ಬೆಂಗಳೂರು: ಮದ್ಯ ಸೇವನೆಗೆ ಹಣ ನೀಡದಿದ್ದಕ್ಕೆ ಪತ್ನಿಯನ್ನೇ ಹತ್ಯೆಗೈದ ಪತಿ

Update: 2021-06-11 17:14 GMT

ಬೆಂಗಳೂರು, ಜೂ.11: ಮದ್ಯ ಸೇವಿಸಲು ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಪತ್ನಿಯನ್ನು ಹತ್ಯೆ ಮಾಡಿ ಪತಿ ಪರಾರಿಯಾಗಿರುವ ಘಟನೆ ನಗರದ ಹೆಣ್ಣೂರಿನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮಲ್ಲಿಕಮ್ಮ ಎಂದು ಗುರುತಿಸಲಾಗಿದೆ. ಆರೋಪಿ ವೀರೇಶ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಲಕ್ಷ್ಮೀಪುರ ಮೂಲದ ಮಲ್ಲಿಕಮ್ಮ ಅವರ ಮೊದಲ ಪತಿ ಮೃತಪಟ್ಟಿದ್ದ. ಆನಂತರ ಕೂಲಿ ಅರಸಿ ಬೆಂಗಳೂರಿಗೆ ಬಂದಿದ್ದ ಆಕೆ, ವೀರೇಶ್ ಎಂಬುವನ ಜೊತೆ ಮದುವೆಯಾಗಿ ಹೆಣ್ಣೂರಿನ ಶೆಡ್‍ನಲ್ಲಿ ನೆಲೆಸಿದ್ದರು. ವೀರೇಶ್‍ಗೆ ಕುಡಿತದ ಚಟವಿದ್ದು, ಮದ್ಯ ಸೇವನೆಗೆ ಹಣ ಕೊಡುವಂತೆ ಪದೇ ಪದೇ ಮಲ್ಲಿಕಮ್ಮ ಜೊತೆ ಜಗಳ ಮಾಡುತ್ತಿದ್ದ. ಕೂಲಿ ಮಾಡಿದ ಹಣವನ್ನು ಕುಡಿದು ಹಾಳು ಮಾಡುತ್ತಾನೆ ಎಂಬ ಕಾರಣಕ್ಕೆ ಆಕೆ ಹಣ ನೀಡಲು ನಿರಾಕರಿಸುತ್ತಿದ್ದಳು ಎನ್ನಲಾಗಿದೆ.

ಜೂ.10ರಂದು ಹಣ ಕೇಳಿದ್ದಕ್ಕೆ ನಿರಾಕರಿಸಿದಳು ಎಂಬ ಕೋಪಕ್ಕೆ ಶೆಡ್‍ನಲ್ಲಿ ಮಲ್ಲಿಕಮ್ಮನ ತಲೆಯ ಮೇಲೆ ಸೀಮೆಂಟ್ ಇಟ್ಟಿಗೆಯನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಮೊಕದ್ದಮೆ ದಾಖಲಿಸಿಕೊಂಡಿರುವ ಹೆಣ್ಣೂರು ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News