ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಪೊಲೀಸರ ಪಿಸ್ತೂಲ್ ಸೆಳೆದು ಪರಾರಿಯಾಗಲು ಯತ್ನಿಸಿದ ಆರೋಪಿಗೆ ಗುಂಡೇಟು

Update: 2021-04-03 11:18 GMT

ಮೀರತ್: ಉತ್ತರ ಪ್ರದೇಶದ ಮೀರತ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ಯುತ್ತಿರುವ ಸಂದರ್ಭ ಅವರು ಪೊಲೀಸರ ಬಳಿಯಿದ್ದ ಪಿಸ್ತೂಲನ್ನೇ ಸೆಳೆದು ತಪ್ಪಿಸಿಕೊಳ್ಳಲೆತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಅವರಲ್ಲೊಬ್ಬಾತನ ಕಾಲಿಗೆ ಗಾಯವಾಗಿದೆ.

ಆರೋಪಿಗಳಾದ ಲಖನ್ ಹಾಗೂ ವಿಕಾಸ್ ಎಂಬಿಬ್ಬರನ್ನು ಇಂದು ಕಪ್ಸಡ್ ಗ್ರಾಮದ ಸಮೀಪ ಬಂಧಿಸಲಾಗಿತ್ತು. ನಂತರ  ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ಯುತ್ತಿದ್ದ ಸಂದರ್ಭ ಲಖನ್ ಪೊಲೀಸ್ ಇನ್‍ಸ್ಪೆಕ್ಟರ್ ಒಬ್ಬರ ಪಿಸ್ತೂಲ್ ಸೆಳೆದಿದ್ದನಲ್ಲದೆ ಪೊಲೀಸರ ಮೇಲೆಯೇ ಗುಂಡು ಹಾರಿಸಲು ಯತ್ನಿಸಿದ್ದ. ಪ್ರತಿ ದಾಳಿ  ನಡೆಸಿದ ಪೊಲೀಸರು ಲಖನ್ ಕಾಲಿಗೆ ಗುಂಡು ಹೊಡೆದಿದ್ದಾರೆ. ನಂತರ ಇಬ್ಬರನ್ನೂ ಮರುವಶ ಪಡೆದುಕೊಳ್ಳಲಾಯಿತು. ಗಾಯಾಳು ಲಖನ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ಇತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತೆಗೆ ಆರೋಪಿಗಳು ವಿಷಕಾರಿ ವಸ್ತುವನ್ನು ಬಲವಂತವಾಗಿ ಕುಡಿಸಿದ ಪರಿಣಾಮ ಆಕೆ ಮೃತಪಟ್ಟಳೆಂದು ಆಕೆಯ ಕುಟುಂಬ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News