ನಿಮಿಷಗಳಲ್ಲೇ 2 ಕೋಟಿಗೆ ಜಾಗ ಖರೀದಿಸಿ 18 ಕೋಟಿಗೆ ಮಾರಾಟ: ರಾಮ ಜನ್ಮಭೂಮಿ ಟ್ರಸ್ಟ್ ವಿರುದ್ಧ ಭೂ ಹಗರಣದ ಆರೋಪ

Update: 2021-06-13 17:44 GMT

ಲಕ್ನೋ: ಕಳೆದ ವರ್ಷ ಕೇಂದ್ರ ಸರಕಾರ  ಸ್ಥಾಪಿಸಿದ ರಾಮ ಮಂದಿರ ಟ್ರಸ್ಟ್ ಅಕ್ರಮ ಭೂ ಹಗರಣದಲ್ಲಿ ಭಾಗಿಯಾಗಿದೆ ಎಂದು ಉತ್ತರ ಪ್ರದೇಶದ ಎರಡು ವಿರೋಧ ಪಕ್ಷಗಳು ರವಿವಾರ ಆರೋಪಿಸಿವೆ.‌ ಈ ಪ್ರಕರಣದ ಕುರಿತು ಟ್ವಿಟರ್ ನಾದ್ಯಂತ #RamMandirScam ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

 ಈ ವರ್ಷದ ಮಾರ್ಚ್ ನಲ್ಲಿ ಈ ವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷ (ಎಸ್ಪಿ) ಹಾಗೂ  ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿಕೊಂಡಿವೆ. ಇದರಲ್ಲಿ ಇಬ್ಬರು ರಿಯಲ್ ಎಸ್ಟೇಟ್ ಡೀಲರ್ ಗಳು ಒಬ್ಬ ವ್ಯಕ್ತಿಯಿಂದ  2 ಕೋಟಿ ರೂ.ಗೆ ಆಸ್ತಿಯನ್ನು ಖರೀದಿಸಿ ಅದನ್ನು ನಿಮಿಷಗಳ ನಂತರ  ಟ್ರಸ್ಟ್ ಗೆ  18.5 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೇವಾಲಯದ ಟ್ರಸ್ಟ್ ಈ  ಆರೋಪವನ್ನು ಕ್ಷುಲ್ಲಕವೆಂದು ತಳ್ಳಿ ಹಾಕಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆ ಹಾಗೂ  ನಿರ್ವಹಣೆಗೆ 2020 ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಎಂಬ ಟ್ರಸ್ಟ್  ಸ್ಥಾಪಿಸಿತ್ತು. ತೀರ್ಪಿನಲ್ಲಿ ಸುಮಾರು 70 ಎಕರೆ ಭೂಮಿಯನ್ನು ನೀಡಲಾಯಿತು ಹಾಗೂ  ಅದರ 15 ಸದಸ್ಯರಲ್ಲಿ 12 ಮಂದಿಯನ್ನು ಕೇಂದ್ರವು ನಾಮನಿರ್ದೇಶನ  ಮಾಡಿದೆ.

ಸ್ಥಳೀಯ ಬಿಜೆಪಿ ಮುಖಂಡರು ಹಾಗೂ  ಕೆಲವು ಟ್ರಸ್ಟ್ ಸದಸ್ಯರ ಸಹಕಾರದಿಂದಾಗಿ  ಮೋಸದ ಭೂ ವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಹಾಗೂ  ಉತ್ತರ ಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಇಂದು ಅಯೋಧ್ಯೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಆರೋಪಿಸಿದರು.

"ಈ ಆಸ್ತಿಯ  ಬೆಲೆಯು ನಿಮಿಷಗಳಲ್ಲಿ ರೂ.  2  ಕೋಟಿಯಿಂದ ರೂ. 18.5 ಕೋಟಿಗೆ ಏರಿದೆ . ಇದರರ್ಥ 16.5 ಕೋ.ರೂ. ಲೂಟಿಯಾಗಿದೆ. ಇದರ ಸಿಬಿಐ ವಿಚಾರಣೆ ನಡೆಯಬೇಕು’’ ಎಂದು ಎಸ್ಪಿ ನಾಯಕ ಆಗ್ರಹಿಸಿದರು.

"ಕೋಟ್ಯಂತರ ಜನರು ರಾಮ್ ಟೆಂಪಲ್ ಟ್ರಸ್ಟ್ ಗೆ ದೇಣಿಗೆ ನೀಡಿದರು. ಅವರು ತಮ್ಮ ಉಳಿತಾಯವನ್ನು ದಾನ ಮಾಡಿದ್ದಾರೆ. ಇದು ದೇಶದ 120 ಕೋಟಿ ಜನರಿಗೆ ಮಾಡಿದ ಅವಮಾನ" ಎಂದು ಪಾಂಡೆ ಹೇಳಿದರು.

ಎಎಪಿ ಮುಖಂಡ ಹಾಗೂ  ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಇದೇ ರೀತಿಯ  ಆರೋಪಗಳನ್ನು ಮಾಡಿದ್ದಾರೆ.

"ಭಗವಾನ್  ರಾಮನ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯಲಿದೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದರೆ ಈ ದಾಖಲೆಗಳು ಕೋಟ್ಯಂತರ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ತೋರಿಸುತ್ತದೆ" ಎಂದು ಸಿಂಗ್ ಹೇಳಿದರು.

"ಒಂದು ಶತಮಾನದಿಂದ ಈ ಎಲ್ಲ ರೀತಿಯ ಆರೋಪಗಳನ್ನು ಮಾಡಲಾಗಿದೆ. ಮಹಾತ್ಮ ಗಾಂಧಿಯವರ ಹತ್ಯೆಗೆ ಕೆಲವರು ನಮ್ಮನ್ನು ದೂಷಿಸಿದ್ದಾರೆ. ಇಂತಹ ಆರೋಪಗಳ ಬಗ್ಗೆ ನಾವು ಚಿಂತಿಸುವುದಿಲ್ಲ. ನೀವೂ ಚಿಂತಿಸಬೇಡಿ " ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಕಾರ್ಯದರ್ಶಿಯೂ ಆಗಿರುವ ವಿಎಚ್‌ಪಿ ನಾಯಕ ಚಂಪತ್ ರೈ ಹಾರಿಕೆಯ ಉತ್ತರ ನೀಡಿದ್ದಾರೆ.

"ರಾಮಮಂದಿರವು ದೇಶದ ಹಲವಾರು ಭಕ್ತರ ಪಾಲಿಗೆ ನಂಬಿಕೆಯ ವಿಷಯವಾದರೆ ಬಿಜೆಪಿ ಪಕ್ಷಕ್ಕೆ ಅದೊಂದು ಮಾರಾಟದ ಸರಕು ಮಾತ್ರ" ಎಂದು ಬಳಕೆದಾರರೋರ್ವರು ಕಮೆಂಟ್‌ ಮಾಡಿದ್ದಾರೆ. ಈಗಾಗಲೇ ಟ್ವಿಟರ್‌ ನಲ್ಲಿ 40,000ಕ್ಕೂ ಹೆಚ್ಚು #RamMandirScam ಹ್ಯಾಶ್‌ ಟ್ಯಾಗ್‌ ಅನ್ನು ಬಳಸಲಾಗಿದ್ದು, ದೇಶದಾದ್ಯಂತ ಟ್ರೆಂಡಿಂಗ್‌ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News