯಲ್ಲಿ ನೀಡಿರುವ ಶೇ.4ರ ಮೀಸಲಾತಿಯೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ವಿಷಾದಿಸಿದ್ದಾರೆ. 

ಮಂಗಳವಾರ ಬೆಂಗಳೂರಿನ ವೀರಶೈವ ಮಹಾಸಭಾದ ಸಭಾಂಗಣದಲ್ಲಿ ಕರ್ನಾಟಕ ಮುಸ್ಲಿಮ್ ಜಮಾತ್ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮೀಸಲಾತಿ ಮೊದಲು ತತ್ವದ ರೂಪದಲ್ಲಿ ರಾಜ್ಯದಲ್ಲಿ ಜಾರಿಗೆ ಬಂದದ್ದು ಮೈಸೂರು ಹುಲಿ ಟಿಪ್ಪೂ ಸುಲ್ತಾನ್ ಕಾಲದಲ್ಲಿ. ಅವರು ಅದನ್ನು ಮೀಸಲಾತಿ ಅಂತ ಕರೆಯಲಿಲ್ಲ. ಪ್ರಾತಿನಿಧ್ಯ ಎಂದು ಕರೆದರು. ಸಮಾಜದಲ್ಲಿ ಯಾರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲವೋ ಅವರಿಗೆ ಪ್ರಾತಿನಿಧ್ಯ ಕೊಡೋದು. ಅದನ್ನೇ ಶಾಸನಬದ್ಧವಾಗಿ ಮೀಸಲಾತಿ ರೂಪದಲ್ಲಿ ಜಾರಿಗೆ ತಂದದ್ದು ಮೈಸೂರಿನ ಒಡೆಯರ್ ಅವರು. ಜಸ್ಟಿಸ್ ಮಿಲ್ಲರ್ ಆಯೋಗವನ್ನು ಅದಕ್ಕಾಗಿ ನೇಮಿಸಿದರು. ಆಗ ಎಲ್ಲ ಹುದ್ದೆಗಳಲ್ಲೂ ಬ್ರಾಹ್ಮಣರೇ ತುಂಬಿದ್ದರು. ಹೀಗಾಗಿ, ಇತರ ಜಾತಿಯವರಿಗೆ ಶೇ.50ರಷ್ಟು ಮೀಸಲಾತಿಯನ್ನು ಮೈಸೂರು ಒಡೆಯರ್ ಅವರು ಕಲ್ಪಿಸಿದರು ಎಂದು ದ್ವಾರಕಾನಾಥ್ ವಿವರಿಸಿದರು.

ಅಂಬೇಡ್ಕರ್ ಅವರು ಮೀಸಲಾತಿಗೆ ಜಾತಿಗಳನ್ನು ಪರಿಗಣಿಸಲಿಲ್ಲ, ವರ್ಗಗಳನ್ನು ಪರಿಗಣಿಸಿದ್ದರು. ವೃತ್ತಿಮೂಲವಾದ ವರ್ಗಗಳನ್ನು ಪರಿಗಣಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ಹಿಂದುಳಿದ ವೃತ್ತಿ ಸಮುದಾಯಗಳಿವೆ. ಇವುಗಳ ಕುರಿತು ಕುಲಶಾಸ್ತ್ರೀಯ ಅಧ್ಯಯನ ತುರ್ತಾಗಿ ಆಗಬೇಕಾಗಿದೆ. ಮುಸ್ಲಿಂ ಮುಖಂಡರು ಈ ಕುರಿತು ತಕ್ಷಣ ಗಮನಿಸಬೇಕು ಎಂದು ಅವರು ಸಲಹೆ ನೀಡಿದರು.

ವಿಚಾರ ಸಂಕಿರಣದ ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರು, ಮುಸ್ಲಿಮ್ ಸಮುದಾಯದಲ್ಲಿ ಮೀಸಲಾತಿ ಕುರಿತು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಸಮುದಾಯದ ರಾಜಕೀಯ ನಾಯಕರು ಈ ಕೆಲಸದಲ್ಲಿ ವಿಫಲರಾಗಿದ್ದಾರೆ. ಈಗಾಗಲೆ ರಾಜ್ಯದಲ್ಲಿ ನಾಗನಗೌಡ ವರದಿ, ವೆಂಕಟಸ್ವಾಮಿ ಮತ್ತು ಚಿನ್ನಪ್ಪರೆಡ್ಡಿ ಆಯೋಗದ ವರದಿಗಳಲ್ಲಿ ಮುಸ್ಲಿಮರಲ್ಲಿರುವ ಅತ್ಯಂತ ಹಿಂದುಳಿದ ಸುಮಾರು 25ಕ್ಕೂ ಹೆಚ್ಚು ವೃತ್ತಿಗುಂಪುಗಳನ್ನು ಗುರುತಿಸಲಾಗಿದೆ. ಈ ವೃತ್ತಿಗುಂಪುಗಳ ಜನರಿಗೇ ರಾಜ್ಯದಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ 2000 ಕೋಟಿ ರೂಪಾಯಿ ಅನುದಾನ ಒದಗಿಸಬೇಕು ಎಂದು ಹನೀಫ್ ಆಗ್ರಹಿಸಿದರು. ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ ಮೌಲಾನಾ ಶಬೀರ್ ರಜ್ವಿ, ಖಾಝಿ ಝುಲ್ಫಿಕರ್ ನೂರಿ ಉಪಸ್ಥಿತರಿದ್ದರು. 

ಮುಸ್ಲಿಮರ ಕುಲಮೂಲ ಸಮೀಕ್ಷೆ ನಡೆಸಲು ಆಗ್ರಹ
‘ರಾಜ್ಯ ಅಲ್ಪಸಂಖ್ಯಾತರ ಆಯೋಗವು ವಿಶ್ವವಿದ್ಯಾಲಯವೊಂದರ ನೆರವಿನೊಂದಿಗೆ ಶೀಘ್ರವೇ ರಾಜ್ಯದ ಮುಸ್ಲಿಮರ ಕುಲಮೂಲ ಸಮೀಕ್ಷೆಯೊಂದನ್ನು ನಡೆಸಬೇಕು. ರಾಜ್ಯದಲ್ಲಿ ಅಲ್ಪಸಂಖ್ಯಾತ ಆಯೋಗದ ಬದಲಿಗೆ ನ್ಯಾ.ರಾಜಿಂದರ್ ಸಾಚಾರ್ ವರದಿ ಸೂಚಿಸಿದಂತೆ ರಾಜ್ಯ ಸಮಾನ ಅವಕಾಶ ಆಯೋಗವನ್ನು ಸ್ಥಾಪಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.’

'ಮೀಸಲಾತಿ ಎನ್ನುವುದು ಬಡತನ ಹೋಗಲಾಡಿಸುವ ಕಾರ್ಯಕ್ರಮ ಅಲ್ಲ'
‘ಮೀಸಲಾತಿ ಎನ್ನುವುದು ಬಡತನ ಹೋಗಲಾಡಿಸುವ ಕಾರ್ಯಕ್ರಮ ಅಲ್ಲ. ಅದನ್ನು ಖುಷಿ ಬಂದ ರೀತಿಯಲ್ಲಿ ಕೊಡಲು ಸಾಧ್ಯವಿಲ್ಲ. ಸಾಮಾಜಿಕವಾಗಿ ಹಿಂದುಳಿದವರಿಗೆ ನೀಡಬೇಕಾಗಿರುವುದು ಮೀಸಲಾತಿ ಅಲ್ಲ, ಸಮಾನ ಪ್ರಾತಿನಿಧ್ಯ. ಅಂಬೇಡ್ಕರ್ ಅವರು ಹೇಳಿದ್ದೂ ಇದನ್ನೇ. ಯಾವ ಕ್ಷೇತ್ರದಲ್ಲಿ ಯಾರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲವೋ ಅದನ್ನು ಒದಗಿಸುವುದು ಮೀಸಲಾತಿಯ ನೈಜ ಉದ್ದೇಶವಾಗಿದೆ.’
-ಡಾ.ಸಿ.ಎಸ್.ದ್ವಾರಕಾನಾಥ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News