ಡಿ.23ರಿಂದ ಐತಿಹಾಸಿಕ ಉಳ್ಳಾಲ ಉರೂಸ್

Update: 2021-11-27 11:48 GMT

ಬೆಂಗಳೂರು, ನ.27: ಐತಿಹಾಸಿಕ ಪುಣ್ಯ ಕ್ಷೇತ್ರ ಉಳ್ಳಾಲದ ಸಂತ ಖುತುಬುಝ್ಜಮಾನ್ ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ತಂಙಳ್ ಅವರ 429ನೆ ವಾರ್ಷಿಕ ಮತ್ತು 21ನೆ ಪಂಚವಾರ್ಷಿಕ ಉರೂಸ್ ಡಿ.23ರಿಂದ ಜ. 16ರ ವರೆಗೆ ನಡೆಯಲಿದೆ.

ನಗರದ ಬೆನ್ಸನ್‍ಟೌನ್‍ನಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದರ್ಗಾ ಸಮಿತಿ ಅಧ್ಯಕ್ಷ ಹಾಜೀ ಅಬ್ದುಲ್ ರಶೀದ್, ಉಳ್ಳಾಲ ದರ್ಗಾ ಆವರಣದಲ್ಲಿ ಉರೂಸ್ ನಡೆಯಲಿದ್ದು, ಸೌಹಾರ್ದ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರಸಿದ್ಧ ಧರ್ಮಗುರುಗಳು, ವಿದ್ವಾಂಸರು ಸೇರಿದಂತೆ ಧಾರ್ಮಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಉರೂಸ್ ನೇತೃತ್ವವನ್ನು ಸಯ್ಯಿದ್ ಇಂಬಿಚ್ಚಿ ಕೋಯ ತಂಙಳ್ ವಹಿಸುವರು. ಅಂದು ಸಂಜೆ 7 ಗಂಟೆಗೆ ಉರೂಸ್ ಕಾರ್ಯಕ್ರಮವನ್ನು ಸಯ್ಯಿದುಲ್ ಉಲಮಾ ಜಿಪ್ರಿಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮವನ್ನು ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಡಿ.26ರಂದು ಬೆಳಗ್ಗೆ ಬೃಹತ್ ರಕ್ತದಾನ ಶಿಬಿರ, ಸಂಜೆ ಮಜ್ಲಿಸುನ್ನೂರ್ ಕಾರ್ಯಕ್ರಮ, ಜ.2ರಂದು 2.30ಕ್ಕೆ ಸನದು ದಾನ ಮಹಾಸಮ್ಮೇಳನ, ಜ.6ರಂದು ಮದನಿ ಮೌಲೂದ್ ಪಾರಾಯಣ, ಜ.9ರಂದು ಬೃಹತ್ ಆರೋಗ್ಯ ಶಿಬಿರ ಜರಗಲಿದೆ. ಡಿ. 23ರಿಂದ ಜ.13ರ ವರೆಗೆ ರಾತ್ರಿ ವಿಶ್ವ ವಿಖ್ಯಾತ ಪಂಡಿತರು, ಧಾರ್ಮಿಕ ಮುಖಂಡರಿಂದ ಪ್ರವಚನ ನಡೆಯಲಿದೆ ಎಂದು ವಿವರಿಸಿದರು.

ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ ಮಾತನಾಡಿ, ಐದು ವರ್ಷಕ್ಕೊಮ್ಮೆ ನಡೆಯುವ ಉಳ್ಳಾಲ ದರ್ಗಾ ಉರೂಸ್ 2020ರಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ನಡೆಸಲು ಆಗಲಿಲ್ಲ. ಅದರೆ, ಈಗ ಉರೂಸ್ ಜರಗಲಿದ್ದು, ಈ ಸಮಾರಂಭಕ್ಕೆ ರಾಜ್ಯ, ಹೊರ ರಾಜ್ಯದ ಭಕ್ತರು ಬರುತ್ತಾರೆ ಎಂದರು.

ಜ.14ರಂದು ಅಸರ್ ನಮಾಜಿನ ಬಳಿಕ ಅಂಗವಿಕಲರಿಗೆ ಸೈಕಲ್ ವಿತರಣೆ, ಮಗ್ರಿಬ್ ನಮಾಜಿನ ಬಳಿಕ ಸರ್ವಧರ್ಮ ಮುಖಂಡರ ಸಮ್ಮೇಳನ ನಡೆಯಲಿದ್ದು, ಧಾರ್ಮಿಕ-ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಜ.15ರಂದು ಸಂದಲ್ ಮೆರವಣಿಗೆ ಹಾಗೂ ಜ. 16ರಂದು ಅನ್ನದಾನ ಕಾರ್ಯಕ್ರಮ ನಡೆಯಲಿದೆ.

ಜಮಾತಿನ 55 ಮಂದಿ ಸಮಿತಿ ಸದಸ್ಯರೊಂದಿಗೆ 8 ಕರಿಯದಿಂದ ಆಯ್ಕೆಯಾಗಿ ಬಂದ ಉರೂಸ್ ಸಮಿತಿ ಸೇರಿ ಒಟ್ಟು 200 ಮಂದಿಯ ಉರೂಸ್ ಸಮಿತಿ ರಚಿಸಲಾಗಿದ್ದು, ಈ ಪೈಕಿ 20 ಮಂದಿಯ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಿಕೊಂಡು ಉರೂಸ್‍ನ ಸಿದ್ಧತೆಗೆ ಶ್ರಮಿಸುತ್ತಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಝುಲ್ಫಿ ಯು.ಟಿ. ದರ್ಗಾ ಸಮಿತಿ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿಗಳಾದ ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಯು.ಕೆ.ಇಬ್ರಾಹಿಂ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News