ಜಿ.ಪರಮೇಶ್ವರ, ಕುಮಾರಸ್ವಾಮಿ, ಸಿದ್ದರಾಮಯ್ಯರ ಆಪ್ತರ ಮೇಲೆ ಪೆಗಾಸಸ್ ಮೂಲಕ ಗೂಢಚರ್ಯೆ?

Update: 2021-07-20 15:06 GMT
photo: KPN

ಹೊಸದಿಲ್ಲಿ,ಜು.20: ಪೆಗಾಸಸ್ ಸ್ಪೈವೇರ್ ಹಗರಣವು ಈಗ ಕರ್ನಾಟಕದ ರಾಜ ಕೀಯದ ಬಾಗಿಲಿಗೂ ತಲುಪಿದೆ. ಎರಡು ವರ್ಷಗಳ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಉರುಳಿಸಲು ನಡೆದ ‘ಆಪರೇಶನ್ ಕಮಲ’ಕಾರ್ಯಾಚರಣೆಯಲ್ಲಿ ಪೆಗಾಸಸ್ ಸ್ಪೈವೇರ್ ಬಳಕೆಯಾಗಿರುವ ಸಾಧ್ಯತೆಯಿದೆಯೆಂದು ದಿ ವೈರ್ ಸುದ್ದಿಸಂಸ್ಥೆಯ ವರದಿ ಬಹಿರಂಗಪಡಿಸಿದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾದ ಪತನಕ್ಕೆ ಕೆಲವೇ ಸಮಯದ ಮೊದಲು ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರು ಮತ್ತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಮೊಬೈಲ್ ಫೋನ್ಗಳನ್ನು ಪೆಗಾಸಸ್ ಸ್ಪೈವೇರ್ ದಾಳಿಗೆ ಗುರಿ ಮಾಡಲಾಗಿರುವ ಸಾಧ್ಯತೆಯಿರುವುದಾಗಿ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.


 2019ರಲ್ಲಿ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ 17 ಮಂದಿ ಶಾಸಕರು ರಾಜೀನಾಮೆ ನೀಡಿದ ಪರಿಣಾಮವಾಗಿ ಆಗಿನ ಮುಖ್ಯ ಮಂತ್ರಿಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯನ್ನು ಎದುರಿಸ ಬೇಕಾಗಿ ಬಂದಿತ್ತು. ಈ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಸರಕಾರದ ನಡುವೆ ಅಧಿಕಾರಕ್ಕಾಗಿ ಹಣಾಹಣಿ ನಡೆಯುತ್ತಿದ್ದಾಗ, ಸಿದ್ದರಾಮಯ್ಯ,ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಸೇರಿದಂತೆ ವಿವಿಧ ಪ್ರಮುಖ ರಾಜಕೀಯ ನಾಯಕರನ್ನು ಪೆಗಾಸಸ್ ಸ್ಪೈವೇರ್ ಮೂಲಕ ಕಣ್ಗಾವಲಿಗೊಳ ಪಡಿಸಲಾಗಿತ್ತು ಎಂದು ದಿ ವೈರ್ ವರದಿ ಶಂಕೆ ವ್ಯಕ್ತಪಡಿಸಿದೆ.
ವಿಶ್ವಾಸಮತ ಯಾಚನೆಯಲ್ಲಿ ಕುಮಾರಸ್ವಾಮಿ ಸರಕಾರ ಪತನಗೊಂಡ ಬಳಿಕ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ಹಿಡಿಯುವಲ್ಲಿ ಸಫಲವಾಗಿತ್ತು.
     
ಆದಾಗ್ಯೂ ಡಿಜಿಟಲ್ ಅಪರಾಧ ವಿಧಿವಿಜ್ಞಾನದ ಮೂಲಕ ಪರೀಕ್ಷೆಗೊಳಪಡಿಸದೆ ಕರ್ನಾಟಕದ ಈ ರಾಜಕೀಯ ನಾಯಕರು ಹಾಗೂ ಅವರ ನಿಕಟವರ್ತಿಗಳ ದೂರವಾಣಿ ಸಂಖ್ಯೆಗಳನ್ನು ಸ್ಪೈವೇರ್ ದಾಳಿಗೆ ಗುರಿಪಡಿಸಲಾಗಿರುವುದನ್ನು ದೃಢಪಡಿಸಲು ಸಾಧ್ಯವಿಲ್ಲವೆಂದು ವರದಿ ಸ್ಪಷ್ಟಪಡಿಸಿದೆ. ಫ್ರಾನ್ಸ್ನ ಲಾಭೋದ್ದೇಶರಹಿತ ಮಾಧ್ಯಮಸಂಸ್ಥೆ ‘ಫಾರ್ಬಿಡನ್ ಸ್ಟೋರೀಸ್’ಗೆ ಲಭ್ಯವಾಗಿರುವ ಭಾರತದಲ್ಲಿ ಪೆಗಾಸಸ್ ಸ್ಪೈವೇರ್ ದಾಳಿಗೆ ವಿವಿಧ ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು,ಕಾನೂನುತಜ್ಞರು, ಉನ್ನತ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಗುರಿಪಡಿಸಲಾಗಿತ್ತು. ಸಿದ್ದರಾಮಯ್ಯ ಅವರ ಅಪ್ತಕಾರ್ಯದರ್ಶಿ ವೆಂಕಟೇಶ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿ ಸತೀಶ್ ಮತ್ತು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ದೂರವಾಣಿ ಸಂಖ್ಯೆಗಳನ್ನೂ ಕೂಡಾ ಪೆಗಾಸಸ್ ಮೂಲಕ ಹ್ಯಾಕ್ ಮಾಡಲಾಗಿದೆಯೆಂದು ದಿ ವೈರ್ ವರದಿ ತಿಳಿಸಿದೆ.
ಇಸ್ರೇಲ್ ಮೂಲದ ಸಂಸ್ಥೆ ಎನ್ಎಸ್ಓ ಗ್ರೂಪ್ ಜಗತ್ತಿನಾದ್ಯಂತ 50 ಸಾವಿರಕ್ಕೂ ಅಧಿಕ ಮೊಬೈಲ್ ಫೋನ್ ಸಂಖ್ಯೆಗಳಿಗೆ ಪೆಗಾಸಸ್ ಸ್ಪೈವೇರ್ ಲಿಂಕ್ ಮಾಡಿರುವುದಾಗಿ ವಾಶಿಂಗ್ಟನ್ಪೋಸ್ಟ್, ದಿ ಗಾರ್ಡಿಯನ್, ದಿ ವೈರ್ ಹಾಗೂ ಇತರ ಮಾಧ್ಯಮ ಸಂಸ್ಥೆಗಳು ಎರಡು ದಿನಗಳ ಹಿಂದೆ ಪ್ರಕಟಿಸಿದ ವರದಿ ಬಹಿರಂಗಪಡಿಸಿದೆೆ. ಭಾರತದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ವ್ಯೆಹ ತಜ್ಞ ಪ್ರಶಾಂತ್ ಕಿಶೋರ್ ಹಾಗೂ ಇಬ್ಬರು ಕೇಂದ್ರ ಸಚಿವರು, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ವಿವಿಧ ಸಾಮಾಜಿಕ ಹೋರಾಟಗಾರರು ಹಾಗೂ 40ಕ್ಕೂ ಅಧಿಕ ಪತ್ರಕರ್ತರನ್ನು ಮೊಬೈಲ್ ಫೋನ್ಗಳನ್ನು ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕ್ ಮಾಡಲಾಗಿತ್ತೆಂದು ವರದಿ ತಿಳಿಸಿದೆ.


ಎಚ್ಡಿಕೆ ಆಪ್ತ ಕಾರ್ಯದರ್ಶಿಯ ಫೋನ್ಗೆ ಪೆಗಾಸಸ್ ಕನ್ನ


 ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಖಾಸಗಿ ಕಾರ್ಯದರ್ಶಿ ಸತೀಶ್ಗೆ ಸೇರಿದ ಎರಡು ದೂರವಾಣಿ ಸಂಖ್ಯೆಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿರುವುದಾಗಿ ವೈರ್ ತಿಳಿಸಿದೆ.
   ಪೆಗಾಸಸ್ ಸ್ಪೈವೇರ್ನ ಸಂಭಾವ್ಯ ದಾಳಿಗೆ ಗುರಿಯಾದ ದೂರವಾಣಿ ಸಂಖ್ಯೆಗಳ ಪಟ್ಟಿಯಲ್ಲಿ ತನ್ನ ಎರಡು ದೂರವಾಣಿ ಸಂಖ್ಯೆಗಳು ಇರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿ ಸತೀಶ್ ನಿರಾಕರಿಸಿದ್ದಾರೆ ಆದರೆ 2019ರಲ್ಲಿಯೂ ತಾನು ಆ ದೂರವಾಣಿಸಂಖ್ಯೆಯನ್ನು ಬಳಸುತ್ತಿರುವುದನ್ನು ಅವರು ಖಚಿತಪಡಿಸಿದ್ದಾರೆ

ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ವೆಂಕಟೇಶ್

ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ವೆಂಕಟೇಶ್ ಅವರ ಮೊಬೈಲ್ ಫೋನ್ ಕೂಡಾ ಪೆಗಾಸಸ್ ಸ್ಪೈವೇರ್ ದಾಳಿಗೆ ಸಂಭಾವ್ಯ ಗುರಿಯಾಗಿತ್ತು ಎಂದು ದಿ ವೈರ್ ಬಹಿರಂಗಪಡಿಸಿದೆ. ಸಿದ್ದರಾಮಯ್ಯ ಅವರು ಹಲವಾರು ವರ್ಷಗಳಿಂದ ತನ್ನ ಖಾಸಗಿ ಮೊಬೈಲ್ ಫೋನನ್ನು ಬಳಸುತ್ತಿರಲಿಲ್ಲ. ದೂರವಾಣಿ ಸಂಭಾಷಣೆಗಳಿಗೆ ಅವರು ತನ್ನ ಸಹಾಯಕರ ಮೊಬೈಲ್ ಫೋನ್ಗಳನ್ನೇ ಅವಲಂಭಿಸುತ್ತಿದ್ದರೆನ್ನಲಾಗಿದೆ. ಹೀಗಾಗಿ ಅವರ ಆಪ್ತ ಕಾರ್ಯದರ್ಶಿ ವೆಂಕಟೇಶ್ ಅವರ ಮೊಬೈಲ್ ಫೋನ್ ಸಂಖ್ಯೆಯನ್ನು ದಾಳಿಗೆ ಗುರಿಪಡಿಸಿರಬಹುದೆಂದು ದಿ ವೈರ್ ಅನುಮಾನ ವ್ಯಕ್ತಪಡಿಸಿದೆ.

ದೇವೇಗೌಡ ಭದ್ರತಾಸಿಬ್ಬಂದಿಯ ಮೊಬೈಲ್ ಗೂ ಸ್ಪೈವೇರ್ ದಾಳಿ?


ಕುತೂಹಲಕರವೆಂದರೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಭದ್ರತಾ ಸಿಬ್ಬಂದಿಗಳಲ್ಲೊಬ್ಬರಾಗಿದ್ದ ಪೊಲೀಸ್ ಉದ್ಯೋಗಿ ಮಂಜುನಾಥ್ ಮುದ್ದೇಗೌಡ ಅವರ ದೂರವಾಣಿ ಸಂಖ್ಯೆ ಕೂಡಾ ಪೆಗಾಸಸ್ ಸ್ಪೈವೇರ್ ದಾಳಿಗೆ ಗುರಿಪಡಿಸಲಾಗಿದೆಯೆಂಬುದು ಸೋರಿಕೆಯಾದ ದಾಖಲೆಗಳಿಂದ ತಿಳಿದುಬಂದಿದೆ.

ಸ್ಪೈವೇರ್ ಬಗ್ಗೆ ನನಗೆ ಯಾವುದೇ ಅರಿವು ಇಲ್ಲ. ಆದರೆ ಒಂದು ವೇಳೆ ನನ್ನ ಮೊಬೈಲ್ ದೂರವಾಣಿ ಸಂಖ್ಯೆಯು ಕಣ್ಗಾವಲಿಗೊಳಪಡಿಸಿರುವುದು ಹೌದೇ ಆದಲ್ಲಿ, ಆದನ್ನು ಯಾಕೆ ಮಾಡಲಾಗಿದೆಯೆಂದು ನನಗೆ ತಿಳಿಯುತ್ತಿಲ್ಲ. ಆ ಸಮಯದಲ್ಲಿ ನಾನು ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಾನು ನಿರ್ವಹಿಸುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೂ ಆಗಿರಲಿಲ್ಲ.

ಜಿ. ಪರಮೇಶ್ವರ್
ಮಾಜಿ ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News