ಭಾರತದ ಕ್ರೀಡಾಳುಗಳು ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಮೋದಿಯ ಕಠಿಣ ಪರಿಶ್ರಮವಿದೆ: ಕೇಂದ್ರ ಸಚಿವರ ಹೇಳಿಕೆ
Update: 2021-08-18 10:41 GMT
ಹೊಸದಿಲ್ಲಿ: ಕಳೆದ ನಾಲ್ಕೈದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಪಟ್ಟ ಶ್ರಮದಿಂದಾಗಿ ನೀರಜ್ ಚೋಪ್ರಾರವರಂತಹ ಯುವಜನತೆ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವಂತಾಗಿದೆ ಎಂದು ಕೇಂದ್ರ ಸಂವಹನ ಖಾತೆಯ ರಾಜ್ಯ ಸಚಿವ ದೇವುಸಿಂಗ್ ಚೌಹಾಣ್ ಹೇಳಿದ್ದಾರೆ.
ಉತ್ತರ ಗುಜರಾತ್ನ ಪಟಾನ್ ಎಂಬಲ್ಲಿ ಜನಾಶೀರ್ವಾದ ಯಾತ್ರೆಯ ಸಂಬಂಧ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕೆಲ ನಿರ್ಧಾರಗಳು ಅಭೂತಪೂರ್ವ ಎಂದು ಬಣ್ಣಿಸಿದ ಅವರು "ಮಹಿಳಾ ಕ್ರೀಡಾಳುವೊಬ್ಬರು ಪದಕ ಗೆದ್ದರೆ ಅಥವಾ ನೀರಜ್ ಚೋಪ್ರಾರಂತಹವರು ಚಿನ್ನ ಗೆದ್ದಿದ್ದರೆ ಅದರ ಹಿಂದೆ ಮೋದಿ ಸಾಹೇಬ್ ಅವರ 4-5 ವರ್ಷಗಳ ಶ್ರಮವಿದೆ,'' ಎಂದು ಹೇಳಿದರು.