ಮಾದಯ್ಯನವರ ಬದುಕು ರಾಜ್ಯದ ಜನರಿಗೆ ಪ್ರೇರಣೆ : ಸಚಿವ ಅಶ್ವತ್ಥ ನಾರಾಯಣ

Update: 2021-11-06 09:54 GMT

ಚನ್ನಪಟ್ಟಣ: ಕುಗ್ರಾಮದಲ್ಲಿ ಹುಟ್ಟಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಎಂ.ಎಲ್. ಮಾದಯ್ಯನವರ ಜೀವನವು ಇಡೀ ರಾಜ್ಯದ ಜನರಿಗೆ ಪ್ರೇರಣಾದಾಯಿಯಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಇಲ್ಲಿನ ಶತಮಾನೋತ್ಸವ ಭವನದಲ್ಲಿ ಅವರು ಶನಿವಾರ ಎಂ.ಎಲ್. ಮಾದಯ್ಯನವರ ಆತ್ಮಕತೆ `ಜೀವನಸೌಧ: ಹಳ್ಳಿ ಹೈದನ ತಾಂತ್ರಿಕಗಾಥೆ’ಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಾಧನೆ ಮಾಡುವ ಛಲವೇ ಇಲ್ಲದವರಿಗೆ ಬರೀ ಕೊರತೆಗಳು ಕಾಣಿಸುತ್ತವೆ. ಸಾಧಿಸುವ ನಿಷ್ಠೆ ಇದ್ದರೆ ಗುರಿ ಮಾತ್ರ ಕಣ್ಣೆದುರು ಇರುತ್ತದೆ ಎನ್ನುವುದಕ್ಕೆ ಇವರ ಬದುಕು ಉದಾಹರಣೆಯಾಗಿದೆ. ಆಧುನಿಕ ಜಗತ್ತಿನಲ್ಲಿ ಜ್ಞಾನದಾಹವೇ ನಮ್ಮೆಲ್ಲರ ಸಾಧನೆಗಳಿಗೆ ಮೂಲವಾಗಿದೆ. ಆದಿಚುಂಚನಗಿರಿ ಮಠವು ರಾಜ್ಯದಲ್ಲಿ 175 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಇದಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ ಎಂದು ಅವರು ಒತ್ತಿ ಹೇಳಿದರು.

ನಿಸ್ವಾರ್ಥವಾಗಿ ಬದುಕುತ್ತಿರುವ ಮಾದಯ್ಯನವರ ಆದರ್ಶ ಮತ್ತು ಸಾಧನೆಗಳು ಯುವ ತಲೆಮಾರಿಗೆ ಸ್ಪೂರ್ತಿದಾಯಕವಾಗಿವೆ. ಇಂತಹ ಮೇರುವ್ಯಕ್ತಿಯನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಬಣ್ಣಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಚೀಫ್ ಎಂಜಿನಿಯರ್ ಹುದ್ದೆ ಅಲಂಕರಿಸಿದ್ದ ಲೇಖಕರದು ಪರಿಪೂರ್ಣ ಬದುಕಾಗಿದೆ. ಇವರು ಕೊಟ್ಟಿರುವ ಕೊಡುಗೆಗಳು ಮತ್ತು ಬದುಕು ಸುಭದ್ರವಾದ ಸಮಾಜ ಕಟ್ಟಲು ಸೂತ್ರಪ್ರಾಯವಾಗಿವೆ ಎಂದು ಸಚಿವರು ನುಡಿದರು.

ಇದೇ ಸಂದರ್ಭದಲ್ಲಿ ಅವರು, `ಸದ್ಯಕ್ಕೆ ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯನ್ನು ರಾಮನಗರಕ್ಕೆ ಸ್ಥಳಾಂತರಿಸಲಾಗುವುದು. ವಿ.ವಿ.ಗೆ ನೂತನ ಕುಲಪತಿಗಳು ನೇಮಕಗೊಂಡ ಕೂಡಲೇ ಇತ್ತ ಗಮನ ಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು, `ಯೋಗೀಶ್ವರ್ ಬಿಜೆಪಿಯ ಹಿರಿಯ ನಾಯಕರು. ಅವರು ಪಕ್ಷವನ್ನು ಕಟ್ಟಲು ರಾಜ್ಯದ ಉದ್ದಗಲಕ್ಕೂ ಓಡಾಡಿದ್ದಾರೆ. 2023ರಲ್ಲಿ ಅವರು ನಮ್ಮ ಪಕ್ಷದಿಂದಲೇ ಸ್ಪರ್ಧಿಸುವುದರಲ್ಲಿ ಅನುಮಾನವಿಲ್ಲ. ಯೋಗೀಶ್ವರ್ ಅವರಿಗೆ ಪಕ್ಷವು ಎಲ್ಲ ಸ್ಥಾನಮಾನ ಗಳನ್ನೂ ಕೊಟ್ಟಿದೆ,’ ಎಂದರು.

ಬೆಲೆ ಇಳಿಕೆಗೂ ಚುನಾವಣೆಗೂ ಸಂಬಂಧವಿಲ್ಲ

ಹಾನಗಲ್ ಉಪಚುನಾವಣೆಯ ಸೋಲಿಗೂ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಗೂ ಸಂಬಂಧವಿಲ್ಲ. ತೈಲೋತ್ಪನ್ನಗಳ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದೆ. ಇವುಗಳ ಬೆಲೆ ಇಳಿಸುವ ಸಂಬಂಧ ಹಲವು ತಿಂಗಳುಗಳಿಂದಲೇ ಚರ್ಚೆ ನಡೆಯುತ್ತಿತ್ತು. ಕೇಂದ್ರ ಸರಕಾರದ ನಿರ್ಧಾರವನ್ನು ಅನುಸರಿಸಿ, ರಾಜ್ಯ ಸರಕಾರವು ತೈಲೋತ್ಪನ್ನಗಳ ಬೆಲೆ ಇಳಿಸಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಉಪಚುನಾವಣೆಗಳು ಒಂದರ ಹಿಂದೊಂದು ಬರುತ್ತಲೇ ಇರುತ್ತವೆ. ಒಟ್ಟಾರೆಯಾಗಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಜನರ ಹಿತವೇ ಮುಖ್ಯ. ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಗೂ ಮನ್ನಣೆ ನೀಡಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ, ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಎಂ.ಎಲ್.ಮಾದಯ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಶ್, ಕುವೆಂಪು ವಿವಿ ನಿವೃತ್ತ ಕುಲಪತಿ ಡಾ.ಚಿದಾನಂದಗೌಡ, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಮುಖ್ಯಸ್ಥ ವೂಡೇ ಪಿ.ಕೃಷ್ಣ,  ಲೇಖಕ ಡಾ.ಬೈರಮಂಗಲ ರಾಮೇಗೌಡ, ಡಾ.ಪುತ್ತೂರಾಯ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News