3-4 ದಿನಗಳಲ್ಲಿ ನೂತನ ಮುಖ್ಯಮಂತ್ರಿ ನಿರ್ಧಾರ: ಬೊಮ್ಮಾಯಿ
Update: 2021-07-27 07:30 GMT
ಬೆಂಗಳೂರು, ಜು.27: ಮುಂದಿನ ಮೂರು ಅಥವಾ ನಾಲ್ಕು ದಿನಗಳ ಒಳಗೆ ಹೊಸ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ಆರ್.ಟಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ ಆಗಿರುವುದರಿಂದ ಶಾಸಕಾಂಗ ಸಭೆ, ಸಂಸದೀಯ ಮಂಡಳಿ ಸೇರಿ ಮುಂದಿನ ಮುಖ್ಯ ಯಾರು ಆಗಬೇಕು ಎಂಬುದನ್ನು ತೀರ್ಮಾನ ಮಾಡಲಾಗುತ್ತದೆ ಎಂದರು.
ಮುಂದಿನ ಮುಖ್ಯಮಂತ್ರಿಯಾಗಿ ನಿಮ್ಮನ್ನು ಮಾಡಬೇಕು ಎಂದು ಯಡಿಯೂರಪ್ಪರ ಬೆಂಬಲಿಗ ಶಾಸಕರು ತಮ್ಮ ಮನೆಗೆ ಆಗಮಿಸುತ್ತಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಸಿದ ಬೊಮ್ಮಾಯಿ, ನಾನು ಸಚಿವ ಆಗುವುದಕ್ಕಿಂತ ಮೊದಲೂ ಬರುತ್ತಿದ್ದರು. ಈಗಲೂ ಬರುತ್ತಿದ್ದಾರೆ. ಇದು ಹೊಸದು ಏನೂ ಇಲ್ಲ. ವರಿಷ್ಠರ ತೀರ್ಮಾನವೇ ಅಂತಿಮ ಎಂದರು.