ಕೇಂದ್ರ ಪಡೆಯಿಂದ ನಾಲ್ವರ ಹತ್ಯೆ: ನಮ್ಮ ಭಯ ನಿಜವಾಗಿದೆ ಎಂದ ಮಮತಾ
Update: 2021-04-10 09:38 GMT
ಕೋಲ್ಕತಾ: ಕೂಚ್ ಬಿಹಾರ್ ನ ಸಿಟಾಲ್ಕುಚಿಯಲ್ಲಿ ಸಿಐಎಸ್ ಎಫ್ ಗುಂಡಿನ ದಾಳಿಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ನಮ್ಮ ಕೆಟ್ಟ ಭಯ ನಿಜವಾಗುತ್ತಿವೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸಿಐಎಸ್ ಎಫ್ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಕಿಡಿಕಾರಿದ ಮಮತಾ, ಗೃಹ ಸಚಿವರು ಕೇಂದ್ರ ಭದ್ರತಾ ಪಡೆಗಳ ಮೇಲೆ ಪ್ರಭಾವಬೀರುತ್ತಿದ್ದಾರೆ ಎಂದರು.
"ಇಂದು ನಾಲ್ಕು ಜನರನ್ನು ಕೊಲ್ಲಲಾಗಿದೆ. ಸಿಆರ್ ಪಿಎಫ್ ಮತದಾನದ ಸಾಲಿನಲ್ಲಿ ನಿಂತಿದ್ದ ನಾಲ್ವರನ್ನು ಕೊಂದಿದೆ. ಬಿಜೆಪಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಹೀಗಾಗಿಯೇ ಅದು ಮತದಾರರನ್ನು ಕೊಲ್ಲುತ್ತಿದೆ. ಶಾಂತಿ ಕಾಪಾಡಲು ನಾನು ಎಲ್ಲರನ್ನೂ ಕೋರುತ್ತೇನೆ. ಮತದಾರರನ್ನು ಬೆದರಿಸಲು ಕೇಂದ್ರ ಭದ್ರತಾ ಪಡೆಗೆ ಅಮಿತ್ ಶಾ ಏಕೆ ಸೂಚಿಸುತ್ತಿದ್ದಾರೆ? ನಾವು ಇದಕ್ಕೆ ಸೇಡು ತೀರಿಸಿಕೊಳ್ಳಬೇಕು. ಪ್ರತೀಕಾರವೆಂದರೆ ಬಿಜೆಪಿ ವಿರುದ್ಧ ಮತಚಲಾಯಿಸುವುದು'' ಎಂದು ಮಮತಾ ಹೇಳಿದರು.