ಬೆಂಗಳೂರಿನ ಸಚಿವರು ಒಟ್ಟಾಗಿ ಸೇರಿದ್ದನ್ನೇ ನಾನು ನೋಡಿಲ್ಲ: ರಾಮಲಿಂಗಾರೆಡ್ಡಿ

Update: 2021-12-03 14:45 GMT

ಬೆಂಗಳೂರು, ಡಿ.3: ಬೆಂಗಳೂರಿನ ಸಚಿವರು ಒಟ್ಟಾಗಿ ಸೇರಿದ್ದನ್ನೇ ನಾನು ನೋಡಿಲ್ಲ.7 ಜನ 7 ದಿಕ್ಕಿಗೆ ಹೋಗಿದ್ದಾರೆ. ಅತಿಯಾದ ಮಳೆ ಸುರಿದಾಗ ಈ ಸಚಿವರು ತಮ್ಮ ಕ್ಷೇತ್ರ ಬಿಟ್ಟು ಹೊರಗೆ ಬರಲಿಲ್ಲ. ಅವರು ತಮ್ಮ ಕ್ಷೇತ್ರಕ್ಕೆ ಮಾತ್ರ ಸಚಿವರಾಗಿದ್ದಾರೆ. ಅವರು ಬೇರೆ ಕಡೆ ಭೇಟಿ ನೀಡಿದ್ದನ್ನು ನಾವಂತೂ ನೋಡಲಿಲ್ಲ. ನೀವು ನೋಡಿದ್ದರೆ ಹೇಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇತ್ತೀಚೆಗೆ ರಸ್ತೆ ಗುಂಡಿಯಿಂದ ಮೂರು ಸಾವಾಗಿದೆ. ನಿನ್ನೆ ಕೂಡ ಒಬ್ಬ ವ್ಯಕ್ತಿ ಸತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಎಲ್ಲೆಲ್ಲಿ ರಸ್ತೆ ಹಾಳಾಗಿ, ಗುಂಡಿ ಬಿದ್ದಿದೆಯೋ ಅಲ್ಲಿ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರು ನಗರದಲ್ಲಿ 7 ಸಚಿವರಿದ್ದರೂ, ಮುಖ್ಯಮಂತ್ರಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿದ್ದಾರೆ. ಹೀಗಾಗಿ ಉತ್ತಮ ಕೆಲಸ ಆಗುವ ನಿರೀಕ್ಷೆ ಇತ್ತು. ಅವರು 2 ದಿನ ನಗರ ಪ್ರದಕ್ಷಿಣೆ ಹಾಕಿದ್ದಾರೆ. 2 ಕಟ್ಟಡ, ಒಂದು ಕೆರೆ ವೀಕ್ಷಿಸಿ ಹೋಗಿದ್ದಾರೆ ಎಂದರು.

ಬೆಂಗಳೂರಿನಲ್ಲಿರುವ 28 ಕ್ಷೇತ್ರಗಳ ಪೈಕಿ ಕೇವಲ ಎರಡು ಕ್ಷೇತ್ರ ಬಿಟ್ಟರೆ ಉಳಿದ 26 ಕ್ಷೇತ್ರಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಉಳಿದ ಸಚಿವರಿಗೆ ಉಸ್ತುವಾರಿಯಾದರೂ ನೀಡಲಿ. ಇಲ್ಲ ಅವರೇ ತಿಂಗಳಿಗೆ ಒಂದೆರಡು ದಿನ ಓಡಾಡಿದರೆ ರಸ್ತೆ ಗುಂಡಿಗಳಾದರೂ ಸರಿ ಹೋಗಬಹುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.

2020-2021ರಲ್ಲಿ 198 ವಾರ್ಡ್‍ಗಳಲ್ಲಿ ಒಂದು ವಾರ್ಡಿಗೂ ನಯಾಪೈಸೆ ಬಿಡುಗಡೆ ಮಾಡಿಲ್ಲ. 2021-22 ಸಾಲಿಗೆ ಪ್ರತಿ ವಾರ್ಡ್‍ಗೆ 60 ಲಕ್ಷ ರೂ.ಕೊಟ್ಟಿದ್ದಾರೆ. ಇನ್ನು ಕೋಡ್ ಆಗಿಲ್ಲ. ಅದರಲ್ಲಿ ಬೋರ್‍ವೆಲ್, ರಸ್ತೆ ಗುಂಡಿ ನಿರ್ವಹಣೆಗೆ ಎಂದು 20 ಲಕ್ಷ ರೂ.ನೀಡಿದ್ದಾರೆ. ಅದು ಕನ್ನಡಿಯೊಳಗಿನ ಗಂಟಾಗಿದೆ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 12 ಕಾರಿಡಾರ್ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಮಹಾನಗರ ಪಾಲಿಕೆಯಿಂದ ಅಂದಾಜು ತಯಾರು ಮಾಡಿದ್ದರು. ಅದರಲ್ಲಿ ಬಳ್ಳಾರಿ ರಸ್ತೆ, ಚಾಲುಕ್ಯ ರಸ್ತೆ, ಹಳೆ ಮದ್ರಾಸ್ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ ಸೇರಿದಂತೆ 12 ರಸ್ತೆ ಅಭಿವೃದ್ಧಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಯಿತು ಎಂದು ಅವರು ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ಬೇಡ, ಕೆಆರ್‍ಡಿಎಲ್ ಮೂಲಕ ಮಾಡಬೇಕು ಎಂದು ತೀರ್ಮಾನಿಸಿದರು. ಆದರೆ ಇವರ ಆಯ್ಕೆಯ ಬಹುತೇಕ ರಸ್ತೆಗಳು ಪಾಲಿಕೆ ಹಾಗೂ ಕೆಆರ್‍ಡಿಎಲ್ ಜತೆ ಹಂಚಿಕೊಂಡಿದ್ದವು. ಆಗ ನಮ್ಮ ಪಕ್ಷದ ರಾಮಚಂದ್ರಪ್ಪ ಹಾಗೂ ಮನೋಹರ್ ಲೋಕಾಯುಕ್ತಕ್ಕೆ ಹೋಗಿ ದೂರು ನೀಡಿದ್ದರು. ಈ 12 ರಸ್ತೆಗಳ ಪೈಕಿ 191 ಕಿ.ಮೀ ರಸ್ತೆಗೆ 1120 ಕೋಟಿ ರೂ.ಗೆ ಅಂದಾಜು ವೆಚ್ಚ ಹಾಗೂ 5 ವರ್ಷ ನಿರ್ವಹಣೆಗೆ ಹೆಚ್ಚುವರಿಯಾಗಿ 787 ಕೋಟಿ ರೂ.ನಿಗದಿ ಮಾಡಿದ್ದಾರೆ. ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ 335 ಕೋಟಿ ರೂ.ರಸ್ತೆಗಳಿಗೆ ವೆಚ್ಚವಾದರೆ ಅದರ ನಿರ್ವಹಣೆಗೆ 787 ಕೋಟಿ ರೂ.ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.

ಯಾವುದೇ ಇಲಾಖೆ ಕಾಮಗಾರಿ ಆದರೂ 2 ವರ್ಷ ಗುತ್ತಿಗೆದಾರರೆ ನಿರ್ವಹಣೆ ಮಾಡಬೇಕು ಎಂದು ಗುತ್ತಿಗೆ ಕರಾರಿನಲ್ಲಿದೆ. ಕೆಲವೆಡೆ 3 ವರ್ಷ ಇರುತ್ತೆ. ಆದರೆ ಇಲ್ಲಿ ಸರಕಾರ ಮೊದಲ ವರ್ಷದಿಂದಲೇ ನಿರ್ವಹಣೆಗೆ ಹಣ ನೀಡುತ್ತಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ನಾವು ಲೋಕಾಯುಕ್ತಕ್ಕೆ ದೂರು ಕೊಟ್ಟ ನಂತರ ಇದು ಸ್ಥಗಿತವಾಗಿದ್ದು, ಈಗ ಮುಖ್ಯಮಂತ್ರಿ ಇದರ ಕಡತ ತರಿಸಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಬಂದಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಹಿಂದೆ ಟೀಕೆ ವ್ಯಕ್ತವಾದಾಗ 1120 ಕೋಟಿ ರೂ. ಅಂದಾಜು ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಈಗ ಮುಖ್ಯಮಂತ್ರಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು. ಅವರು ಇದನ್ನೇ ಮುಂದುವರಿಸಿದರೆ ಕಾಂಗ್ರೆಸ್ ಪಕ್ಷ ವಿರೋಧಿಸಲಿದೆ. ಯೋಜನೆಗೆ 335 ಕೋಟಿ ರೂ.ಅಗತ್ಯ ಬಿದ್ದರೆ ವೆಚ್ಚ ಮಾಡಲಿ. ಆದರೆ ಈ ಹಿಂದೆಯೂ ಮಳೆ ಬಂದಾಗ, ಇತರೆ ಇಲಾಖೆ ಯೋಜನೆ ವೇಳೆ ರಸ್ತೆ ಗುಂಡಿ ಬೀಳುತ್ತಿದೆ. ಆದರೆ ಈಗ ರಸ್ತೆ ಗುಂಡಿಗಳಿಗೆ ಲೆಕ್ಕವೇ ಇಲ್ಲವಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ರಸ್ತೆಗಳೇ ಇಲ್ಲವಾದಂತಾಗಿದೆ ಎಂದು ಅವರು ತಿಳಿಸಿದರು. 

ಸಿಎಂ 335 ಕೋಟಿ ರೂ. ಅನ್ನು ರಸ್ತೆ ಗುಂಡಿ ಮುಚ್ಚಲು ಬಳಸಲಿ. ಈ ಯೋಜನೆ ತೆಗೆದುಕೊಳ್ಳಲಿ ಎಂದು ಯಾರು ಒತ್ತಡ ಹಾಕುತ್ತಿದ್ದಾರೋ ಗೊತ್ತಿಲ್ಲ. ಜನರ ಹಣ ಪೋಲಾಗಬಾರದು. 335 ಕೋಟಿ ಯೋಜನೆಗೆ 787 ಕೋಟಿ ರೂ.ನಿರ್ವಹಣೆ ನೀಡುವುದರಲ್ಲಿ ಅರ್ಥವಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿದರು. ಸಿದ್ದರಾಮಯ್ಯ ಸರಕಾರ ಬಂದಮೇಲೆ ವಿಶೇಷ ಅನುದಾನ ನೀಡಿ ನೀರು ಸರಬರಾಜು, ಚರಂಡಿ ವ್ಯವಸ್ಥೆ ಮಾಡಲಾಯಿತು. ಬಿಜೆಪಿಯಿಂದ ನೀವು ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರು 14 ಕಟ್ಟಡ ಅಡವಿಟ್ಟು, 8 ಸಾವಿರ ಕೋಟಿ ರೂ.ಸಾಲ ಇಟ್ಟು ಹೋಗಿದ್ದರು ಎಂದು ರಾಮಲಿಂಗಾರೆಡ್ಡಿ ದೂರಿದರು. 

ಅವೈಜ್ಞಾನಿಕ, ಆಡಳಿತಾತ್ಮಕವಾಗಿ ಕಾರ್ಯಸಾಧುವಲ್ಲದ ವಾರ್ಡ್ ವಿಂಗಡಣೆ: ಬಿಬಿಎಂಪಿಯಲ್ಲಿ 198 ವಾರ್ಡ್‍ಗಳಿದ್ದು, ಬೆಂಗಳೂರಿಗೆ ವಿಶೇಷ ಕಾಯ್ದೆ ಬೇಕು ಎಂದು ಪಾಲಿಕೆ ಚುನಾವಣೆ ಮುಂದೂಡಿದರು. ಅದಕ್ಕೆ ನಾವು ಸಹಕರಿಸಿದೆವು. ನಂತರ 243 ವಾರ್ಡ್ ಮಾಡಲು ನಿರ್ಧರಿಸಿದರು. ಕಳೆದ ಸೆಪ್ಟೆಂಬರ್ ನಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಈಗ ಒಂದು ವರ್ಷ ಮೂರು ತಿಂಗಳಾಗಿದೆ. ಈಗ ಡಿಲಿಮಿಟೇಶನ್ ಮಾಡುವುದಾಗಿ ಹೊರಟಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಶಾಸಕರಿರುವ ಕಡೆ ಅವರು ವಾರ್ಡ್ ಪುನರ್ ವಿಂಗಡನೆ ಕೆಲಸ ಮಾಡಲಾಗುತ್ತಿದೆ. ಉಳಿದ ಕಡೆ ಬಿಜೆಪಿ ಮುಖಂಡರು ಹೇಳಿದಂತೆ ಮನಸ್ಸಿಗೆ ಬಂದಂತೆ ಅವೈಜ್ಞಾನಿಕವಾಗಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ತೀರಾ ಬೇಸರ. 2011ರ ಜನಗಣತಿ ಆಧಾರದ ಮೇಲೆ ವಾರ್ಡ್ ಪುನರ್ ವಿಂಗಡನೆ ಮಾಡಬೇಕು. ಈಗ 2021ರ ಜನಗಣತಿ ನಮ್ಮ ಮುಂದಿಲ್ಲ. ಬಿಜೆಪಿ ವೈಯಕ್ತಿಕ ಲಾಭಕ್ಕೆ ಪ್ರೊಜೆಕ್ಟೆಡ್ ಪಾಪುಲೇಶನ್ ಎಸ್ಟಿಮೇಟ್ ಆಧಾರದ ಮೇಲೆ ಈ ರೀತಿ ಮಾಡಿಸುತ್ತಿದೆ. ಇದು ವೈಜ್ಞಾನಿಕ ಪ್ರಕ್ರಿಯೆ ಅಲ್ಲ ಎಂದು ಅವರು ತಿಳಿಸಿದರು.

ಹಿಂದೆ ಡೀಲಿಮಿಟೇಶನ್ ಸಮಿತಿ ಮಾಡಿದಾಗ ದೇವೇಗೌಡರು, ಅನಂತಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲ ಪಕ್ಷದ ನಾಯಕರನ್ನು ಒಳಗೊಂಡಿತ್ತು. ಈಗಲೂ ಅದೇ ರೀತಿ ಎಲ್ಲ ಪಕ್ಷದ ನಾಯಕರು, ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು. ಎಲ್ಲ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಆದರೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

10 ವರ್ಷಕ್ಕೊಮ್ಮೆ ಡೀಲಿಮಿಟೇಶನ್ ಆಗಬೇಕು. ಈ ಕೆಲಸಕ್ಕಾಗಿ ಈಗ ಬಿಬಿಎಂಪಿ ಮುಖ್ಯ ಆಯುಕ್ತರನ್ನು ಮುಖ್ಯಸ್ಥರನ್ನಾಗಿ ಮಾಡಿದ್ದಾರೆ. ಅವರು ಅಧಿಕಾರಿಗಳನ್ನು ಸೇರಿಸಿಕೊಂಡು ಸಮಿತಿ ಮಾಡಿದ್ದಾರೆ. ಬಿಜೆಪಿ ನಾಯಕರು, ಶಾಸಕರು ಮಾಡಿ ಕೊಟ್ಟಿದ್ದನ್ನು ಇವರು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧ. ಈ ಸಮಿತಿ ಇದುವರೆಗೂ ಕೇವಲ ಒಂದು ಬಾರಿ ಮಾತ್ರ ಸಭೆ ಮಾಡಿದೆ. ಈ ವಾರ್ಡ್ ಪುನರ್ ಆಯೋಗ ಬಿಜೆಪಿ ಕೈಗೊಂಬೆಯಾಗಿದೆ ಎಂದು ಅವರು ತಿಳಿಸಿದರು.

Writer - ಎಂದ ಮಾಜಿ ಸಚಿವ

contributor

Editor - ಎಂದ ಮಾಜಿ ಸಚಿವ

contributor

Similar News