ಲಸಿಕೆ ಪಡೆಯಲಾಗದವರಿಗೆ ಮನುಷ್ಯರಾಗಿ ಬದುಕಿಕೊಳ್ಳಲು ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ

Update: 2021-09-15 11:58 GMT

ಬೆಂಗಳೂರು: 'ದೇಶದಲ್ಲೂ, ನಮ್ಮ ರಾಜ್ಯದಲ್ಲೂ ಕೋವಿಡ್ ಲಸಿಕೆ ನೀಡುವ ಕಾರ್ಯವು ಭರದಿಂದ ಸಾಗಿರುವಂತೆ, ಲಸಿಕೆ ಪಡೆಯಲಾಗದವರನ್ನು ದೂರವಿರಿಸುವ, ಹೊರಗುಳಿಸುವ ಕೆಲಸಗಳಾಗುತ್ತಿರುವುದು ಅತೀವ ನೋವನ್ನೂ, ಭಯವನ್ನೂ ಉಂಟು ಮಾಡುತ್ತಿರುವ ಕಾರಣಕ್ಕೆ ಅಂಥವರ ಪರವಾಗಿ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ' ಎಂದು 25 ಮಂದಿ ಸಮಾನ ಮನಸ್ಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. 

ಈ ಕುರಿತು ಸಮಾನ ಮನಸ್ಕರಾದ ಡಾ.ಜಿ.ರಾಮಕೃಷ್ಣ, ಚಿಂತಕರು ಬೆಂಗಳೂರು, ಪ್ರೊ.ಬರಗೂರು ರಾಮಚಂದ್ರಪ್ಪ, ಚಿಂತಕರು ಬೆಂಗಳೂರು, ಶ್ರೀ ಮಾವಳ್ಳಿ ಶಂಕರ, ಅಧ್ಯಕ್ಷರು,ದಲಿತ ಸಂಘರ್ಷ ಸಮಿತಿ ಕರ್ನಾಟಕ, ಡಾ.ಸಿದ್ದನಗೌಡ ಪಾಟೀಲ, ಸಂಪಾದಕ, ಹೊಸತು ಪತ್ರಿಕೆ, ಬೆಂಗಳೂರು, ಪ್ರೊ. ನರೇಂದ್ರ ನಾಯಕ್, ಅಧ್ಯಕ್ಷರು, ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟ,ಶ್ರೀಮತಿ ಕೆ ನೀಲಾ, ಜನವಾದಿ ಮಹಿಳಾ ಸಂಘಟನೆ, ಕಲಬುರ್ಗಿ, ಶ್ರೀಮತಿ ಜ್ಯೋತಿ ಎ, ಭಾರತೀಯ ಮಹಿಳಾ ಒಕ್ಕೂಟ, ಡಾ. ಪಿವಿ ಭಂಡಾರಿ, ನರಮಾನಸಿಕ ತಜ್ಞರು, ಉಡುಪಿ, ಡಾ. ಶಶಿಧರ ಬೀಳಗಿ, ನರಮಾನಸಿಕ ತಜ್ಞರು, ಬೆಂಗಳೂರು, ಡಾ. ವಾಣಿ ಕೋರಿ, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು, ಶಿವಮೊಗ್ಗ, ಡಾ. ಕೃಷ್ಣಮೋಹನ ಪ್ರಭು, ಶಸ್ತ್ರಚಿಕಿತ್ಸಾ ತಜ್ಞರು, ಮೂಡಬಿದಿರೆ,  ಡಾ. ಎರಿಕ್ ಲೋಬೊ, ಪ್ರೊಫೆಸರ್, ಜೀವರಸಾಯನ ವಿಜ್ಞಾನ, ಮಂಗಳೂರು, ಡಾ. ಸತ್ಯಪ್ರಕಾಶ್ ಎಂ, ಶ್ರೀ ಬಾಲಾಜಿ ಆಸ್ಪತ್ರೆ, ರಾಮಮೂರ್ತಿ ನಗರ, ಬೆಂಗಳೂರು, ಡಾ.ವಿಪಿ ನಿರಂಜನಾರಾಧ್ಯ, ಶಿಕ್ಷಣ ತಜ್ಞರು, ಬೆಂಗಳೂರು, ಶ್ರೀ ಶಂಕರ ಹಲಗತ್ತಿ, ಮಕ್ಕಳ ಶಿಕ್ಷಣ ತಜ್ಞರು, ಧಾರವಾಡ, ಡಾ.ಬಿ ಆರ್ ಮಂಜುನಾಥ, ಸಮಕಾಲೀನ ಸಾಂಸ್ಕೃತಿಕ ವೇದಿಕೆ ಬೆಂಗಳೂರು, ಶ್ರೀ ಕೇಸರಿ ಹರವೂ, ಚಲನ ಚಿತ್ರ ನಿರ್ದೇಶಕರು, ಬೆಂಗಳೂರು, ಶ್ರೀ ರಾಜಾರಾಂ ತಲ್ಲೂರು, ಪತ್ರಕರ್ತರು, ಲೇಖಕರು, ಉಡುಪಿ,  ಡಾ.ಕೆ ಎಸ್ ಜನಾರ್ದನ, ಕಾರ್ಯದರ್ಶಿ, ಬಿಕೆಎಂಯು, ಕರ್ನಾಟಕ, ಶ್ರೀ ಶಿವರಾಜ ಬಿರಾದಾರ್, ಸಂಪಾದಕರು, ಕೆಂಬಾವುಟ, ಶ್ರೀ ನಾಗೇಶ್ ಕಲ್ಲೂರು, ಸಮದರ್ಶಿ ವೇದಿಕೆ, ಮಂಗಳೂರು, ಶ್ರೀ ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್‌ಐ, ಕರ್ನಾಟಕ, ಶ್ರೀ ಹರೀಶ್ ಬಾಲಾ, ರಾಜ್ಯಾಧ್ಯಕ್ಷರು, ಎಐವೈಎಫ್, ಕರ್ನಾಟಕ, ಶ್ರೀಮತಿ ಕೆ ಜ್ಯೋತಿ, ಅಧ್ಯಕ್ಷರು, ಎಐಎಸ್‌ಎಫ್, ಕರ್ನಾಟಕ, ಶ್ರೀ ಅಮರೇಶ್ ಗಡಗದ್, ರಾಜ್ಯಾಧ್ಯಕ್ಷರು, ಎಸ್‌ಎಫ್ಐ ಇವರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

'ಕೇಂದ್ರ ಸರಕಾರವು ಕೊರೋನ ಲಸಿಕೆಯನ್ನು ಪಡೆಯುವುದು ಐಚ್ಚಿಕವೆಂದು ಸ್ಪಷ್ಟವಾಗಿ ಪ್ರಕಟಿಸಿದ್ದು, ಹಲವು ನ್ಯಾಯಾಲಯಗಳಲ್ಲಿ ಸಲ್ಲಿಸಿದ ಅಫಿಡವಿಟ್ ಗಳಲ್ಲೂ ಇದನ್ನೇ ಹೇಳಿದೆ. ಈಶಾನ್ಯದ ಎಲ್ಲಾ ರಾಜ್ಯಗಳ ಉಚ್ಚ ನ್ಯಾಯಾಲಯಗಳು, ಕೇರಳ, ಗುಜರಾತ್ ಉಚ್ಚ ನ್ಯಾಯಾಲಯಗಳು ಲಸಿಕೆ ಹಾಕಿಸುವುದನ್ನು ಕಡ್ಡಾಯವೆಂದು ವಿಧಿಸುವುದಾಗಲೀ, ಲಸಿಕೆ ಹಾಕಿಸಿಕೊಳ್ಳಲಾಗದವರನ್ನು ವಿವಿಧ ಸೇವೆಗಳಿಂದ ಅಥವಾ ಪ್ರವೇಶಾತಿಗಳಿಂದ ಹೊರಗುಳಿಸುವುದಾಗಲೀ ಸರಿಯಲ್ಲವೆಂದು ಈಗಾಗಲೇ ಆದೇಶಗಳನ್ನು ನೀಡಿವೆ. ಈ ವಿಚಾರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲೂ, ಕರ್ನಾಟಕ ಹಾಗೂ ಇನ್ನೂ ಹಲವು ಉಚ್ಚ ನ್ಯಾಯಾಲಯಗಳಲ್ಲೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸಲಾಗಿದ್ದು ಅವು ವಿಚಾರಣೆಯಲ್ಲಿವೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

'ಕರ್ನಾಟಕದಲ್ಲಿ ಲಸಿಕೆ ಪಡೆಯದವರಿಗೆ ಪಡಿತರ ಇಲ್ಲ, ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶವಿಲ್ಲ, ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪಾರ ಮಳಿಗೆಗಳಲ್ಲಿ ಕೆಲಸ ಮಾಡುವಂತಿಲ್ಲ, ಕೆಲವು ಸಂಸ್ಥೆಗಳಲ್ಲಿ ಕೆಲಸಕ್ಕೆ ಬರುವಂತಿಲ್ಲ, ಕಾಲೇಜುಗಳೊಳಕ್ಕೆ ಪ್ರವೇಶವಿಲ್ಲ, ರಾಜ್ಯದೊಳಕ್ಕೆ ಲಸಿಕೆ ಯಾ ಪರೀಕ್ಷೆಯಿಲ್ಲದೆ ಪ್ರವೇಶಿಸುವಂತಿಲ್ಲ, ಲಸಿಕೆ ನಿರಾಕರಿಸಿದರೆ ಶಿಕ್ಷಾರ್ಹವಾಗುತ್ತದೆ ಎಂಬಿತ್ಯಾದಿ ಆದೇಶಗಳು, ಹೇಳಿಕೆಗಳು, ಸರ್ಕಾರಿ ಆಡಳಿತ ವ್ಯವಸ್ಥೆಯ ವಿವಿಧ ಸ್ತರಗಳಿಂದಲೂ, ಖಾಸಗಿ ಸಂಸ್ಥೆಗಳಿಂದಲೂ ಪ್ರಕಟಗೊಂಡಿವೆ. ಇದಕ್ಕಿದಿರಾಗಿ, ರಾಜ್ಯದ ಮುಖ್ಯ ಕಾರ್ಯದರ್ಶಿಯವರೇ ಸೆಪ್ಟೆಂಬರ್ 2, 2021ರಂದು ಸುತ್ತೋಲೆ ಹೊರಡಿಸಿ ಯಾವುದೇ ಕಾರ್ಯಕ್ರಮ ಯಾ ಯೋಜನೆಗಳಿಗೆ ಲಸಿಕೆ ಹಾಕುವಿಕೆಯನ್ನು ಜೋಡಿಸಲಾಗಿಲ್ಲ ಎಂದೂ, ಹಾಗೆ ಯಾರಾದರೂ ತಪ್ಪಾಗಿ ಜೋಡಿಸಿದ್ದರೆ ಅವನ್ನು ಈ ಕೂಡಲೇ ಹಿಂಪಡೆಯಬೇಕೆಂದೂ ಸ್ಪಷ್ಟ ಪಡಿಸಿದ್ದಾರೆ.ಅಲ್ಲದೆ, ಜೂನ್ 28, 2021ರಂದು ಕಾಲೇಜು ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆಯಲ್ಲೂ ಕಾಲೇಜುಗಳಲ್ಲಿ ಲಸಿಕೆ ಹಾಕುವುದನ್ನು ಉತ್ತೇಜಿಸಬೇಕು ಎಂದಷ್ಟೇ ಹೇಳಲಾಗಿದೆಯಲ್ಲದೆ, ಕಡ್ಡಾಯವೆಂದಾಗಲೀ, ಲಸಿಕೆ ಹಾಕದವರಿಗೆ ಒಳಕ್ಕೆ ಪ್ರವೇಶವಿಲ್ಲ ಎಂದಾಗಲೀ ಎಲ್ಲೂ ಹೇಳಿಲ್ಲ. ಒಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉನ್ನತ ಮಟ್ಟದಲ್ಲಿ ಅಧಿಕೃತವಾಗಿ ಹೊರಡಿಸಿರುವ ಸುತ್ತೋಲೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಐಚ್ಚಿಕವೆಂದೂ, ಅದನ್ನು ಯಾವುದೇ ಕಾರ್ಯಕ್ರಮದೊಂದಿಗೆ ತಳುಕು ಹಾಕಿ ಕಡ್ಡಾಯಗೊಳಿಸಲಾಗಿಲ್ಲವೆಂದೂ ಸ್ಪಷ್ಟ ಪಡಿಸಿದ್ದರೆ, ಕೆಳಮಟ್ಟದಲ್ಲಿ ಲಸಿಕೆ ಹಾಕುವುದನ್ನು ಕಡ್ಡಾಯಗೊಳಿಸಿ, ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದವರನ್ನು ಹೊರಗುಳಿಸುವ, ಶಿಕ್ಷಿಸುವ, ಬೆದರಿಕೆಗಳನ್ನು ಹಾಕಲಾಗುತ್ತಿದೆ' ಎಂದು ತಿಳಿಸಿದ್ದಾರೆ.

'ಕೊರೋನ ನಿಯಂತ್ರಣದಲ್ಲಿ ಈ ಹೊಸ ಲಸಿಕೆಗಳ ಪಾತ್ರವು ಅದೇನೇ ಇದ್ದರೂ ಕೂಡ, ಲಸಿಕೆ ಹಾಕಿಸಿಕೊಳ್ಳಲಾಗದವರನ್ನು ಹೊರಗುಳಿಸುವ ಕ್ರಮವು ಅಸಾಂವಿಧಾನಿಕವೂ, ಅನೈತಿಕವೂ, ನ್ಯಾಯಬಾಹಿರವೂ ಆಗುವುದಷ್ಟೇ ಅಲ್ಲ, ಅಮಾನುಷವೂ ಆಗುತ್ತದೆ. ಕೊರೋನ ಸೋಂಕು ಈಗಾಗಲೇ 75% ಜನರಿಗೆ ತಗಲಿ ಅವರಲ್ಲಿ ರೋಗರಕ್ಷಣೆಯನ್ನು ಉಂಟು ಮಾಡಿರಬಹುದೆಂದು ಎಲ್ಲಾ ಅಧ್ಯಯನಗಳಲ್ಲೂ ಹೇಳಲಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಈ ಹೊಸ ಸೋಂಕಿನ ಹರಡುವಿಕೆಯೂ, ಅದರ ಸಮಸ್ಯೆಗಳೂ ಮರೆಯಾಗಬಹುದೆಂದು ಅನೇಕ ತಜ್ಞರು ಈಗಾಗಲೇ ಹೇಳಿದ್ದಾರೆ. ಹಾಗಿರುವಾಗ ಲಸಿಕೆ ಹಾಕಿಸಿಕೊಳ್ಳಲಾಗದವರನ್ನು ಶಿಕ್ಷಣ, ನೌಕರಿ, ಪಡಿತರಗಳಿಂದ ಹೊರಗಿಟ್ಟರೆ ಅವರು ಊಟವಿಲ್ಲದೆ, ಕಲಿಕೆಯಿಲ್ಲದೆ, ನೌಕರಿಯನ್ನು ಪಡೆಯಲಾಗದೆ, ಆಜೀವಪರ್ಯಂತ ನರಳಬೇಕಾಗುತ್ತದೆ. ಆದ್ದರಿಂದ ತಾತ್ಕಾಲಿಕವಾಗಿರುವ ಕೊರೋನ ಸೋಂಕೊಂದನ್ನೇ ಪರಿಗಣಿಸಿ ಅದಕ್ಕೆ ಲಸಿಕೆ ಪಡೆಯಲಾಗದವರ ಇಂದನ್ನೂ, ನಾಳೆಗಳನ್ನೂ ಶಾಶ್ವತವಾಗಿ ನಾಶ ಮಾಡುವ ಯಾವುದೇ ಕೆಲಸಗಳು ಅಕ್ಷಮ್ಯವಾಗುತ್ತವೆ, ಅಸ್ವೀಕಾರಾರ್ಹವಾಗುತ್ತವೆ. ಲಸಿಕೆ ಪಡೆದವರಿಗೂ ಸೋಂಕು ತಗಲಬಹುದು, ಅವರಿಂದಲೂ ಅದು ಹರಡಬಹುದು ಎನ್ನುವುದು ಈಗ ಎಲ್ಲೆಡೆ ಸ್ಪಷ್ಟವಾಗಿರುವಾಗ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದವರನ್ನು ಬಹಿಷ್ಕರಿಸುವುದು ಅಥವಾ ಅವರನ್ನು ಅಪರಾಧಿಗಳಂತೆ ಬಿಂಬಿಸುವುದು ಅಥವಾ ಅವರಲ್ಲಿ ಅಪರಾಧಿ ಪ್ರಜ್ಞೆಯನ್ನು ಮೂಡಿಸಲು ಯತ್ನಿಸುವುದು ತೀರಾ ತಪ್ಪಾಗುತ್ತದೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ಓರ್ವ ವ್ಯಕ್ತಿಯು ಲಸಿಕೆಯನ್ನು ಹಾಕಿಸಿಕೊಳ್ಳಲು ಸಾಧ್ಯವೇ ಆಗದಂತಹ ಹಲವು ನೈಜವಾದ, ಪ್ರಾಮಾಣಿಕವಾದ ಕಾರಣಗಳಿರಬಹುದು. ಲಸಿಕೆ ಉತ್ಪಾದಿಸುವ ಕಂಪೆನಿಗಳೇ ಲಸಿಕೆಗಳ ಬಗೆಗಿನ ವಿವರಣಾ ಪತ್ರಗಳಲ್ಲಿಯೂ ಇಂಥ ಸನ್ನಿವೇಶಗಳನ್ನು ಹೆಸರಿಸಿವೆ, ವೈದ್ಯರ ಸಲಹೆಯನ್ನು ಪಾಲಿಸುವಂತೆ ತಿಳಿಸಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ವರ್ಷಾಂತ್ಯಕ್ಕೆ ಕೇವಲ 43% ಜನರಿಗಷ್ಟೇ ಲಸಿಕೆಗಳನ್ನು ನೀಡಲು ಸಾಧ್ಯವೆಂದು ಹೇಳಿವೆ. ಇಂಥ ದೈಹಿಕ ಯಾ ವೈದ್ಯಕೀಯ ಕಾರಣಗಳಿಂದ, ಅಥವಾ ಇತ್ತೀಚೆಗೆ ಕೊರೋನ ಸೋಂಕಿಗೆ ಒಳಗಾದ ಕಾರಣದಿಂದ, ಅಥವಾ ಲಸಿಕೆಯ ಅಲಭ್ಯತೆಯ ಕಾರಣದಿಂದ ಅಥವಾ ಇನ್ಯಾವುದೇ ನೈಜ ಕಾರಣದಿಂದ ಲಸಿಕೆಯನ್ನು ಪಡೆಯಲಾಗದವರನ್ನು ಜೀವನದ ಎಲ್ಲಾ ಚಟುವಟಿಕೆಗಳಿಂದ ಬಹಿಷ್ಕರಿಸುವುದನ್ನು ಅಥವಾ ಅಸ್ಪೃಶ್ಯರಾಗಿಸುವುದನ್ನು ಯಾವ ರೀತಿಯಿಂದಲೂ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಈಗಾಗಲೇ ಕೊರೋನ ನೆಪದಲ್ಲಿ ಹೆಚ್ಚಿನವರು ಶಿಕ್ಷಣ, ಉದ್ಯೋಗ, ಆದಾಯಗಳಿಂದ ವಂಚಿತರಾಗಿ ನರಳುತ್ತಿರುವಾಗ ಇನ್ನು ಲಸಿಕೆಯ ನೆಪದಲ್ಲಿ ಅವರನ್ನು ನರಳಾಡಿಸುವುದು ಅಮಾನವೀಯವಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

'ಆದ್ದರಿಂದ ಸರಕಾರವು ಲಸಿಕೆ ಪಡೆಯುವುದು ಐಚ್ಚಿಕವೆಂದು ಈಗಾಗಲೇ ಹೇಳಿರುವುದನ್ನು ಇನ್ನಷ್ಟು ಗಟ್ಟಿಯಾಗಿ ಹೇಳಬೇಕು ಮತ್ತು ಲಸಿಕೆಯನ್ನು ಕಡ್ಡಾಯವೆಂದು ಹೇಳಿ ಪೀಡಿಸುತ್ತಿರುವುದನ್ನು, ಲಸಿಕೆ ಹಾಕಿಸಿಕೊಳ್ಳಲಾಗದವರನ್ನು ಬಹಿಷ್ಕರಿಸುವುದನ್ನು ಮತ್ತು ಕೆಟ್ಟದಾಗಿ ಬಿಂಬಿಸುವುದನ್ನು ಈ ಕೂಡಲೇ ಕೊನೆಗೊಳಿಸಬೇಕು. ಅದರ ಬದಲಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸುವ ಕಾರ್ಯಕ್ರಮಗಳನ್ನು ಇನ್ನಷ್ಟು ಆಯೋಜಿಸಲು ಪ್ರಯತ್ನಿಸಬೇಕು. ಜನರ ಮನವೊಲಿಸುವಲ್ಲಿ ತಮ್ಮ ವೈಫಲ್ಯಕ್ಕೆ ನೈಜ ಕಾರಣಗಳಿಂದ ಲಸಿಕೆ ಪಡೆಯಲಾಗದವರನ್ನು ಹೊಣೆಯಾಗಿಸುವುದನ್ನು ಒಪ್ಪಲಾಗದು. ಮಾಧ್ಯಮಗಳು ಈಗಾಗಲೇ ಕೊರೋನ ವಿಚಾರದಲ್ಲಿ ಕಿರುಚಾಡಿ ಹಲವು ಅವಾಂತರಗಳನ್ನೂ, ಸಮೂಹ ಸನ್ನಿಯನ್ನೂ ಸೃಷ್ಟಿಸಲು ಕಾರಣವಾಗಿದ್ದು, ಲಸಿಕೆಗಳ ವಿಚಾರದಲ್ಲಿಯೂ ಅಂಥದ್ದನ್ನು ಮಾಡಲು ಅವಕಾಶ ನೀಡದೆ, ವಸ್ತುನಿಷ್ಠವಾಗಿ, ಮಾನವೀಯವಾಗಿ ವರ್ತಿಸುವಂತಾಗಬೇಕು' ಎಂದು ಒತ್ತಾಯಿಸಿದ್ದಾರೆ.

'ತಾವು ಈ ಬಗ್ಗೆ ಈ ಕೂಡಲೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಸೂಕ್ತ ಆದೇಶವನ್ನು ನೀಡಿ, ಮಾಧ್ಯಮಗಳಿಗೂ ತಿಳಿಸಿ, ಜನಸಾಮಾನ್ಯರಲ್ಲೂ ಅರಿವು ಮೂಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News