ರಾತ್ರಿ ಕರ್ಫ್ಯೂ ಮುಂದುವರಿಕೆ, ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಬಗ್ಗೆ ಎ.20ರಂದು ತೀರ್ಮಾನ: ಸಿಎಂ ಬಿಎಸ್‌ವೈ

Update: 2021-04-16 12:48 GMT

ಬೆಂಗಳೂರು, ಎ.16: ಕೋವಿಡ್ ಈ ಮಹಾಮಾರಿ ಬೆಂಗಳೂರಿನಲ್ಲಿ ಮಿತಿಮೀರಿ ಹೋಗುತ್ತಿದೆ. ಕೆಲವು ಜಿಲ್ಲಾ ಕೇಂದ್ರಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ವಿಧಿಸಿರುವ ‘ಕೊರೋನ ರಾತ್ರಿ ಕರ್ಫ್ಯೂ’ ಅನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ತಮ್ಮ ಸರಕಾರಿ ನಿವಾಸ ಕಾವೇರಿಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ಒಂದೂವರೆ ಗಂಟೆಗಳ ಕಾಲ ಅಧಿಕಾರಿಗಳು ಹಾಗೂ ತಜ್ಞರು ಕೊಟ್ಟಿರುವ ಅಭಿಪ್ರಾಯದ ಕುರಿತು ಚರ್ಚೆ ಮಾಡಿದ್ದೇನೆ ಎಂದರು.

ರಾತ್ರಿ ಕರ್ಫ್ಯೂ ಹಾಕಿರುವುದನ್ನು ಮುಂದುವರಿಸುತ್ತೇವೆ. ಬೇರೆ ಯಾವ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಬೇಕು ಎಂಬುದರ ಕುರಿತು ಆಲೋಚನೆ ಮಾಡುತ್ತಿದ್ದೇವೆ. ಎ.20ರ ನಂತರ ಮತ್ತೊಮ್ಮೆ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುವುದು. ಅದಲ್ಲದೆ, ಪ್ರಧಾನಿ ನೀಡುವ ಸಲಹೆ, ಬೇರೆ ಬೇರೆ ರಾಜ್ಯಗಳಲ್ಲಿ ಏನೇನು ತೀರ್ಮಾನ ಕೈಗೊಳ್ಳಲಾಗಿದೆ ಎಂಬುದನ್ನ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ನಮ್ಮ ರಾಜ್ಯವನ್ನು ದಿಲ್ಲಿ, ರಾಜಸ್ಥಾನ ಸೇರಿದಂತೆ ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡುವುದು ಬೇಡ. ನಮ್ಮ ರಾಜ್ಯದಲ್ಲಿ ಸೋಂಕು ಹರಡುವ ಕುರಿತು ಬೇರೆಯೇ ಕಾರಣಗಳಿವೆ. ಆದುದರಿಂದ, ಎ.20ರ ನಂತರ ಮತ್ತೊಮ್ಮೆ ಚರ್ಚೆ ಮಾಡಿ ಸೂಕ್ತವಾದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಸಭೆಯಲ್ಲಿ ಕೈಗೊಂಡ ತೀರ್ಮಾನಗಳು: ಕಾರ್ಪೋರೇಟ್ ವಲಯದ ಆಸ್ಪತ್ರೆಗಳು ತಮ್ಮ ಹತ್ತಿರದ ಹೊಟೇಲ್‍ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಡಿಮೆ ರೋಗ ಲಕ್ಷಣಗಳುಳ್ಳ ರೋಗಿಗಳಿಗೆ ನೋಡಿಕೊಳ್ಳಲು ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸಲು ಕ್ರಮ ವಹಿಸಬೇಕು. ಹೆಚ್ಚು ರೋಗ ಲಕ್ಷಣಗಳುಳ್ಳ ಅಗತ್ಯವಿರುವ ರೋಗಿಗಳನ್ನು ಮಾತ್ರ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಸರಕಾರದಿಂದ ದಾಖಲಿಸುವ ರೋಗಿಗಳಿಗೆ ಕಾಯ್ದಿರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1,000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ 1,000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸಬೇಕು.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5,000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸಬೇಕು. ಅಗತ್ಯವಿರುವ ರೋಗಿಗಳಿಗೆ ಕೂಡಲೇ ಚಿಕಿತ್ಸೆ ನೀಡಲು ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಐ.ಪಿ.ಎಸ್. ಮತ್ತು ಐ.ಎ.ಎಸ್. ಅಧಿಕಾರಿಗಳನ್ನು ಹಾಗೂ ಬಿ.ಡಬ್ಲ್ಯೂ.ಎಸ್.ಎಸ್.ಬಿ., ಬೆಸ್ಕಾಂ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಬೇಕು.

ಕೊರೋನ ವೈರಸ್‍ನಿಂದ ತೀವ್ರತರವಾಗಿ ಬಳಲುತ್ತಿರುವ ರೋಗಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು. ಉಳಿದಂತೆ ಕೊರೋನ ಲಕ್ಷಣಗಳಿಲ್ಲದ ರೋಗಿಗಳಿಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಬೇಕು ಹಾಗೂ ಅಗತ್ಯವಿರುವಷ್ಟು ದಿನಗಳು ಮಾತ್ರ ರೋಗಿಗಳನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದ ಕೂಡಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಬೇಕು.

ರಾಜ್ಯದಲ್ಲಿ ಸದ್ಯಕ್ಕೆ ರೆಮಿಡಿಸ್ವಿರ್ ಕೊರತೆ ಇಲ್ಲ. ಆದಾಗ್ಯೂ ಹೆಚ್ಚುವರಿ ಡೋಸ್‍ಗಳನ್ನ ಖರೀದಿ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದನ್ನು ಅಂತಿಮಗೊಳಿಸಿ ಹೆಚ್ಚುವರಿ ಡೋಸ್‍ಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಪ್ರಸಕ್ತ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಆದಾಗ್ಯೂ 5,000 ಆಕ್ಸಿಜನ್ ಸಿಲಿಂಡರ್ ಗಳ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು.

ಪದೇ ಪದೇ ಆಕ್ಸಿಜನ್ ಸಿಲಿಂಡರ್ ಗಳ ಬದಲಾವಣೆ ತಪ್ಪಿಸಲು ಜಂಬೋ ಸಿಲಿಂಡರ್ ಳನ್ನು ಖರೀದಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಈಗಾಗಲೇ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದು, ಅದೇ ರೀತಿಯಾಗಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಟೆಂಡರ್ ಕರೆದಿದ್ದು, ಕೂಡಲೇ ಅದನ್ನು ಅಂತಿಮಗೊಳಿಸಿ ಘಟಕ ಸ್ಥಾಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕು.

ಮುಂಚೂಣಿ ಕಾರ್ಯಕರ್ತರಾದ ವೈದ್ಯರು, ನರ್ಸ್ ಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕೂಡಲೇ ಕ್ರಮ ಕೈಗೊಳ್ಳಬೇಕು. ರಾಜ್ಯಾದ್ಯಂತ ಕಾಂಟ್ಯಾಕ್ಟ್ ಟ್ರೇಸಿಂಗ್ ಅನ್ನು ತ್ವರಿತಗೊಳಿಸಬೇಕು. ಹೋಮ್ ಐಸೋಲೇಷನ್ ಇರುವ ರೋಗಿಗಳಿಗೆ ಮುದ್ರೆ ಹಾಕಲು ಕ್ರಮ ಕೈಗೊಳ್ಳಬೇಕು. ಪ್ರತಿದಿನ ನಡೆಸುವ ಕೋವಿಡ್ ಟೆಸ್ಟ್ ಫಲಿತಾಂಶವು (ಟೆಸ್ಟ್ ರಿಪೋರ್ಟ್) 24 ಗಂಟೆಯೊಳಗಾಗಿ ತಪ್ಪದೇ ಲಭ್ಯವಾಗುವಂತೆ ಕ್ರಮವಹಿಸಬೇಕು ಮತ್ತು ಟೆಸ್ಟಿಂಗ್ ಅವಧಿಯನ್ನು ಇನ್ನೂ ಕಡಿಮೆಗೊಳಿಸಲು ಕೂಡಲೇ ಅಗತ್ಯ ಕ್ರಮ ವಹಿಸಬೇಕು.

ಕಂಟೈನ್ಮೆಂಟ್ ಝೋನ್‍ಗಳನ್ನು ಮತ್ತು ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅನಗತ್ಯವಾಗಿ ಜನ ಗುಂಪು ಸೇರುವುದನ್ನು ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳಬೇಕು. ಬೇಡಿಕೆಗನುಗುಣವಾಗಿ ಉಚಿತವಾಗಿ 108 ಸೇರಿದಂತೆ ಅಗತ್ಯ ಆಂಬ್ಯುಲೆನ್ಸ್ ಗಳನ್ನು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೆಂದ್ರಗಳಲ್ಲೂ ಲಭ್ಯವಿರುವಂತೆ ನೋಡಿಕೊಳ್ಳಬೇಕು.

ಬೆಂಗಳೂರು ನಗರದಲ್ಲಿ ಒಟ್ಟಾರೆಯಾಗಿ 400 ಆಂಬ್ಯುಲೆನ್ಸ್ ಗಳನ್ನು ಕೋವಿಡ್ ರೋಗಿಗಳಿಗೋಸ್ಕರ ಉಚಿತವಾಗಿ ಸೇವೆ ಒದಗಿಸಲು ಮೀಸಲಿರಿಸಬೇಕು. ಬೆಂಗಳೂರು ನಗರದಲ್ಲಿ ಕೋವಿಡ್‍ನಿಂದಾಗಿ ಮೃತಪಟ್ಟ ಶವಗಳನ್ನು ಸಾಗಿಸಲು 49 ಆಂಬ್ಯುಲೆನ್ಸ್ ಗಳನ್ನು ಉಚಿತವಾಗಿ ಸೇವೆ ಒದಗಿಸಲು ಮೀಸಲಿರಿಸಬೇಕು.

ಚಿತಾಗಾರಗಳಲ್ಲಿ ಕೋವಿಡ್‍ನಿಂದಾಗಿ ಮೃತಪಟ್ಟ ಶವಗಳ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸಬೇಕು. ಬಿಬಿಎಂಪಿಯು ತನ್ನ ಎಲ್ಲ ವಲಯಗಳ ಮತ್ತು ನಿಯಂತ್ರಣ ಕೊಠಡಿಗಳನ್ನು ಸಜ್ಜುಗೊಳಿಸಿ ಕೋವಿಡ್ ರೋಗಿಗಳ ಸಹಾಯಕ್ಕೆ ಸದಾ ಬದ್ಧರಾಗಿರುವಂತೆ ಕ್ರಮ ವಹಿಸಬೇಕು ಹಾಗೂ ಸಹಾಯವಾಣಿಗಳಿಗೆ ನುರಿತ ವ್ಯಕ್ತಿಗಳನ್ನು ನೇಮಿಸಿ ಸದೃಢಗೊಳಿಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರೋಗ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News