ಅಚ್ಛೇ ದಿನ್ ಬರಲಿದೆ ಎಂದಿದ್ದ ಮೋದಿ ಜನರಿಗೆ ನರಕ ತೋರಿಸುತ್ತಿದ್ದಾರೆ: ಸಿದ್ದರಾಮಯ್ಯ ಆಕ್ರೋಶ

Update: 2021-06-11 13:15 GMT

ಬೆಂಗಳೂರು, ಜೂ. 11: `ಅಚ್ಛೇ ದಿನ್' ಬರಲಿದೆ ಎಂದು ಹೇಳಿದ್ದ ಪ್ರಧಾನಿ ಮೋದಿ ತನ್ನ ಆಡಳಿತದಲ್ಲಿ ದೇಶದ ಜನರಿಗೆ ನರಕ ತೋರಿಸುತ್ತಿದ್ದಾರೆ. ಇಂತಹ ನರಕದ ದಿನಗಳನ್ನು ನಾವು ಹಿಂದೆಂದೂ ಕಂಡಿರಲಿಲ್ಲ. ನರಕ ಏನು ಎಂಬುದನ್ನು ನಾವು ನೋಡಿರಲಿಲ್ಲ. ಆದರೆ, ಮೋದಿ ಅದನ್ನು ಇದೀಗ ತೋರಿಸುತ್ತಿದ್ದಾರೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಇಲ್ಲಿನ ಶಿವಾನಂದ ವೃತ್ತದ ಬಳಿಯ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ `100 ನಾಟ್‍ಔಟ್' ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ದೇಶದಲ್ಲಿ ಪೆಟ್ರೋಲ್, ಡಿಸೇಲ್ ಅಡುಗೆ ಅನಿಲ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದೆ. ಬೆಲೆ ಏರಿಕೆ ಖಂಡಿಸಿ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಲ್ಲೂ 5 ದಿನ ಕೆಪಿಸಿಸಿ ವತಿಯಿಂದ 5 ಸಾವಿರ ಪೆಟ್ರೋಲ್ ಬಂಕ್‍ಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ತಿಳಿಸಿದರು.

ಮನಮೋಹನ್ ಸಿಂಗ್ ಸರಕಾರದದಲ್ಲಿ ಬೆಲೆ ಏರಿಕೆ ಖಂಡಿಸಿ ಬಿಜೆಪಿಯವರು ಹಾಹಾಕಾರ ಸೃಷ್ಟಿ ಮಾಡಿದ್ದರು, ಮೋದಿ ಪ್ರತಿಭಟನೆ ನಡೆಸಿದ್ದರು. ಬಳಿಕ ಅವರು ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದರು ಅಚ್ಛೇದಿನ್ ಬರಲಿದೆ ಎಂದು ಹೇಳಿದ್ದರು. ಆದರೆ, ಇಂದು ನರಕದ ದಿನಗಳು ಬಂದಿವೆ. ನಾವು ನರಕ ನೋಡಿಲ್ಲ. ಕೋವಿಡ್ ಸಂಕಷ್ಟವಿದೆ. ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ. ಜನ ಸಾಮಾನ್ಯರು ಜೀವನ ನಡೆಸುವುದು ಹೇಗೆ. ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗುತ್ತದೆ ಎಂದರು.

ಮೋದಿಗೆ ನಾಚಿಕೆ ಆಗುವುದಿಲ್ಲವೇ?: `ಮೋದಿಯೇ ಹಿಂದೆ ಬೆಲೆ ಏರಿಕೆ ವಿರೋಧಿಸಿದ್ದರು. ಸಾಮಾನ್ಯ ಜನರು ಸಣ್ಣ ವಾಹನ ಇಟ್ಟುಕೊಂಡಿರುತ್ತಾರೆ. ಅವರ ಪರಿಸ್ಥಿತಿ ಏನು? ಲಾಕ್‍ಡೌನ್‍ನಿಂದ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉತ್ಪಾದನೆ ನಿಂತು ಹೋಗಿದೆ. ಜನರ ರಕ್ತ ಹೀರುತ್ತಿರುವ ಮೋದಿಯವರಿಗೆ ನಾಚಿಕೆ ಆಗುವುದಿಲ್ಲವೇ? ನಮ್ಮ ರಾಜ್ಯದಿಂದ 1.16 ಲಕ್ಷ ಕೋಟಿ ರೂ. ಅಬಕಾರಿ ಸುಂಕ, 14 ಸಾವಿರ ಕೋಟಿ ರೂ.ಮಾರಾಟ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಇಷ್ಟೊಂದು ತೆರಿಗೆ ತೆಗೆದುಕೊಂಡು ಮತ್ತೆ ಪೆಟ್ರೋಲ್ ಮೇಲೆ ತೆರಿಗೆ ಹಾಕಿದ್ದಾರೆ. ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಹೇಳಿ ಅಧಿಕಾರ ಮಾಡುತ್ತಿದ್ದಾರೆ. ಮೋದಿಯವರು ಬೆಲೆ ಏರಿಕೆ ಮಾಡಿ ಜನರ ರಕ್ತ ಕುಡಿಯುವ ತಿಗಣೆಯಂತೆ ಆಗಿದ್ದಾರೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

`ಜಿಡಿಪಿ ದರ ಇಳಿಮುಖವಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದ ಮೋದಿ, ಪ್ರಧಾನಿಯಾಗಿ 7 ವರ್ಷ ಆಗಿದೆ. 14 ಕೋಟಿ ಜನರಿಗೆ ಉದ್ಯೋಗ ಕೊಡಲಿಲ್ಲ. ಬಡವರಿಗೆ ಅಕ್ಕಿ ಕೊಡುವುದಕ್ಕೇ ಆಗದ ಇಂಥ ಕೆಟ್ಟ ಸರಕಾರವನ್ನ ನಾನು ನೋಡಿರಲಿಲ್ಲ. ಕಳಪೆ ಪ್ರಧಾನಿ ಮತ್ತು ಮುಖ್ಯಮಂತ್ರಿ. ರಾಮನ ಹೆಸರು ಹೇಳುವ ಬಿಜೆಪಿಯವರಿಗೆ ಸಾಮಾನ್ಯ ಜನರ ಕಷ್ಟ ಅರ್ಥ ಆಗುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾವಣನ ಶ್ರೀಲಂಕಾದಲ್ಲಿ ಪೆಟ್ರೋಲ್ ದರ 59 ರೂ. ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 100 ರೂ., ರಾವಣ ರಾಜ್ಯ ಬಡವರ ಪರವಾಗಿದೆ. ರಾಮ ರಾಜ್ಯದಲ್ಲಿ ಬಡವರ ರಕ್ತ ಹೀರಲಾಗುತ್ತಿದೆ. ಬೈಕ್‍ನಲ್ಲಿ ಓಡಾಡುವ ಯುವಕರು ಅಚ್ಚೇದಿನ್ ಬರುತ್ತದೆ ಎನ್ನುತ್ತಿದ್ದರು. ಈಗ ಅವರೇ ಶಾಪ ಹಾಕುತ್ತಿದ್ದಾರೆ. ಮೋದಿ ಕೇವಲ ಭಾವನಾತ್ಮಕವಾಗಿ ಮಾತನಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕೋಮುವಾದ ಬಿತ್ತುವುದೇ ಬಿಜೆಪಿ ಕೆಲಸ'

-ಸಿದ್ದರಾಮಯ್ಯ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News