‘2050ರ ಒಳಗೆ ದಕ್ಷಿಣ ಮುಂಬೈಯ ಶೇ. 80 ಭಾಗ ಮುಳುಗಡೆ’: ಮುನ್ಸಿಪಲ್‌ ಆಯುಕ್ತ ಮಾಹಿತಿ

Update: 2021-08-28 17:31 GMT

ಮುಂಬೈ, ಅ. 28: ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ನರಿಮನ್ ಪಾಯಿಂಟ್ ಹಾಗೂ ರಾಜ್ಯ ಸೆಕ್ರೇಟರಿಯೇಟ್ ಸಹಿತ ದಕ್ಷಿಣ ಮುಂಬೈಯ ಪ್ರಮುಖ ಭಾಗಗಳು 2050ರ ಒಳಗೆ ಮುಳುಗಡೆಯಾಗಲಿದೆ ಎಂದು ಮುಂಬೈ ಮುನ್ಸಿಪಲ್ನ ಆಯುಕ್ತ ಇಕ್ಬಾಲ್ ಸಿಂಗ್ ಚಹಾಲ್ ಶನಿವಾರ ಹೇಳಿದ್ದಾರೆ. 

ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮುಂಬೈ ಪರಿಸರ ಕ್ರಿಯಾ ಯೋಜನೆ ಹಾಗೂ ಅದರ ವೆಬ್ಸೈಟ್ ಅನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಚಹಾಲ್, ಹವಾಮಾನ ಬದಲಾವಣೆಯಿಂದ ದಕ್ಷಿಣ ಮುಂಬೈಯ ಎ, ಬಿ, ಸಿ ಹಾಗೂ ಡಿ ವಾರ್ಡ್ ಗಳ ಶೇ. 70 ಭಾಗ ಮುಳುಗಡೆಯಾಗಲಿದೆ ಎಂದರು. ಪ್ರಕೃತಿ ಎಚ್ಚರಿಕೆ ನೀಡಿದೆ. ಆದರೆ, ಜನರು ಎಚ್ಚೆತ್ತುಕೊಳ್ಳದೇ ಇದ್ದರೆ ಪರಿಸ್ಥಿತಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಕಫ್ ಪರೇಡ್, ನರಿಮನ್ ಪಾಯಿಂಟ್ ಹಾಗೂ ಮಂತ್ರಾಲಯದಂತಹ ಶೇ. 80ರಷ್ಟು ಪ್ರದೇಶಗಳು ಮುಳುಗಡೆಯಾಗಲಿದೆ ಎಂದು ಅವರು ಹೇಳಿದರು. 

ಇದು ತುಂಬಾ ದೂರವಿಲ್ಲ. ಇದು ಕೇವಲ 25ರಿಂದ 30 ವರ್ಷಗಳ ಒಳಗೆ ಅಂದರೆ 2050ರ ಒಳಗೆ ಸಂಭವಿಸಲಿದೆ. ಇದರಿಂದ ಮುಂದಿನ ತಲೆಮಾರು ಮಾತ್ರವೇ ಅಲ್ಲದೆ, ಪ್ರಸಕ್ತ ಜನಾಂಗ ಕೂಡ ತೊಂದರೆಗೀಡಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿರುವ ದಕ್ಷಿಣ ಏಶ್ಯಾದ ಮೊದಲ ನಗರ ಮುಂಬೈ ಎಂದು ಅವರು ಹೇಳಿದ್ದಾರೆ.
   
ಈ ಹಿಂದೆ ನಾವು ನೀರ್ಗಲ್ಲು ಕರಗುವಿಕೆಯಂತಹ ಹವಾಮಾನ ಬದಲಾವಣೆ ಕುರಿತ ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ, ಅದು ನಮ್ಮ ಮೇಲೆ ನೇರವಾಗಿ ಪರಿಣಾಮ ಉಂಟು ಮಾಡಿಲ್ಲ. ಆದರೆ, ಈಗ ಅದು ನಮ್ಮ ಮನೆ ಬಾಗಿಲಿಗೆ ಬಂದು ತಲುಪಿದೆ ಎಂದು ಅವರು ಹೇಳಿದ್ದಾರೆ. 129 ವರ್ಷಗಳಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಮುಂಬೈಗೆ ಚಂಡಮಾರುತ (ನಿಸರ್ಗ) ಅಪ್ಪಳಿಸಿತು ಹಾಗೂ 15 ತಿಂಗಳ ಬಳಿಕ ಮೂರು ಚಂಡ ಮಾರುತ ಅಪ್ಪಳಿಸಿತು. ಅನಂತರ 2020 ಆಗಸ್ಟ್ 5ರಂದು ನಾರಿಮನ್ ಪಾಯಿಂಟ್ ನಲ್ಲಿ ನೀರಿನ ಮಟ್ಟ ಸುಮಾರು 5.5 ಅಡಿ ಏರಿಕೆಯಾಯಿತು ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News