ಉತ್ತರಾಖಂಡ: ಮಾಜಿ ಸೇನಾಧಿಕಾರಿ ಗುರ್ಮಿತ್ ಸಿಂಗ್ ಉತ್ತರಾಖಂಡ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕಾರ
Update: 2021-09-15 17:31 GMT
ಡೆಹ್ರಾಡೂನ್,ಸೆ.15: ಮಾಜಿ ಭಾರತೀಯ ಸೇನಾಧಿಕಾರಿ ಗುರ್ಮಿತ್ ಸಿಂಗ್ ಅವರು ಬುಧವಾರ ಉತ್ತರಾಖಂಡದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಇಲ್ಲಿಯ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಉತ್ತರಾಖಂಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಆರ್.ಎಸ್.ಚೌಹಾಣ್ ಅವರು ಸಿಂಗ್ ಅವರಿಗೆ ಪ್ರಮಾಣ ವಚನವನ್ನು ಬೋಧಿಸಿದರು.
ಸಿಂಗ್ ಅವರ ಪೂರ್ವಾಧಿಕಾರಿ ಬೇಬಿ ರಾಣಿ ವೌರ್ಯ ಅವರು ತನ್ನ ಅಧಿಕಾರಾವಧಿ ಪೂರ್ಣಗೊಳ್ಳುವ ಎರಡು ವರ್ಷ ಮೊದಲೇ ಸೆ.8ರಂದು ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಸೆ.9ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಿಂಗ್ ಉತ್ತರಾಖಂಡದ ನೂತನ ರಾಜ್ಯಪಾಲರಾಗಲಿದ್ದಾರೆ ಎಂದು ಪ್ರಕಟಿಸಿದ್ದರು. 2016ರಲ್ಲಿ ನಿವೃತ್ತಿಗೊಳ್ಳುವ ಮುನ್ನ ಸಿಂಗ್ ಸೇನಾ ಸಿಬ್ಬಂದಿಗಳ ಉಪ ಮುಖ್ಯಸ್ಥ ಸೇರಿದಂತೆ ಸೇನೆಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.