ಹೆದ್ದಾರಿಗಳನ್ನು ಶಾಶ್ವತವಾಗಿ ನಿರ್ಬಂಧಿಸಲು ಹೇಗೆ ಸಾಧ್ಯ?: ರೈತರ ಪ್ರತಿಭಟನೆ ಕುರಿತು ಸುಪ್ರೀಂ ಪ್ರಶ್ನೆ

Update: 2021-09-30 16:34 GMT

ಹೊಸದಿಲ್ಲಿ, ಸೆ.30: ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯ ಗಡಿಗಳಲ್ಲಿ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿ-ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ ಹೆದ್ದಾರಿಗಳನ್ನು ನಿರ್ಬಂಧಿಸಿರುವ ಬಗ್ಗೆ ಗುರುವಾರ ಆಕ್ಷೇಪವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು, ನ್ಯಾಯಾಂಗ ವೇದಿಕೆ,ಆಂದೋಲನ ಅಥವಾ ಸಂಸದೀಯ ಚರ್ಚೆಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು,ಆದರೆ ಹೆದ್ದಾರಿಗಳನ್ನು ಮುಚ್ಚಲು ಹೇಗೆ ಸಾಧ್ಯ? ಇದು ಶಾಶ್ವತ ಸಮಸ್ಯೆಯಾಗಬಾರದು ಎಂದು ಹೇಳಿತು.

ಹೆದ್ದಾರಿಗಳಲ್ಲಿ ನಿರ್ಬಂಧವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ನೊಯ್ಡಿ ನಿವಾಸಿ ಮೊನಿಕಾ ಅಗರವಾಲ್ ಅವರು, ನೊಯ್ಡದಿಂದ ದಿಲ್ಲಿಗೆ ಪ್ರಯಾಣಿಸುವಾಗ ತಾನು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಕೇವಲ 20 ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದ ಮಾರ್ಗವನ್ನು ಕ್ರಮಿಸಲು ಈಗ ಎರಡು ಗಂಟೆಗಳು ಬೇಕಾಗುತ್ತಿವೆ ಎಂದು ಹೇಳಿದ್ದಾರೆ. ರಸ್ತೆ ನಿರ್ಬಂಧಗಳನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯವು ವಿವಿಧ ನಿರ್ದೇಶಗಳನ್ನು ಹೊರಡಿಸಿದೆ,ಅದರೆ ಅವುಗಳ ಪಾಲನೆಯಾಗುತ್ತಿಲ್ಲ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.

ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ಅಂಗೀಕರಿಸಿರುವ ಕಾನೂನನ್ನು ಜಾರಿಗೊಳಿಸುವುದು ನಿಮ್ಮ ಕರ್ತವ್ಯವಾಗಿದೆ ಎಂದು ಕೇಂದ್ರ,ಹರ್ಯಾಣ,ಉತ್ತರ ಪ್ರದೇಶ ಮತ್ತು ದಿಲ್ಲಿ ಸರಕಾರಗಳಿಗೆ ಹೇಳಿದ ನ್ಯಾ.ಸಂಜಯ್ ಕೌಲ್ ಅವರ ನೇತೃತ್ವದ ಪೀಠವು,‘ನಾವು ಯಾವುದೇ ನಿರ್ದೇಶನಗಳನ್ನು ಹೊರಡಿಸಿದರೆ ನಾವು ಕಾರ್ಯಾಂಗದ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸಿದ್ದೇವೆ ಎಂದು ನೀವು ಹೇಳುತ್ತೀರಿ. ಕಾನೂನನ್ನು ಹೇಗೆ ಜಾರಿಗೊಳಿಸಬೇಕು ಎನ್ನುವುದು ನಿಮ್ಮ ಜವಾಬ್ದಾರಿಯಾಗಿದೆ. ಅದನ್ನು ಜಾರಿಗೊಳಿಸಲು ನ್ಯಾಯಾಲಯಕ್ಕೆ ಯಾವುದೇ ಮಾರ್ಗವಿಲ್ಲ ’ ಎಂದು ಕುಟುಕಿತು.

ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿಗೆ ವಶದಲ್ಲಿರಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಪ್ರತಿಭಟನೆಗಳು ನಿಗದಿತ ಸ್ಥಳಗಳಲ್ಲಿಯೇ ನಡೆಯಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಅಕ್ಟೋಬರ್ನಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರಿಂದ ದಿಲ್ಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ರಸ್ತೆ ತಡೆಗೆ ಸಂಬಂಧಿಸಿದಂತೆ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.
ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆಗಳನ್ನು ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ಕೇಂದ್ರವು ರಚಿಸಿದೆ,ಆದರೆ ಮಾತುಕತೆಗಳಲ್ಲಿ ಭಾಗಿಯಾಗಲು ಅವರು ನಿರಾಕರಿಸಿದ್ದಾರೆ ಎಂದು ಗುರುವಾರ ವಿಚಾರಣೆ ಸಂದರ್ಭದಲ್ಲಿ ಪೀಠಕ್ಕೆ ತಿಳಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು,ಪ್ರತಿಭಟನೆಗಳ ನೇತೃತ್ವ ವಹಿಸಿರುವ ರೈತ ಸಂಘಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಸೇರಿಸುವಂತೆ ಕೋರಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು,ನೀವು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಪ್ರತಿಭಟನೆಯ ನಾಯಕರು ಯಾರು ಎನ್ನುವುದು ಅರ್ಜಿದಾರರಿಗೆ ತಿಳಿದಿರಲು ಹೇಗೆ ಸಾಧ್ಯ? ನೀವು ಏನು ಮಾಡಿದ್ದೀರಿ ಮತ್ತು ಕೆಲವರನ್ನು ಕಕ್ಷಿಗಳನ್ನಾಗಿ ಸೇರಿಸುವುದರಿಂದ ವಿವಾದವನ್ನು ಬಗೆಹರಿಸಲು ಹೇಗೆ ನೆರವಾಗುತ್ತದೆ ಎನ್ನುವುದನ್ನು ವಿವರಿಸಿ ನೀವು ಅರ್ಜಿಯನ್ನು ಸಲ್ಲಿಸಿ ಎಂದು ತಿಳಿಸಿತು.

ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಅ.4ಕ್ಕೆ ಮುಂದೂಡಿತು.
ಈ ನಡುವೆ ಪ್ರಕರಣದಲ್ಲಿ ಅಫಿಡವಿಟ್ ಸಲ್ಲಿಸಿರುವ ಹರ್ಯಾಣ ಸರಕಾರವು,ರಸ್ತೆ ತಡೆಗಳನ್ನು ಹಿಂದೆಗೆದುಕೊಳ್ಳುವಂತೆ ರೈತರ ಮನವೊಲಿಸಲು ತಾನು ಪ್ರಾಮಾಣಿಕ ಪಯತ್ನಗಳನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News