ಕೊರೋನ ಸೋಂಕಿನ ಸಂದರ್ಭ ಟೀಕೆಯನ್ನು ಹತ್ತಿಕ್ಕುವ ಮೋದಿ ಸರಕಾರದ ಪ್ರಯತ್ನ ಅಕ್ಷಮ್ಯ: ಲ್ಯಾನ್ಸೆಟ್ ವಿಮರ್ಶೆ

Update: 2021-05-08 17:58 GMT

ಮುಂಬೈ, ಮೇ 8: ಮೋದಿ ಸರಕಾರ ಕೊರೋನ ಸೋಂಕನ್ನು ನಿಯಂತ್ರಿಸುವ ಬದಲು ಟ್ವಿಟರ್ನಿಂದ ಟೀಕೆಗಳನ್ನು ತೆಗೆದುಹಾಕುವಲ್ಲಿ ಮಗ್ನವಾಗಿರುವಂತೆ ಭಾಸವಾಗುತ್ತಿದೆ ಎಂದು ಮೆಡಿಕಲ್ ಜರ್ನಲ್ "ದಿ ಲ್ಯಾನ್ಸೆಟ್’ನ ಸಂಪಾದಕೀಯ ಬರಹದಲ್ಲಿ ಕಟುವಾಗಿ ವಿಮರ್ಶಿಸಲಾಗಿದೆ. ಕೊರೋನ ಸೋಂಕಿನ ಸಂದರ್ಭ ಟೀಕೆ ಮತ್ತು ಮುಕ್ತ ಸಂವಾದವನ್ನು ಹತ್ತಿಕ್ಕುವ ಪ್ರಧಾನಿ ಮೋದಿಯ ನಡೆ ಅಕ್ಷಮ್ಯ ಎಂದು ಲ್ಯಾನ್ಸೆಟ್ ಹೇಳಿದೆ. ಆಗಸ್ಟ್ 1ರ ವೇಳೆ ಭಾರತದಲ್ಲಿ ಕೊರೋನ ಸೋಂಕಿನಿಂದಾಗಿ 1 ಮಿಲಿಯನ್ ಸಾವು ಸಂಭವಿಸಬಹುದು ಎಂದು ‘ ದಿ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುವೇಷನ್’ನ ವರದಿಯನ್ನು ಉಲ್ಲೇಖಿಸಿರುವ ಪತ್ರಿಕೆ, ಒಂದು ವೇಳೆ ಹೀಗಾದಲ್ಲಿ ಮೋದಿ ಸರಕಾರ ಸ್ವಯಂ ನಿರ್ಮಿತ ರಾಷ್ಟ್ರೀಯ ದುರಂತಕ್ಕೆ ಹೊಣೆಗಾರನಾಗಲಿದೆ ಎಂದಿದೆ. ‌

ಸೋಂಕಿನ ಎರಡನೇ ಅಲೆ ವಿನಾಶಕಾರೀ ರೀತಿಯಲ್ಲಿ ತ್ವರಿತವಾಗಿ ಹರಡುತ್ತಿದೆ ಎಂಬ ಎಚ್ಚರಿಕೆಯ ಮಧ್ಯೆಯೂ ಮೋದಿ ಸರಕಾರ ಕೋಟ್ಯಂತರ ಜನ ಸೇರುವ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ. ಜೊತೆಗೆ ಚುನಾವಣಾ ರ್ಯಾಲಿಯೂ ನಡೆದಿದೆ. ಇದು ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ. ಇದರಿಂದ ದೇಶದಲ್ಲಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ತಳಮಟ್ಟಕ್ಕೆ ಕುಸಿದಿದೆ. ದೇಶದಲ್ಲಿ ಜನತೆ ಅನುಭವಿಸುತ್ತಿರುವ ಸಂಕಟದ ದೃಶ್ಯಗಳು ನಂಬಲಸಾಧ್ಯವಾಗಿದೆ. 

ಆಸ್ಪತ್ರೆಗಳಲ್ಲಿ ಸೋಂಕಿತರು ತುಂಬಿದ್ದು ಜಾಗವಿಲ್ಲ, ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೂ ಸೂಕ್ತ ರಕ್ಷಣೆಯಿಲ್ಲದೆ ಅವರೂ ಸೋಂಕಿಗೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ತುಂಬಾ ಅಸಹಾಯಕ ಜನತೆ (ವೈದ್ಯರು, ಸಾರ್ವಜನಿಕರು) ಆಮ್ಲಜನಕ, ಆಸ್ಪತ್ರೆಯಲ್ಲಿ ಬೆಡ್ ಹಾಗೂ ಇತರ ಅಗತ್ಯಗಳಿಗಾಗಿ ಅಳಲು ತೋಡಿಕೊಳ್ಳುವ ದೃಶ್ಯಗಳಿವೆ. ಆದರೂ, ಮಾರ್ಚ್ ಆರಂಭದಲ್ಲಿ ದೇಶದ ಆರೋಗ್ಯ ಸಚಿವರು ‘ ಭಾರತ ಕೊರೋನ ಸೋಂಕಿನ ಎದುರಿನ ಯುದ್ಧದಲ್ಲಿ ಮೇಲುಗೈ ಪಡೆಯಲು ಯಶಸ್ವಿಯಾಗಿದೆ’ ಎಂದು ಘೋಷಿಸಿದ್ದರು. 

ಕೆಲವು ತಿಂಗಳು ಸೋಂಕು ಪ್ರಕರಣ ಕಡಿಮೆ ದಾಖಲಾಗಿದೆ ಎಂದ ಮಾತ್ರಕ್ಕೆ ನಾವು ಗೆದ್ದೇ ಬಿಟ್ಟೆವು ಎಂದು ಕೇಂದ್ರ ಸರಕಾರ ಭಾವಿಸಿಬಿಟ್ಟಿತ್ತು. ಈ ಮಧ್ಯೆ, ಸೋಂಕಿನ ಎರಡನೇ ಅಲೆಯ ಬಗ್ಗೆ ತಜ್ಞರು ನೀಡಿದ್ದ ಎಚ್ಚರಿಕೆಯನ್ನೂ ನಿರ್ಲಕ್ಷಿಸಲಾಗಿದೆ. ದೇಶದಲ್ಲಿ ಸೋಂಕಿನ ವಿರುದ್ಧ ಸಮುದಾಯ ಪ್ರತಿರೋಧ ಶಕ್ತಿ ಬೆಳೆದಿದೆ ಎಂಬ ತಪ್ಪು ಸಮೀಕ್ಷೆಯೂ ಇದಕ್ಕೆ ಪೂರಕವಾಗಿತ್ತು ಎಂದು ವರದಿ ಹೇಳಿದೆ.

ಭಾರತದ ಲಸಿಕಾ ಅಭಿಯಾನದ ಬಗ್ಗೆಯೂ ಟೀಕಾಪ್ರಹಾರ ವ್ಯಕ್ತವಾಗಿದೆ. ಕೊರೋನ ಸೋಂಕು ದೂರವಾಗಿದೆ ಎಂಬ ಸಂದೇಶ ರವಾನೆಯಾದ್ದರಿಂದ ಲಸಿಕೆ ಅಭಿಯಾನದ ಆರಂಭ ವಿಳಂಬವಾಗಿದೆ. ಇದುವರೆಗೆ ಜನಸಂಖ್ಯೆಯ 2%ದಷ್ಟು ಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಲಸಿಕೆ ಅಭಿಯಾನದ ಕಾರ್ಯನೀತಿಯ ಬಗ್ಗೆ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸುವ ಗೊಡವೆಗೇ ಹೋಗದೆ ಕೇಂದ್ರ ಸರಕಾರ ಗೊಂದಲ ಹುಟ್ಟುಹಾಕಿದೆ. 18 ವರ್ಷ ಮೀರಿದವರಿಗೂ ಲಸಿಕೆ ಹಾಕಲಾಗುವುದು ಎಂದು ದಿನಾಂಕ ಘೋಷಿಸಿತು. ಆದರೆ ರಾಜ್ಯಗಳಿಗೆ ಲಸಿಕೆಯನ್ನೇ ಪೂರೈಸಲಿಲ್ಲ. ಅಲ್ಲದೆ ರಾಜ್ಯಗಳು ಮತ್ತು ಆಸ್ಪತ್ರೆಗಳು ಮಾರುಕಟ್ಟೆಯಿಂದ ಲಸಿಕೆ ಖರೀದಿಸುವಂತೆ ಸೂಚಿಸಿತು. ಮಹಾರಾಷ್ಟ್ರ, ಉತ್ತರಪ್ರದೇಶಗಳಂತಹ ರಾಜ್ಯಗಳು ಸೋಂಕಿನ ಪ್ರಕರಣ ಹಠಾತ್ ಉಲ್ಬಣಗೊಳ್ಳುವ ನಿರೀಕ್ಷೆಯಿಲ್ಲದೆ ಪೂರ್ವಸಿದ್ಥತೆ ಮಾಡಿಕೊಂಡಿರಲಿಲ್ಲ. ಆದರೆ ಕೇರಳ, ಒಡಿಶಾದಂತಹ ರಾಜ್ಯಗಳು ಸಾಕಷ್ಟು ಪೂರ್ವಸಿದ್ಥತೆ ಮಾಡಿಕೊಂಡಿರುವುದರಿಂದ ತಮ್ಮ ಅಗತ್ಯವನ್ನು ಈಡೇರಿಸಿಕೊಂಡು ಆಮ್ಲಜನಕವನ್ನು ನೆರೆ ರಾಜ್ಯಗಳಿಗೂ ಪೂರೈಸಲು ಶಕ್ತವಾಗಿದೆ ಎಂದು ವರದಿ ಹೇಳಿದೆ.

ಇದೀಗ ಸರಕಾರ ತನ್ನ ತಪ್ಪನ್ನು ಅರಿತುಕೊಂಡು, ಜವಾಬ್ದಾರಿಯುತ, ಪಾರದರ್ಶಕ ನಾಯಕತ್ವ ಒದಗಿಸುವ ಜೊತೆಗೆ ವೈಜ್ಞಾನಿಕ ತಳಹದಿಯ ಸಾರ್ವಜನಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಲಸಿಕಾ ಅಭಿಯಾನಕ್ಕೆ ವೇಗ ಒದಗಿಸಬೇಕು. ದೇಶದ ಜನಸಂಖ್ಯೆಯ 65%ರಷ್ಟಿರುವ ಗ್ರಾಮೀಣ ಮತ್ತು ಬಡ ನಾಗರಿಕರಿಗೆ ಲಸಿಕೆ ಲಭಿಸುವ ಪೂರೈಕೆ ವ್ಯವಸ್ಥೆ ರೂಪಿಸಬೇಕು. ಸ್ಥಳೀಯ ಸ್ಥಿತಿಗತಿಯ ಬಗ್ಗೆ ಅರಿವು ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಸಮನ್ವಯ ಸಾಧಿಸಿ ಲಸಿಕೆ ಪೂರೈಸುವ ವ್ಯವಸ್ಥೆ ಮಾಡಬೇಕು ಮತ್ತು ಸಕಾಲಿಕವಾಗಿ ಅಂಕಿಅಂಶವನ್ನು ಜನರಿಗೆ ತಲುಪಿಸಿ ಅವರಿಗೆ ಹಾಲಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಒದಗಿಸುವ ಜೊತೆಗೆ, ದೇಶದಾದ್ಯಂತ ಲಾಕ್ಡೌನ್ ಜಾರಿಯ ಬಗ್ಗೆಯೂ ಚಿಂತನೆ ನಡೆಸಬೇಕು ಎಂದು ಲಾನ್ಸೆಟ್ ಜರ್ನಲ್ ಅಭಿಪ್ರಾಯಪಟ್ಟಿದೆ. 

ಐಸಿಎಂಆರ್ ಎಚ್ಚರಿಕೆಯ ಕಡೆಗಣನೆ

ಈ ಮಧ್ಯೆ, ಕೊರೋನ ಸೋಂಕಿನ ವಿರುದ್ಧ ದೇಶದ 21% ಜನರಲ್ಲಿ ಮಾತ್ರ ಪ್ರತಿರೋಧ ಶಕ್ತಿಯಿದೆ ಎಂದು ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಜನವರಿಯಲ್ಲಿ ನೀಡಿದ್ದ ಮಾಹಿತಿಯನ್ನೂ ಕಡೆಗಣಿಸಲಾಗಿದೆ.
ಕೊರೋನ ಸೋಂಕನ್ನು ನಿಯಂತ್ರಿಸುವಲ್ಲಿ ದೊರಕಿದ ಆರಂಭಿಕ ಯಶಸ್ಸನ್ನು ಭಾರತ ಕೈಚೆಲ್ಲಿದೆ. ಕೊರೋನ ನಿಯಂತ್ರಿಸಲು ಸರಕಾರ ರಚಿಸಿದ್ದ ಕೋವಿಡ್ ಕಾರ್ಯಪಡೆ ಎಪ್ರಿಲ್ವರೆಗೆ ಸಭೆಯನ್ನೇ ಸೇರಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News