ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗಮನಾರ್ಹ ಸಾಧನೆ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ

Update: 2021-09-07 13:52 GMT

ಬೆಂಗಳೂರು, ಸೆ.7: ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 269 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ಆಡಳಿತ ಪಕ್ಷ ಬಿಜೆಪಿಯ ಹಣ, ಅಧಿಕಾರ ದುರ್ಬಳಕೆ ಮಾಡಿದ ಹೊರತಾಗಿಯೂ 114 ಸ್ಥಾನ ಸಿಕ್ಕಿದೆ, ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಕೋವಿಡ್ ಹಿನ್ನೆಲೆಯಲ್ಲಿ ಸರಿಯಾಗಿ ಪ್ರಚಾರ ಮಾಡಲಾಗದಿದ್ದರೂ 100 ಸ್ಥಾನದಲ್ಲಿ ಗೆದ್ದಿದೆ. ನಮಗೂ ಹಾಗೂ ಬಿಜೆಪಿಗೂ ಇರುವ ಅಂತರ ಕೇವಲ 14 ಸ್ಥಾನ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಪ್ರಿಲ್‍ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. ಸರಕಾರ ಏನೆಲ್ಲ ಪ್ರಯತ್ನ ಮಾಡಿದರೂ ಅವರ ನಿರೀಕ್ಷೆಗೆ ತಕ್ಕಂತೆ ಜನರ ಬೆಂಬಲ ಸಿಕ್ಕಿಲ್ಲ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ ಎಂದರು.

ನಳೀನ್ ಕುಮಾರ್ ಕಟೀಲ್, ಸಿ.ಟಿ.ರವಿ ಸೇರಿದಂತೆ ಬಿಜೆಪಿ ನಾಯಕರು ಬೆಲೆ ಏರಿಕೆ ವಿಚಾರವಾಗಿ ಜನರನ್ನು ದಾರಿ ತಪ್ಪಿಸುವ ಸಂಚು ರೂಪಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಕಾಂಗ್ರೆಸ್ ನೀಡಿದ ತೈಲ ಬಾಂಡ್ ಗಳೇ ಕಾರಣ ಎಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಬಹಿರಂಗ ಚರ್ಚೆ ಮಾಡಲು ಸಿದ್ಧವಿದ್ದೇವೆ ಎಂದು ಅವರು ಸವಾಲು ಹಾಕಿದರು.

ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಬ್ಯಾರೆಲ್ ಕಚ್ಚಾತೈಲ ಬೆಲೆ 120-130 ಡಾಲರ್ ಇದ್ದಾಗ ಜನರಿಗೆ ಹೊರೆ ಹೆಚ್ಚಾಗಬಾರದು ಎಂದು ಸಬ್ಸಿಡಿ ಮೂಲಕ ಹೊರೆ ಇಳಿಸಲು ಕಾಂಗ್ರೆಸ್ 1.34 ಲಕ್ಷ ಕೋಟಿಯಷ್ಟು ತೈಲ ಬಾಂಡ್ ನೀಡಿದ್ದು ನಿಜ. ನಾವು ಜನರ ಒತ್ತಡ ಕಡಿಮೆ ಮಾಡಲು ಇದನ್ನು ಜಾರಿಗೆ ತಂದಿದ್ದೆವೆಯೇ ಹೊರತು ಕಿಕ್ ಬ್ಯಾಕ್ ಪಡೆಯಲು ಇದನ್ನು ನೀಡಿಲ್ಲ ಎಂದು ಉಗ್ರಪ್ಪ ಹೇಳಿದರು.

ಈ ವರ್ಷ 10 ಸಾವಿರ ಕೋಟಿಯಷ್ಟು ಹಣವನ್ನು ಈ ತೈಲ ಬಾಂಡ್‍ಗೆ ಪಾವತಿ ಮಾಡಬೇಕಾಗಿದೆ. ಆದರೆ ಈ ವರ್ಷ ಎಪ್ರಿಲ್-ಜುಲೈ ಅವಧಿಯಲ್ಲಿ ಕೇಂದ್ರ ಸರಕಾರ ತೆರಿಗೆ ಮೂಲಕ 32,492 ಕೋಟಿಯಷ್ಟು ಹಣ ಸಂಗ್ರಹಿಸಿದೆ. ಬಿಜೆಪಿ ಸರಕಾರ ಕಳೆದ 7 ವರ್ಷಗಳಲ್ಲಿ ಈ ಇಂಧನಗಳ ಮೇಲಿನ ತೆರಿಗೆಯಿಂದ 23 ಲಕ್ಷ ಕೋಟಿಯಷ್ಟು ಹಣ ಲೂಟಿ ಮಾಡಿದ್ದಾರೆ ಎಂದು ಅವರು ಕಿಡಿಗಾರಿದರು.

ಕಷ್ಟದ ಸಮಯದಲ್ಲಿ ನಾವು ಬಾಂಡ್ ಮೂಲಕ ಹಣ ಸಂಗ್ರಹಿಸಿ ಜನರ ಮೇಲೆ ಹೊರೆ ಇಳಿಸಲು ಕಾಂಗ್ರೆಸ್ ಪ್ರಯತ್ನಿಸಿದರೆ, ಬಿಜೆಪಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಅದರ ಪ್ರಯೋಜನ ಜನರಿಗೆ ಸಿಗದಂತೆ ಮಾಡಿದೆ. ಆಮೂಲಕ ಪೆಟ್ರೋಲ್ ದರ 105, ಡೀಸೆಲ್ ದರ 94 ಹಾಗೂ ಅಡುಗೆ ಅನಿಲ 887 ರೂ.ಆಗಿದೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವ್ಯತ್ಯಾಸ ಎಂದು ಉಗ್ರಪ್ಪ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹೇಳುವ ಅಚ್ಛೇ ದಿನ್ ಇದೇನಾ? ಜನರ ಬದುಕು ದುರ್ಬರ ಮಾಡುವುದೇ ಬಿಜೆಪಿಯ ಅಚ್ಛೇ ದಿನ್. ದೇಶದ ಜನರ ಭಾವನೆಯಲ್ಲಿ ಪ್ರಧಾನಿ ಇಮೇಜ್ ಕಡಿಮೆಯಾಗಿದೆ. ಜಾಗತಿಕ ಸಂಸ್ಥೆಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ಕೈಬಿಟ್ಟಿವೆ. ದೇಶದ ಜಿಡಿಪಿ ಋಣಾತ್ಮಕವಾಗಿ ಸಾಗಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದು, ಇದು ದೇಶಕ್ಕೆ ಆಗಿರುವ ಅಪಮಾನ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತವೇ ಕಾರಣ ಎಂದು ಅವರು ಟೀಕಿಸಿದರು.

ಮೋದಿ ಅವರು ಬೆಲೆ ಏರಿಕೆ ಮೂಲಕ ಜನರ ಬದುಕಿನ ಮೇಲೆ ಚಪ್ಪಡಿಕಲ್ಲು ಎಳೆಯುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ನಾವು ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಬೆಲೆ ನಿಯಂತ್ರಿಸುತ್ತೇವೆ ಎಂದಿದ್ದರು. ಇನ್ನು ರಾಜ್ಯದಿಂದ ಸಂಗ್ರಹಿಸಲಾಗುವ ಜಿಎಸ್ಟಿಯಲ್ಲಿ 2018-19ರಲ್ಲಿ 10,754 ಕೋಟಿಯಷ್ಟು, 2029-20ರಲ್ಲಿ 16,620 ಕೋಟಿಯಷ್ಟು, 2020-21ರಲ್ಲಿ 12 ಸಾವಿರ ಕೋಟಿ, 2021-22ರಲ್ಲಿ 8,542.17 ಕೋಟಿಯಷ್ಟು ಜಿಎಸ್ಟಿ ಪರಿಹಾರ ಬರಬೇಕು ಎಂದು ಅವರು ಹೇಳಿದರು.

ಎಪ್ರಿಲ್-ಮೇ ತಿಂಗಳಲ್ಲೇ 5500 ಕೋಟಿಯಷ್ಟು ಪರಿಹಾರ ಬರಬೇಕು. ಆದರೆ ಕೇಂದ್ರ ಸರಕಾರ ಕಳೆದ ಮಾರ್ಚ್ 27 ರಂದು 2970 ಕೋಟಿ ಮಾತ್ರ. ಇನ್ನು 11 ಸಾವಿರ ಕೋಟಿಗೂ ಹೆಚ್ಚು ಹಣ ನೀಡಬೇಕಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೇಂದ್ರ ಸರಕಾರದ ಸ್ವಚ್ಛ ಭಾರತ, ಪಿಎಂಜಿಎಸ್, ಪಿಎಂ ಆವಾಸ್ ಯೋಜನೆ, ರಾಷ್ಟ್ರೀಯ ಸುಸ್ಥಿರ ಕೃಷಿ, ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆ, ವಿದ್ಯಾರ್ಥಿ ವೇತನ ಸೇರಿದಂತೆ ಪ್ರಮುಖ ಯೋಜನಗೆಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಯಾಪೈಸೆ ಅನುದಾನ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ ಎಂದು ಅವರು ತಿಳಿಸಿದರು.

ಕೇಂದ್ರದ ಪ್ರಮುಖ ವಲಯಗಳಾದ ಗ್ರಾಮೀಣಾಭಿವೃದ್ಧಿ, ವಸತಿ, ಕೃಷಿ ಸೇರಿದಂತೆ ಇತರೆ ವಲಯಗಳಿಗೆ 3,890 ಕೋಟಿ ರೂ. ಅನುದಾನ ಬೇಕಾಗಿದೆ. ಅದರಲ್ಲಿ ಕೇಂದ್ರದ ಪಾಲು 2,410 ಕೋಟಿ ರೂ., ರಾಜ್ಯದ ಪಾಲು 1,479 ಕೋಟಿ ರೂ. ಇದೆ. ಇದರಲ್ಲಿ ಕೇಂದ್ರದಿಂದ ಒಂದು ಪೈಸೆಯೂ ಕೇಂದ್ರ ಸರಕಾರದಿಂದ ನೀಡುತ್ತಿಲ್ಲ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪಿಎಂಜಿಎಸ್‍ವೈ ಒಂದೇ ಯೋಜನೆಯಲ್ಲಿ 900 ಕೋಟಿ ರೂ., ಸ್ವಚ್ಛ ಭಾರತ ಯೋಜನೆಯಲ್ಲಿ 290 ಕೋಟಿ ರೂ., ಆವಾಸ್ ಯೋಜನೆಯಲ್ಲಿ 300 ಕೋಟಿ ರೂ., ಸುಸ್ಥಿರ ಯೋಜನೆಗೆ 117 ಕೋಟಿ ರೂ., ಆಹಾರ ಭದ್ರತೆಗೆ 98.3 ಕೋಟಿ ರೂ., ಕೃಷಿ ಸಿಂಚಾಯ್ ಯೋಜನೆಗೆ 270 ಕೋಟಿ ರೂ.ನೀಡಬೇಕಿದೆ. ಕೊಟ್ಟಿಲ್ಲ ಯಾಕೆ? ಎಂದು ಅವರು ಪ್ರಶ್ನಿಸಿದರು.

ರಾಜ್ಯದ ಜನರಿಗೆ ತೆರಿಗೆ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಮತ್ತೊಂದೆಡೆ ನಮ್ಮ ಜಿಎಸ್‍ಟಿ ಪಾಲು ನೀಡುತ್ತಿಲ್ಲ. ಈ ಪ್ರಧಾನಿಯನ್ನು ಏನೆಂದು ಕರೆಯಬೇಕು? ಈ ದೇಶ ಕಂಡ ಅತ್ಯಂತ ಸುಳ್ಳುಗಾರ, ಜನರ ದಾರಿ ತಪ್ಪಿಸುವ ಪ್ರಧಾನಿ ಎಂದರೆ ಅದು ಮೋದಿ. ಈ ದೇಶ ಕಂಡ ಅತ್ಯಂತ ಭ್ರಷ್ಟ ಪ್ರಧಾನಿ ಮೋದಿ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಬೋಫೋರ್ಸ್‍ನಲ್ಲಿ 63 ಕೋಟಿ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 2ಜಿ, ಕಲ್ಲಿದ್ದಲಿನಲ್ಲಿ 1.74 ಲಕ್ಷ ಕೋಟಿ ಹಗರಣ ಎಂದು ಆರೋಪ ಮಾಡಿದ್ದರು. ನಾವು ತಪ್ಪು ಮಾಡಿಲ್ಲ ಎಂಬ ವಿಶ್ವಾಸದಿಂದ ತನಿಖೆಗೆ ಆದೇಶ ಮಾಡಿದ್ದೆವು. ಇವರು ಅಧಿಕಾರಕ್ಕೆ ಬಂದು 7 ವರ್ಷವಾಗಿದೆ, ನಾವು ಹಗರಣ ಮಾಡಿದ್ದರೆ ನಮ್ಮನ್ನು ಜೈಲಿಗೆ ಹಾಕಬೇಕಿತ್ತು. ಯಾಕೆ ಹಾಕಿಲ್ಲ ಎಂದರೆ ಭ್ರಷ್ಟಾಚಾರ ನಡೆದಿಲ್ಲ ಎಂದು ಅವರು ಹೇಳಿದರು.

ಆದರೆ, ಈ ಸರಕಾರ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 39,600 ಕೋಟಿ ಕಿಕ್ ಬ್ಯಾಗ್ ಪಡೆದಿದೆ. 2001ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ದೇಶಕ್ಕೆ 126 ಫೈಟರ್ ಜೆಟ್ ಬೇಕು ಎಂದು ಸಂಪುಟದಲ್ಲಿ ನಿರ್ಧಾರ ಕೈಗೊಂಡಿದ್ದರು. ನಂತರ 2008ರಲ್ಲಿ ಅದು ಟೆಂಡರ್ ಕರೆದು 2011ರಲ್ಲಿ ಅಂತಿಮವಾಗುತ್ತದೆ. ಆಗ ಒಂದು ಯುದ್ಧ ವಿಮಾನಕ್ಕೆ 570 ಕೋಟಿ ರೂ. ದರ ನಿಗದಿ ಮಾಡಿತ್ತು. ಆದರೆ ಬಿಜೆಪಿ ಸರಕಾರ 2015ರಲ್ಲಿ ಕೇವಲ 36 ಯುದ್ಧ ವಿಮಾನವನ್ನು ಪ್ರತಿ ವಿಮಾನಕ್ಕೆ 1670 ಕೋಟಿ ರೂ.ಗೆ ದರ ಏರಿಸುತ್ತಾರೆ. ಇದರ ನಿರ್ಮಾಣದ ಜವಾಬ್ದಾರಿಯನ್ನು 11 ದಿನಗಳ ಹಿಂದಷ್ಟೇ ಹುಟ್ಟುಕೊಂಡಿದ್ದ ಅನಿಲ್ ಅಂಬಾನಿ ಅವರ ಕಂಪನಿಗೆ ನೀಡುತ್ತಾರೆ. ಒಂದು ವಿಮಾನಕ್ಕೆ 1100 ಕೋಟಿ ಎಂಬಂತೆ 36 ಯುದ್ಧ ವಿಮಾನಕ್ಕೆ 39,600 ಕೋಟಿ ಎಂದು ಅವರು ಹೇಳಿದರು.

ಯುಪಿಎ ಇದ್ದಾಗ ಪೆಟ್ರೋಲ್ ಮೇಲೆ 9 ರೂಪಾಯಿ, ಡೀಸೆಲ್ ಮೇಲೆ 3 ರೂಪಾಯಿ ತೆರಿಗೆ ಹಾಕಲಾಗುತ್ತಿತ್ತು. ಆದರೆ ಇಂದು 32.90 ಹಾಗೂ 31.80 ರೂಪಾಯಿ ತೆರಿಗೆ ಹಾಕಲಾಗಿದೆ. ಮಾತೆತ್ತಿದರೆ ಬಾಂಡ್ ಸಾಲ ತೀರಿಸಬೇಕು ಎನ್ನುವ ಬಿಜೆಪಿಗರಿಗೆ ನಾಚಿಕೆಯಾಗಬೇಕು. ಅವರು ರಾಜಕಾರಣ ಮಾಡಲಿ, ಆದರೆ ಸುಳ್ಳು ಹೇಳುವುದನ್ನು ನಿಲ್ಲಿಸಲಿ. ಅವರಿಗೆ ದಮ್ಮು, ತಾಕತ್ತು ಇದ್ದರೆ ಈ ವಿಚಾರವಾಗಿ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಉಗ್ರಪ್ಪ ಸವಾಲು ಹಾಕಿದರು.

ಬಿಜೆಪಿ ಅಸಮರ್ಥ ಆಡಳಿತ, ಜನವಿರೋಧಿ ಪ್ರವೃತ್ತಿಯಿಂದ ಇಂದು ಬೆಲೆ ಏರಿಕೆ ಆಗಿದೆ. ಇದೇ ಕಾರಣಕ್ಕೆ ಪ್ರಧಾನಿ ಅವರ ಜನಪ್ರಿಯತೆ ಶೇ.64ರಿಂದ ಶೇ.24ಕ್ಕೆ ಕುಸಿದಿದೆ ಎಂದು ಉಗ್ರಪ್ಪ ತಿಳಿಸಿದರು.  

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಬಿಜೆಪಿಯವರ ಬಂಡತನ ಹೇಗಿದೆ ಎಂದರೆ, ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಈ ರಾಜ್ಯದ ಜನ ಬೆಲೆ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ಬಗ್ಗೆ ನಾವು ಮಾತನಾಡುವ ಅಗತ್ಯವಿಲ್ಲ. ಜನ ಊಟ, ಪೂಜೆ ಮಾಡುತ್ತಿದ್ದಾರೆ ಎಂದು ಕಟೀಲ್ ಹಾಗೂ ರವಿಕುಮಾರ್ ಅವರು ಹೇಳಿದ್ದಾರೆ ಎಂದರು.

ಬೆಲೆ ಏರಿಕೆ ಸಮರ್ಥಿಸಿಕೊಂಡು ಜನ ಸುಮ್ಮನಿದ್ದಾರೆ ಎಂಬುದನ್ನು ಬಿಂಬಿಸುತ್ತಿರುವವರು ಜನನಾಯಕರೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ನು ಕೇಂದ್ರದಿಂದ ಬರುವ ಹಣದ ಜತೆಗೆ ಕೇಂದ್ರದ ಯೋಜನೆಗೆ ಅನುದಾನ ಬಂದಿಲ್ಲ. ಇನ್ನು ರಾಜ್ಯದಲ್ಲಿನ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಲ್ಲಿ ಹಾಸ್ಟೆಲ್, ಸ್ಕಾಲರ್‍ಶಿಪ್ ಎಲ್ಲವೂ ನಿಂತಿದೆ. ವಿದ್ಯೆಗೆ ಅವಕಾಶ ಇಲ್ಲವಾಗಿದೆ. ಸಿದ್ದರಾಮಯ್ಯ ಅವರು ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ರೂಪಾಯಿ ನೀಡುವ ವಿದ್ಯಾಸಿರಿ ಯೋಜನೆ ನೀಡಿದ್ದರು. ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ನೀಡುವ ಗ್ರಾಂಟ್, ಪಿಎಚ್‍ಡಿ ವಿದ್ಯಾರ್ಥಿಗಳಿಗೆ ನೀಡುವ ಹಣ ನಿಂತಿದೆ. ಇದೆಲ್ಲ ನೋಡಿದಾಗ, ಮಾನವ ಸಂಪನ್ಮೂಲ ಬೆಳೆಯಲು ಈ ಸರಕಾರದಲ್ಲಿ ಅವಕಾಶ ಇದೆಯೇ? ಎಂದು ಅವರು ಪ್ರಶ್ನಿಸಿದರು.

ಕೋವಿಡ್ ಸಮಯದಲ್ಲಿ ನೆರವಾಗುತ್ತಿದ್ದ ಆಹಾರ ಭದ್ರತೆ, ಪಿಎಂಜಿಎಸ್‍ವೈನಿಂದ ನೀಡುವ ಕೂಲಿಯಂತಹ ಯೋಜನೆಗೆ ಹಣ ಬಿಡುಗಡೆಯಾಗಿಲ್ಲ ಎಂದರೆ ಈ ಸರಕಾರ ಯಾವ ಹಂತಕ್ಕೆ ತಲುಪಿದೆ. ಇನ್ನು 15ನೇ ಹಣಕಾಸು ಸಮಿತಿ ಶಿಫಾರಸ್ಸಿನಂತೆ ರಾಜ್ಯಕ್ಕೆ ಹಣ ಬಂದಿಲ್ಲ. 5495 ಕೋಟಿ ರೂ. ಬರಬೇಕಾಗಿತ್ತು. ಆದರೆ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ ಎಂದು ಅವರು ಟೀಕಿಸಿದರು.

ಬಿಜೆಪಿ ಭಾವನಾತ್ಮಕವಾಗಿ ಪ್ರಚೋದನೆ ನೀಡುತ್ತದೆಯೇ ಹೊರತು ಜನಪರ ಕಾರ್ಯಕ್ರಮ ನೀಡುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಇದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಯಡಿಯೂರಪ್ಪ ಅವರಿದ್ದರು ಅದಕ್ಕಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಭಾವಿಸಿದ್ದೆ. ಬೊಮ್ಮಾಯಿ ಅವರು ಬಂದ ನಂತರವೂ ಅದೇ ಪರಿಸ್ಥಿತಿ ಮುಂದುವರಿದರೆ ಮುಂದೆ ರಾಜ್ಯದ ಗತಿ ಏನು ಎಂಬ ಪ್ರಶ್ನೆ ಮೂಡುತ್ತದೆ ಎಂದು ರೇವಣ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News