ಮೆಟ್ರೋ ಯೋಜನೆ ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಪರಿಣಾಮಕಾರಿ ಪರಿಹಾರ: ತೇಜಸ್ವಿ ಸೂರ್ಯ

Update: 2021-08-07 15:02 GMT

ಬೆಂಗಳೂರು, ಆ.7: ಜಾಗತಿಕವಾಗಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಅತೀ ವೇಗವಾಗಿ ಮುನ್ನುಗ್ಗುತ್ತಿರುವ ಬೆಂಗಳೂರು ನಗರದ ಸಂಚಾರ ದಟ್ಟಣೆಯ ಪರಿಣಾಮಕಾರಿ ಪರಿಹಾರಕ್ಕೆ ನಮ್ಮ ಮೆಟ್ರೋ ಅತ್ಯಂತ ಸಹಕಾರಿಯಾಗಲಿದ್ದು, 2025ರೊಳಗಾಗಿ ಮೆಟ್ರೋ 2, 2ಎ ಮತ್ತು 2ಬಿ ಹಂತಗಳು ಬೆಂಗಳೂರು ನಾಗರಿಕರ ಉಪಯೋಗಕ್ಕೆ ಸಿದ್ಧವಾಗಲಿವೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಶನಿವಾರ ನಗರದ ಡೈರಿ ಸರ್ಕಲ್ ಬಳಿಯ ಟನಲ್ ಬೋರಿಂಗ್ ಮಷಿನ್ ಕಾಮಗಾರಿಯನ್ನು ಮೆಟ್ರೋ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಅವರು, ನಿಗದಿತ ಕಾಲಮಿತಿಗಿಂತಲೂ ಮುಂಚಿತವಾಗಿ ಮೆಟ್ರೋ ಕಾಮಗಾರಿ ಮುಗಿಯುವ ಕುರಿತು ವಿವರಿಸಿದರು.

ಬೆಂಗಳೂರು ನಗರ ಸ್ಟಾರ್ಟ್ ಅಪ್‍ಗಳ ತವರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅವಿಷ್ಕಾರ ಹಾಗೂ ಇತರ ಕ್ಷೇತ್ರಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿದ್ದು ಜಾಗತಿಕ ಪ್ರಾಮುಖ್ಯತೆ ಹೊಂದಿರುವ ನಗರವಾಗಿದೆ. ನಗರದ ಸಂಚಾರ ದಟ್ಟಣೆಗೆ ಪರಿಹಾರವಾಗುವ ನಿಟ್ಟಿನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯು ವೇಗವಾಗಿ ನಡೆಯುತ್ತಿರುವುದು ಅಭಿನಂದನಾರ್ಹ ಎಂದು ಅವರು ಹೇಳಿದರು.
ಪ್ರಸ್ತುತ 56 ಕಿಮೀ ಇರುವ ಮೆಟ್ರೋ ಮಾರ್ಗವು 2025ರೊಳಗಾಗಿ 175 ಕಿಮೀ ವರೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದ್ದು, ಇದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಮಟ್ಟದಲ್ಲಿ ಸಹಕಾರಿಯಾಗಲಿದೆ. ಜಯದೇವ ಮತ್ತು ಸಿಲ್ಕ್ ಬೋರ್ಡ್ ನಿಲ್ದಾಣಗಳು ಡಬಲ್ ಎಲಿವೆಟೆಡ್ ಸ್ಟೇಷನ್ ಗಳಾಗಿರಲಿವೆ, ಈ ಕಾಮಗಾರಿಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಸಹಕಾರವನ್ನು ಶ್ಲಾಘಿಸುತ್ತೇನೆ ಎಂದು ಅವರು ತಿಳಿಸಿದರು.

ನಿಗದಿತ ಕಾಲಮಿತಿಗಿಂತಲೂ ಮುಂಚಿತವಾಗಿ ಸಾರ್ವಜನಿಕರ ಸೇವೆಗೆ ಮೆಟ್ರೋ ಸಿದ್ಧವಾಗಲಿದ್ದು, ಮೆಟ್ರೋ ಅಧಿಕಾರಿಗಳ ಕಾರ್ಯದಕ್ಷತೆಗೆ ಅಭಿನಂದಿಸುತ್ತೇನೆ. ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಮೆಟ್ರೋ ಅಧಿಕಾರಿಗಳು ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಕಾಮಗಾರಿಗೆ ಅಗತ್ಯವಿರುವ ಶೇ.99 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವುದಕ್ಕೆ ನೂತನ ಭೂಸ್ವಾಧೀನ ನೀತಿಯಲ್ಲಿ ತಂದಿರುವ ಬದಲಾವಣೆಗಳು ಕಾರಣವಾಗಿವೆ. ಸೆಪ್ಟೆಂಬರ್ ತಿಂಗಳೊಳಗೆ ಕೇಂದ್ರ ಸರಕಾರದ ‘ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್' ಅನ್ನು ಮೆಟ್ರೋ ಸೇವೆಗಳಿಗೂ ಅಳವಡಿಸಲು ತೀರ್ಮಾನಿಸಿದ್ದು, ಈ ಕಾರ್ಡ್ ಅನ್ವಯ ದೇಶಾದ್ಯಂತ ಎಲ್ಲ ವಿಧದ ಸಾರಿಗೆ ಪ್ರಕಾರಗಳಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಸದ್ಯದಲ್ಲೇ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರೊಂದಿಗೆ ಚರ್ಚಿಸಿ, ನಗರದ ಆಂತರಿಕ (ಒಳ) ಪ್ರದೇಶಗಳಿಂದ, ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಗಳನ್ನು ಇನ್ನಷ್ಟು ಹೆಚ್ಚಿಸಿ, ಅತಿ ಹೆಚ್ಚು ಜನರು ಮೆಟ್ರೋ ಬಳಸುವ ನಿಟ್ಟಿನಲ್ಲಿ ಸಹಕಾರ ಒದಗಿಸುವಂತೆ ಕೋರಲಾಗುವುದು ಎಂದು ಅವರು ತಿಳಿಸಿದರು.

ಮೆಟ್ರೋ ಕಾಮಗಾರಿಯ ಸಂದರ್ಭದಲ್ಲಿ ಸ್ಥಳಾಂತರಗೊಂಡಿರುವ ಮರಗಳ ಪರಿಹಾರವಾಗಿ 10 ಸಾವಿರಕ್ಕೂ ಅಧಿಕ ಮರಗಳನ್ನು ನೆಡಲು ನಮ್ಮ ಮೆಟ್ರೋ ಮುಂದೆಬಂದಿದ್ದು, ಸಾರ್ವಜನಿಕರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ನಮ್ಮ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಝ್ ಹಾಗೂ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಮೆಟ್ರೋ ಕಾಮಗಾರಿಯ ಪ್ರಗತಿ ಕುರಿತು ಸಂಸದ ತೇಜಸ್ವಿ ಸೂರ್ಯಗೆ ವಿವರಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News