ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಹಿರಿಯ ಸಹೋದರ ನಿಧನ

Update: 2021-05-04 12:43 GMT

ಬೆಂಗಳೂರು, ಮೇ 4: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರ ಹಿರಿಯ ಸಹೋದರ ಅಸದುಲ್ಲಾ ಖಾನ್(65) ಅನಾರೋಗ್ಯದಿಂದಾಗಿ ಸೋಮವಾರ ತಡರಾತ್ರಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ನಿಧನರಾದರು.

ಮೈಸೂರಿನ ಪ್ರತಿಷ್ಠಿತ ಅಂಜುಮನ್-ಎ-ಹದೀಖತುಲ್ ಅದಬ್‍ನ ಸದಸ್ಯರಾಗಿದ್ದ ಅಸದುಲ್ಲಾ ಖಾನ್, ತಮ್ಮ ಸರಳತೆ ಹಾಗೂ ಸೇವಾ ಮನೋಭಾವನೆಯಿಂದಾಗಿ ಜನಮನ್ನಣೆಗಳಿಸಿದ್ದರು. ರಾಜ್ಯ ಸರಕಾರದ ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ಅಸದುಲ್ಲಾ ಖಾನ್ ತಮ್ಮ ಸೇವಾ ಕಾರ್ಯಗಳಿಂದ ಸಮುದಾಯದಲ್ಲಿ ಗುರುತಿಸಿಕೊಂಡಿದ್ದರು.

ಮೃತರ ಜನಾಝ ನಮಾಝ್ ಹಾಗೂ ದಫನ್ ಕಾರ್ಯವನ್ನು ಊಟಿ ರಸ್ತೆಯಲ್ಲಿರುವ ಖಬರಸ್ತಾನ್‍ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ನೆರವೇರಿಸಲಾಯಿತು. ಎಲ್.ಕೆ.ಅತೀಕ್ ಹಾಗೂ ಅವರ ಸಹೋದರಿ ಇಬ್ಬರು ಕೋವಿಡ್ ಪಾಸಿಟಿವ್ ಆಗಿರುವುದರಿಂದ ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

'ಅಗತ್ಯವಿರುವವರ ನೆರವಿಗೆ ಸದಾಧಾವಿಸುತ್ತಿದ್ದ ಅಸದುಲ್ಲಾ ಖಾನ್ ನಿಧನವು ಸಮುದಾಯವು ಅಪಾರ ನಷ್ಟವಾಗಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಪತ್ನಿ, ಪುತ್ರಿ, ಕಿರಿಯ ಸಹೋದರಿ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಬದ್ರುಝಮಾನ್, ಕಿರಿಯ ಸಹೋದರರಾದ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್, ಮಂಗಳೂರಿನ ಪಿ.ಎ.ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಸಮೀವುಲ್ಲಾ ಖಾನ್ ಇಕ್ಬಾಲ್ ಹಾಗೂ ಇತರ ಬಂಧುಗಳಿಗೆ ಅಲ್ಲಾಹ್ ಕರುಣಿಸಲಿ' ಎಂದು ಮೈಸೂರಿನ ಭೂ ದಾಖಲೆಗಳ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸೈಯದ್ ಸಜ್ಜಾದ್ ಅಹ್ಮದ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News