ಬೆಂಗಳೂರು: ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ
Update: 2021-12-03 05:39 GMT
ಬೆಂಗಳೂರು, ಡಿ.3: ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿಯವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಸದಾಶಿವ ನಗರದ ಪಬ್ ವೊಂದರಲ್ಲಿ ಗುರುವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಗುರುವಾರ ತಡರಾತ್ರಿ ಕಿರಿಕ್ ಕೀರ್ತಿ ಹಾಗೂ ಸ್ನೇಹಿತರು ಸದಾಶಿವ ನಗರ ಬಳಿಯ ಪಬ್ ವೊಂದರಲ್ಲಿದ್ದರು. ಇದೇ ವೇಳೆ ಪಕ್ಕದ ಟೇಬಲ್ನಲ್ಲಿದ್ದ ಮತ್ತೊಂದು ಗುಂಪಿನ ಸದಸ್ಯನೋರ್ವ ಮೊಬೈಲ್ನಲ್ಲಿ ಇವರ ಫೋಟೊ ತೆಗೆದಿದ್ದಾನೆನ್ನಲಾಗಿದೆ. ಇದನ್ನು ಕೀರ್ತಿ ಪ್ರಶ್ನಿಸಿದಾಗ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದೆ.
ಇದೇ ವೇಳೆ, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಬಿಯರ್ ಬಾಟಲಿಯಿಂದ ಕಿರಿಕ್ ಕೀರ್ತಿ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ. ಆಸ್ಪತ್ರೆಯೊಂದರಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿರುವ ಅವರು, ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ.