ಜ್ಯೋತಿಷಿಗಳ ಮಾತಿನಂತೆ 2022ರಲ್ಲಿ ನಡೆಯಬೇಕಾಗಿದ್ದ ಕುಂಭಮೇಳವನ್ನು 2021ರಲ್ಲೇ ನಡೆಸಿದ ನಾಯಕರು !

Update: 2021-04-27 13:08 GMT

ಹೊಸದಿಲ್ಲಿ,ಎ.26: ಕೊರೋನವೈರಸ್ ನ ಎರಡನೇ ಅಲೆಯೊಂದಿಗೆ ಉತ್ತರಾಖಂಡದ ಹರಿದ್ವಾರದಲ್ಲಿಯ ಕುಂಭಮೇಳವು ಸಾಂಕ್ರಾಮಿಕದ ‘ಸೂಪರ್ ಸ್ಪ್ರೆಡರ್ ’ ಆಗಿ ಪರಿಣಮಿಸಿದೆ. ಕುಂಭಮೇಳಗಳು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತವೆ. ಹರಿದ್ವಾರದಲ್ಲಿ ಹಿಂದಿನ ಕುಂಭಮೇಳ ಜರುಗಿದ್ದು 2010ರಲ್ಲಿ. ವಾಸ್ತವದಲ್ಲಿ ಈಗಿನ ಕುಂಭಮೇಳ 2022ರಲ್ಲಿ ನಡೆಯಬೇಕಿತ್ತೇ ಹೊರತು 2021ರಲ್ಲಿ ಅಲ್ಲ. 

ಹೀಗಿರುವಾಗ ದೇಶದಲ್ಲಿ ಕೊರೋನವೈರಸ್ ನ ಎರಡನೇ ಅಲೆಯ ನಿರೀಕ್ಷೆಯಿದ್ದಾಗ ಮತ್ತು ಸೋಂಕಿನ ಎರಡನೇ ಅಲೆಗಳು ಯಾವಾಗಲೂ ಮೊದಲ ಅಲೆಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತವೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರ ಅಧ್ಯಯನಗಳು ಬೆಟ್ಟು ಮಾಡಿರುವಾಗ ಹರಿದ್ವಾರ ಕುಂಭಮೇಳವನ್ನು ಒಂದು ವರ್ಷ ಹಿಂದೂಡಿದ್ದು ಏಕೆ? ಇದಕ್ಕೆ ನಮ್ಮ ನಾಯಕರು ಯಾವುದೇ ವಿವೇಚನೆಯಿಲ್ಲದೆ ಜ್ಯೋತಿಷಿಗಳ ಮಾತಿಗೆ ಮಣೆ ಹಾಕಿದ್ದು ಪ್ರಮುಖ ಕಾರಣವಾಗಿದೆ ಎನ್ನುವುದನ್ನು ಸುದ್ದಿ ಜಾಲತಾಣ The Wire ನ ಅಂಕಣಕಾರ ಶುದ್ಧವ್ರತ ಸೇನಗುಪ್ತಾ ಅವರು ತನ್ನ ಲೇಖನದಲ್ಲಿ ಬಯಲಿಗೆಳೆದಿದ್ದಾರೆ. 

2021ನೇ ಸಾಲಿನ ಎ.13-14ರ ರಾತ್ರಿ ಸೂರ್ಯನು ಮೇಷರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಗುರುವು ಕುಂಭರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಈ ಮುಹೂರ್ತವು ಕುಂಭಮೇಳಕ್ಕೆ ಪ್ರಶಸ್ತವಾಗಿದೆ ಎಂದು ಜ್ಯೋತಿಷಿಗಳು ಹೇಳಿದ್ದರು. ಈ ವಿದ್ಯಮಾನವು ಪ್ರತಿ 83 ವರ್ಷಗಳಿಗೊಮ್ಮೆ ನಡೆಯುತ್ತದೆ.

ಕುಂಭಮೇಳವನ್ನು ಕೋವಿಡ್-19ನ ಸೂಪರ್ಸ್ಪ್ರೆಡರ್ ಆಗಿಸಿ ಲಕ್ಷಾಂತರ ಜನರ ಜೀವಗಳನ್ನು ಅಪಾಯದಲ್ಲಿ ಸಿಲುಕಿಸದಿರಲು ಈ ಮೇಳವನ್ನು ಸುಲಭವಾಗಿ ರದ್ದುಗೊಳಿಸಬಹುದಿತ್ತು. ಆದರೆ ಭಾರತ ಸರಕಾರವಾಗಲೀ ಉತ್ತರಾಖಂಡ ಸರಕಾರವಾಗಲೀ ಈ ಕೆಲಸವನ್ನು ಮಾಡಿರಲಿಲ್ಲ. ಅಲ್ಲದೆ ಇದು ಹಿಂದಿನ ಕುಂಭಮೇಳ ನಡೆದು 12ನೇ ವರ್ಷವಾಗಿರದೆ 11ನೇ ವರ್ಷವಾಗಿದೆ ಎಂಬ ಸರಳ ಕಾರಣದಿಂದ ಈ ವರ್ಷ ಅದಕ್ಕೆ ಅವಕಾಶ ನೀಡದಿರಬಹುದಿತ್ತು. ಈ ವರ್ಷವನ್ನು ಅವರು ಬಹುಶಃ 2022ನೇ ಸಾಲಿನಲ್ಲಿ ನಡೆಸಬಹುದಿದ್ದ ಕುಂಭಮೇಳ ಆಯೋಜನೆಗೆ ಪೂರಕ ವಾತಾವರಣವನ್ನು ಸೃಷ್ಟಿಸಲು ಬಳಸಿಕೊಂಡಿದ್ದರೆ ಅದಕ್ಕೆ ಒಂದು ಅರ್ಥವಿರುತ್ತಿತ್ತು.

ಆದರೆ ಸರಕಾರಗಳು ತೀರ ಕೆಟ್ಟ ಕೆಲಸವನ್ನು ಮಾಡಿವೆ. ಯಾವುದೋ ಬೊಗಳೆ ಜ್ಯೋತಿಷಿಗಳು ಎ.13-14ರ ಪ್ರಶಸ್ತ ಮುಹೂರ್ತದಲ್ಲಿಯೇ ಕುಂಭಮೇಳ ನಡೆಯಬೇಕೆಂದು ಹೇಳಿದ್ದನ್ನು ನಂಬಿಕೊಂಡು ಸಾಂಕ್ರಾಮಿಕದ ಅಪಾಯಗಳ ಬಗ್ಗೆ ಸಂಪೂರ್ಣ ಅರಿವಿದ್ದೂ ಅಖಿಲ ಭಾರತ ಅಖಾಡಾ ಪರಿಷದ್ನ ಸಲಹೆಯ ಮೇರೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದನ್ನು 2022ರಿಂದ 2021ಕ್ಕೆ ಹಿಂದೂಡಿದ್ದವು.

ಕುಂಭಮೇಳಗಳು ಮೊದಲಿನಿಂದಲೂ ಸಾಂಕ್ರಾಮಿಕ ಹರಡುವಿಕೆಗೆ ಪ್ರಶಸ್ತವಾಗಿವೆ ಎನ್ನುವುದನ್ನು ಹಿಂದಿನ ದಾಖಲೆಗಳು ಪುಷ್ಟೀಕರಿಸಿವೆ. 2013ರಲ್ಲಿ ಚರಿತ್ರೆಯಲ್ಲಿಯೇ ದಾಖಲೆ ಸಂಖ್ಯೆಯಲ್ಲಿ ಜನರು ಸೇರಿದ್ದ ಮಹಾಕುಂಭವು ಇದಕ್ಕೆ ಏಕೈಕ ಅಪವಾದವಾಗಿದೆ. ಯಾವುದೇ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡದೆ ಅದು ಮುಗಿದಿತ್ತು, ಆದರೆ ಆ ಸಮಯದಲ್ಲಿ ಯಾವುದೇ ಸಾಂಕ್ರಾಮಿಕದ ಹಾವಳಿಯಿರಲಿಲ್ಲ.
 
2020ರಲ್ಲಿ ಸ್ಫೋಟಗೊಂಡ ಕೊರೋನವೈರಸ್ ಉಂಟು ಮಾಡಿರುವ ಹಾವಳಿ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಕುಂಭಮೇಳ ಶಾಹಿ ಸ್ನಾನಗಳಂತಹ ಸಂದರ್ಭಗಳು,ಕುಂಭದಲ್ಲಿಯ ಸ್ಥಿತಿಗಳನ್ನು ಪರಿಗಣಿಸಿದರೆ ಸಾಂಕ್ರಾಮಿಕದ ಸುನಾಮಿಯೇ ಆಗುವ ಸಾಧ್ಯತೆಯಿದೆ ಎಂದು ಮೊದಲೇ ಊಹಿಸಲು ಯಾರೇ ಆದರೂ ಪಿಎಚ್ಡಿ ಮಾಡಿರಬೇಕಾದ ಅಗತ್ಯವಿರಲಿಲ್ಲ ಮತ್ತು ಕಳೆದ ಕೆಲವು ದಿನಗಳಿಂದ ಇದನ್ನೇ ನಾವು ನೋಡುತ್ತಿದ್ದೇವೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಕೆಲವು ಅಜ್ಞಾನಿಗಳ ಮೂರ್ಖ ನಿರ್ಧಾರಗಳಿಂದಾಗಿ ಭಾರತದಲ್ಲಿಯ ಮತ್ತು ವಿಶ್ವದಲ್ಲಿಯ ಪ್ರತಿಯೊಬ್ಬರೂ ಇಂದು ಅಪಾಯದಲ್ಲಿದ್ದಾರೆ.

ಕುಂಭಮೇಳವು ಸಾಂಕ್ರಾಮಿಕವನ್ನು ಅಪಾಯಕಾರಿಯಾಗಿ ಹರಡಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ. ಹೀಗಿರುವಾಗ ಮೇಳದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿಯವರು ಅರೆಮನಸ್ಸಿನಿಂದ ತಡವಾಗಿ ನೀಡಿದ್ದ ‘ಕುಂಭಮೇಳದ ಉಳಿದ ಭಾಗ ಸಾಂಕೇತಿಕವಾಗಿರಲಿ’ ಎಂಬ ಹೇಳಿಕೆಗೆ ಯಾವುದೇ ಅರ್ಥವಿರಲಿಲ್ಲ.

2020 ಜುಲೈನಲ್ಲಿ ಉತ್ತರಾಖಂಡದ ಆಗಿನ ಮುಖ್ಯಮಂತ್ರಿ,ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್ ಅವರು ಹರಿದ್ವಾರದಲ್ಲಿ ಕುಂಭಮೇಳವು ಎಂದಿನಂತೆ ನಡೆಯಲಿದೆ ಎಂದು ಅಖಿಲ ಭಾರತ ಅಖಾಡಾ ಪರಿಷದ್ಗೆ ಭರವಸೆ ನೀಡಿದ್ದರು. ಭವಿಷ್ಯದಲ್ಲಿ ಏನು ಸಂಭವಿಸಲಿದೆ ಎನ್ನುವುದನ್ನು ಮುಂಗಾಣುವ ಸ್ಥಿತಿಯಲ್ಲಿ ಅವರಿರಲಿಲ್ಲ ಮತ್ತು ಭರವಸೆ ನೀಡುವ ಸ್ಥಿತಿಯಲ್ಲಿರಲಿಲ್ಲ,ಆದರೂ ಭರವಸೆಯನ್ನು ನೀಡಿದ್ದರು. ಆದರೆ ಕುಂಭದ ಸಮಯದಲ್ಲಿ ಕೊರೋನವೈರಸ್ ಸ್ಥಿತಿಯನ್ನು ಅವಲಂಬಿಸಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಬಹುದು ಎಂದು ಹೇಳಿದ್ದರು. 

2020,ಸೆಪ್ಟೆಂಬರ್ನಲ್ಲಿ ಕುಂಭಮೇಳದಲ್ಲಿ ಪಾಲ್ಗೊಳ್ಳುವವರಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದು ಅವರು ಹೇಳಿದ್ದರು.

2020,ಡಿಸೆಂಬರ್ನಲ್ಲಿ ಕುಂಭಮೇಳಕ್ಕಾಗಿ ರಾಜ್ಯದ ಸಿದ್ಧತೆಗಳ ಬಗ್ಗೆ ಅಖಾಡಾ ಪರಿಷದ್ನ ಸಂತರು ಅತೃಪ್ತಿಯನ್ನು ವ್ಯಕ್ತಪಡಿಸಿದ್ದರು. ಸಿದ್ಧತೆಗಳ ಕೊರತೆಗಳನ್ನು ಉಲ್ಲೇಖಿಸಿ ಕೊನೆಯ ಘಳಿಗೆಯಲ್ಲಿ ಸರಕಾರವು ಕುಂಭಮೇಳದಿಂದ ಹಿಂದೆ ಸರಿಯಬಹುದಿತ್ತು. ಆದರೆ ಪರಿಷದ್ ಕುಂಭಮೇಳವನ್ನು ತನ್ನ ಸ್ವಂತ ಸಾಮರ್ಥ್ಯದಿಂದ ನಡೆಸುವುದಾಗಿ ಬೆದರಿಕೆಯೊಡ್ಡಿತ್ತು.

2021,ಮಾ.9ರಂದು ರಾವತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಉತ್ತರಾಧಿಕಾರಿಯಾಗಿ ಗದ್ದುಗೆಯನ್ನೇರಿದ್ದ ತೀರ್ಥ ಸಿಂಗ್ ರಾವತ್,ಯಾತ್ರಿಕರ ಮೇಲೆ ಯಾವುದೇ ನಿರ್ಬಂಧಗಳಿರುವುದಿಲ್ಲ ಮತ್ತು ಗಂಗಾಮಾತೆಯ ಆಶೀರ್ವಾದಗಳೊಂದಿಗೆ ನಂಬಿಕೆಯು ಸಾಂಕ್ರಾಮಿಕದ ವಿರುದ್ಧ ಗೆಲುವು ಸಾಧಿಸುತ್ತದೆ ಎಂದು ತುರ್ತು ಹೇಳಿಕೆಯನ್ನು ನೀಡಿದ್ದರು.
 
1942ರಲ್ಲಿ ಜಪಾನಿ ವಾಯುಪಡೆಯಿಂದ ಬಾಂಬ್ ದಾಳಿಯ ಭೀತಿಯನ್ನು ಉಲ್ಲೇಖಿಸಿ ಆಗಿನ ಬ್ರಿಟಿಷ್ ಸರಕಾರವು ಅಲಹಾಬಾದ್ನಲ್ಲಿ ನಡೆದಿದ್ದ ಕುಂಭಮೇಳ-ಮಾಘ ಮೇಳಕ್ಕಾಗಿ ಯಾವುದೇ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿರಲಿಲ್ಲ. ಅಲಹಾಬಾದ್ ಗೆ ತೆರಳಲು ರೈಲ್ವೆ ಟಿಕೆಟ್ಗಳ ಮಾರಾಟವನ್ನು ನಿಲ್ಲಿಸಲಾಗಿತ್ತು ಮತ್ತು ಇದು ಅಲಹಾಬಾದ್ ಗೆ ಪ್ರಯಾಣಿಸುವ ಯಾತ್ರಿಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಿತ್ತು. ಅಲ್ಲದೆ ಮೇಳದಲ್ಲಿ ಯಾತ್ರಿಗಳಿಗೆ ವಸತಿ ಸೌಲಭ್ಯಗಳನ್ನೂ ಕಲ್ಪಿಸಲಾಗಿರಲಿಲ್ಲ. ಆಗ ಯಾವುದೇ ಅಖಾಡಾ ಪ್ರತಿಭಟನೆಯನ್ನೂ ನಡೆಸಿರಲಿಲ್ಲ. ಈ ಸಲ ರೈಲುಗಳನ್ನು ರದ್ದುಗೊಳಿಸುವ ಬದಲು ಕೇಂದ್ರವು ಡೆಹ್ರಾಡೂನ್ ಮತ್ತು ಹೃಷಿಕೇಶಗಳಿಗೆ ವಿಶೇಷ ರೈಲುಗಳನ್ನು ಓಡಿಸಿತ್ತು. ಯಾತ್ರಿಕರು ಭಾರೀ ಸಂಖ್ಯೆಯಲ್ಲಿ ಸೇರುವಂತಾಗಲು ಸರಕಾರವು ಪುಂಖಾನುಪುಂಖವಾಗಿ ಜಾಹೀರಾತುಗಳನ್ನು ಪ್ರಕಟಿಸಿತ್ತು.
 
ಈ ರೈಲುಗಳನ್ನು ಓಡಿಸದಿರುವ ಮತ್ತು ಯಾವುದೇ ಜಾಹೀರಾತುಗಳನ್ನು ನೀಡದಿರುವ ನಿರ್ಧಾರವು ಭಾರೀ ವ್ಯತ್ಯಾಸವನ್ನುಂಟು ಮಾಡಬಹುದಿತ್ತು. ಆದರೆ ಸರಕಾರಕ್ಕೆ ಗೆಲ್ಲಬೇಕಾದ ಚುನಾವಣೆಗಳಿದ್ದವು ಮತ್ತು ಎಂದಿನಂತೆ ವಿವಿಧ ಆಧ್ಯಾತ್ಮಿಕ ನಾಯಕರು,ಸಾಧುಸಂತರ ಬೆಂಬಲದ ಅಗತ್ಯವೂ ಇತ್ತು ಹಾಗೂ ಕುಂಭಮೇಳದ ಸಿದ್ಧತೆಗಳಿಗಾಗಿ ಕಂಟ್ರಾಕ್ಟ್ಗಳ ಮೂಲಕ ದುಡ್ಡು ಗೋರುವ ಅವಕಾಶವೂ ಇತ್ತು. ಹೀಗಾಗಿ ಕೇಂದ್ರ ಮತ್ತು ಉತ್ತರಾಖಂಡ ಸರಕಾರಗಳಲ್ಲಿ ಉನ್ನತ ಸ್ಥಾನಗಳಲ್ಲಿರುವವರು ಸಾವಿನ ಬಲೆಯನ್ನು ಹರಡಿದ್ದರು ಮತ್ತು ತಾವು ಏನು ಮಾಡುತ್ತಿದ್ದೇವೆ ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News