ಧಾರ್ಮಿಕ ಮುಖಂಡ ನರೇಂದ್ರ ಗಿರಿ ಸಾವಿನ ತನಿಖೆಗಾಗಿ ಸಿಬಿಐನಿಂದ ಆರು ಸದಸ್ಯರ ತಂಡ ರಚನೆ
Update: 2021-09-24 06:04 GMT
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಸೋಮವಾರ ಆತ್ಮಹತ್ಯೆಗೆ ಶರಣಾದ ಧಾರ್ಮಿಕ ಮುಖಂಡ ನರೇಂದ್ರ ಗಿರಿ ಸಾವಿನ ತನಿಖೆಗಾಗಿ ಸಿಬಿಐನಿಂದ ಆರು ಸದಸ್ಯರ ತಂಡವನ್ನು ರಚಿಸಲಾಗಿದೆ. ತಂಡವು ಪ್ರಯಾಗರಾಜ್ಗೆ ಪ್ರಯಾಣ ಬೆಳೆಸಿದೆ.
ನರೇಂದ್ರ ಗಿರಿ ಪ್ರಮುಖ ಧಾರ್ಮಿಕ ಸಂಸ್ಥೆ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಮುಖ್ಯಸ್ಥರಾಗಿದ್ದರು. ಅವರ ಸಾವಿನ ಕುರಿತು ಸಿಬಿಐ ತನಿಖೆಗೆ ಮುಖ್ಯಮಂತ್ರಿ ಆದಿತ್ಯನಾಥ್ ಒತ್ತಾಯಿಸಿದ್ದರು.
ದೇಶದ ಹಲವು ಪ್ರಮುಖ ರಾಜಕಾರಣಿಗಳೊಂದಿಗೆ ನಂಟು ಹೊಂದಿರುವ ಪ್ರಭಾವಿ ಧಾರ್ಮಿಕ ನಾಯಕ ನರೇಂದ್ರ ಗಿರಿ ಸೋಮವಾರ ಮಧ್ಯಾಹ್ನ ರಾಜ್ಯ ರಾಜಧಾನಿ ಲಕ್ನೋದಿಂದ 200 ಕಿ.ಮೀ. ದೂರದಲ್ಲಿರುವ ತನ್ನ ಆಶ್ರಮದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ,
13 ಪುಟಗಳ ಆತ್ಮಹತ್ಯೆ ಟಿಪ್ಪಣಿಯಲ್ಲಿ ಆನಂದ್ ಗಿರಿ, ಆದ್ಯಾ ತಿವಾರಿ ಮತ್ತು ಅವರ ಮಗ ಸಂದೀಪ್ ತಿವಾರಿ ಅವರೇ ತನ್ನ ಸಾವಿಗೆ ಕಾರಣ ಎಂದು ನರೇಂದ್ರ ಗಿರಿ ಆರೋಪಿಸಿದ್ದರು.