ಆಂಧ್ರಪ್ರದೇಶ: 2 ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಮಕ್ಕಳ ಸಹಿತ 10 ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2021-04-16 07:15 GMT

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಗುರುವಾರ ಒಂದೇ ಕುಟುಂಬದ ಆರು ಮಂದಿ ಹಾಗೂ ಮತ್ತೊಂದು ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ವೈಜಾಗ್ ನ ಮಿಥಿಲಾಪುರಿ ಕಾಲೊನಿಯಲ್ಲಿ 51 ವರ್ಷದ ಸುಂಕರಿ ಬಂಗಾರು ನಾಯ್ದು, ಹೋಮಿಯೋಪಥಿಯಾಗಿದ್ದ ಅವರ ಪತ್ನಿ ಸುಂಕರಿ ನಿರ್ಮಲಾ ಹಾಗೂ ಅವರ ಇಬ್ಬರು ಪುತ್ರರಾದ ದೀಪಕ್(19), ಕಶ್ಯಪ್(29)ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ನಾಯ್ದು ಅವರು ಈ ಮೊದಲು 10 ವರ್ಷಗಳ ಕಾಲ ಬಹರೈನ್ ನಲ್ಲಿ ಕೆಲಸ ಮಾಡಿದ್ದರು ಎಂದು ವರದಿಯಾಗಿದೆ.

ದಂಪತಿ ಹಾಗೂ ಅವರ ಕಿರಿಯ ಮಗನ ಶವಗಳ ಮೇಲೆ ಇರಿತದ ಗಾಯವಾಗಿದ್ದರೆ, ಹಿರಿಯ ಮಗ ಸೂಟ್ ಹಾಗೂ ಟೈ ಧರಿಸಿದ ಸ್ಥಿತಿಯಲ್ಲಿ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಿರಿಯ ಮಗ ತೀವ್ರ ವಾಗ್ವಾದದ ಬಳಿಕ ಮನೆಯ ಇತರ ಸದಸ್ಯರಿಗೆ ದಾಳಿ ನಡೆಸಿದ್ದು, ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದು, ಆ ಬಳಿಕ ತಪ್ಪಿಸಿಕೊಳ್ಳಲು ವಿಫಲವಾಗಿರಬಹುದು ಎಂದು ಶಂಕಿಸಲಾಗಿದೆ.

ಪೆಂಡೂರ್ತಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಮನೆಯೊಂದರಲ್ಲಿ ಆರು ಶವಗಳು ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಮೃತಪಟ್ಟವರಲ್ಲಿ 2 ವರ್ಷದ ಮಗು ಹಾಗು ಆರು ತಿಂಗಳ ಶಿಶು ಕೂಡ ಸೇರಿದೆ. ಕೃತ್ಯಕ್ಕೆ ಸಂಬಂಧಿಸಿ 49 ವರ್ಷ ಅಪ್ಪಲರಾಜು ಎಂಬಾತನನ್ನು ಬಂಧಿಸಲಾಗಿದೆ. 

ಅಪ್ಪಲರಾಜುವಿನ ನೆರೆಮನೆಯಾತ 33 ವರ್ಷದ ವ್ಯಕ್ತಿ ವಿವಾಹಿತನಾಗಿದ್ದು,ಆತನಿಗೆ ಮೂವರು ಮಕ್ಕಳಿದ್ದರು. ಆತ ಅಪ್ಪಲರಾಜುವಿನ ಮಗಳ ಮೇಲೆ ಅತ್ಯಾಚಾರ ನಡೆಸಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಘಟನೆಯ ವೇಳೆ ಅತ್ಯಾಚಾರ ಆರೋಪಿ ಹಾಗೂ ಆತನ ಮಗ ಮನೆಯಲ್ಲಿರಲಿಲ್ಲ.

ಅಪ್ಪಲರಾಜು ಕುಡಗೋಲಿನಿಂದ ಅತ್ಯಾಚಾರ ಆರೋಪಿಯ ಪತ್ನಿ, ಇಬ್ಬರು ಎಳೆಯ ಮಕ್ಕಳು, ಆತನ ತಂದೆ, ಅತ್ತೆ ಹಾಗೂ ಇನ್ನೊಬ್ಬ ಕುಟುಂಬ ಸದಸ್ಯನನ್ನು ಹತ್ಯೆ ಮಾಡಿದ್ದಾನೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News