ಕವಿ ಸಿದ್ದಲಿಂಗಯ್ಯರ ವಿಧಾನಪರಿಷತ್ ಭಾಷಣ ಮರೆಯಲಾರದ್ದು: ಸಿಎಂ ಯಡಿಯೂರಪ್ಪ

Update: 2021-06-21 13:33 GMT

ಬೆಂಗಳೂರು, ಜೂ.21: ಕವಿ ಸಿದ್ದಲಿಂಗಯ್ಯ ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಪರಿಷತ್‍ನಲ್ಲಿ ಮಾಡಿದ ಭಾಷಣ ಮರೆಯಲಾರದಂತದ್ದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದ್ದಾರೆ.

ಸೋಮವಾರ ನಾಡೋಜ ಡಾ.ಸಿದ್ದಲಿಂಗಯ್ಯ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬೋಧಿವೃಕ್ಷದ ಕೆಳಗೆ ಹಾಗೂ ಕೆಂಪು ಸೂರ್ಯ ಎಂಬ ಎರಡು ಕೃತಿಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಸಿದ್ದಲಿಂಗಯ್ಯ ಪ್ರಮುಖರಾಗಿದ್ದರು. ಅವರು ಬಸವಣ್ಣ, ಅಂಬೇಡ್ಕರ್ ವಿಚಾರಧಾರೆಯನ್ನ ಮೈಗೂಡಿಸಿಕೊಂಡಿದ್ದರು. ಅವರೊಂದಿಗೆ ನನ್ನ ಸಂಬಂಧ ತುಂಬಾ ಆತ್ಮೀಯತೆಯಿಂದ ಕೂಡಿತ್ತು. ಹಲವು ಬಾರಿ ನನಗೆ ಮಾರ್ಗದರ್ಶನ ನೀಡಿದ್ದರು. ಅವರನ್ನ ಕಳೆದುಕೊಂಡು ಕುಟುಂಬ ಸದಸ್ಯರೊಬ್ಬರನ್ನ ಕಳೆದುಕೊಂಡಂತೆ ಆಗಿದೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಕವಿ ಸಿದ್ದಲಿಂಗಯ್ಯಗೆ ಹಲವು ಪ್ರಶಸ್ತಿಗಳು ಬಂದಿವೆ. ಬೋಧಿವೃಕ್ಷ ಅವರ ಕೊನೆ ಕವನ ಸಂಕಲನ. ಅದು ನನಗೆ ಅರ್ಪಿಸಿರುವುದು ನನ್ನ ಮನದುಂಬಿ ಬಂದಿದೆ. ಅವರ ಸ್ಮಾರಕ ನಿರ್ಮಾಣ ವಿಚಾರವಾಗಿ ಸಚಿವರು ಅಧಿಕಾರಗಳ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಸಚಿವ ಶ್ರೀರಾಮುಲು ಮಾತನಾಡಿ, ಕವಿ ಸಿದ್ದಲಿಂಗಯ್ಯ ಅಂಬೇಡ್ಕರ್ ಇದ್ದ ಹಾಗೆ, ದಲಿತ ಕುಟುಂಬದಲ್ಲಿ ಹುಟ್ಟಿ ಇಷ್ಟು ಪ್ರಶಸ್ತಿಗಳನ್ನ ತೆಗೆದುಕೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸಿದ್ದಲಿಂಗಯ್ಯ ಅವರ ಸ್ಮಾರಕ ಮಾಡಲು ಅನೇಕರ ಬೇಡಿಕೆ ಇದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಇದಕ್ಕೆ ಒಪ್ಪಿಗೆ ನೀಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಸೋಮಣ್ಣ, ಶಾಸಕ ಮುನಿರತ್ನ, ಸಿದ್ದಲಿಂಗಯ್ಯ ಕುಟುಂಬ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News