ನೂರು ಕೋಟಿ ರೂ. ಸಾಲ ಕೊಡಿಸುವ ಆಮಿಷ ಒಡ್ಡಿ ಉದ್ಯಮಿಗೆ ವಂಚನೆ ಆರೋಪ: ಇಬ್ಬರ ಬಂಧನ

Update: 2021-12-09 11:37 GMT

ಬೆಂಗಳೂರು, ಡಿ.9: ಉದ್ಯಮಿಯೊಬ್ಬರಿಗೆ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪೆನಿ ಹೆಸರಲ್ಲಿ ಸುಮಾರು 100 ಕೋಟಿ ರೂ.ಗಳ ಸಾಲದ ಆಸೆ ತೋರಿಸಿ 1.80 ಕೋಟಿ ರೂ. ವಂಚನೆ ನಡೆಸಿದ ಇಬ್ಬರು ಖದೀಮರನ್ನು ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನರೇಶ್ ಹಾಗೂ ಕೌಶಿಕ್ ಎಂದು ಗುರುತಿಸಲಾಗಿದೆ. ಉದ್ಯಮಿ ಮಂಥೆನಾ ತರುಣ್ ಗಾಂಧಿ ಅವರಿಂದ 1.80 ಕೋಟಿ ಹಣ ಪಡೆದು ಆರೋಪಿಗಳು ಮೋಸ ಎಸಗಿದ್ದಾರೆ. ಮತ್ತೊಬ್ಬ ಆರೋಪಿ ಕಾರ್ತಿಕ್ ವೇಲನ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.

ವಂಚನೆಯಲ್ಲಿ 30 ಲಕ್ಷ ರೂ.ಗಳನ್ನು ಬ್ಯಾಂಕ್‍ನಲ್ಲಿ ತಡೆಹಿಡಿಯಲಾಗಿದ್ದು, ಉಳಿದ 1 ಕೋಟಿ 50ಲಕ್ಷ ರೂ.ಗಳೊಂದಿಗೆ ಪ್ರಮುಖ ಆರೋಪಿ ಕಾರ್ತಿಕ್ ವೇಲನ್ ಪರಾರಿಯಾಗಿದ್ದಾನೆ. ಹೈದರಾಬಾದ್ ಮೂಲದ ಉದ್ಯಮಿ ಮಂಥೆನಾ ತರುಣ್ ಗಾಂಧಿಗೆ ಆರೋಪಿಗಳು ನೂರು ಕೋಟಿ ಸಾಲದ ಆಸೆ ತೋರಿಸಿ 1 ಕೋಟಿ 80 ಲಕ್ಷ ವಂಚನೆ ಮಾಡಿದ್ದರು.

ವ್ಯವಹಾರ ಮಾಡುವ ಸಲುವಾಗಿ ತರುಣ್ ಗಾಂಧಿ ಸಾಲಕ್ಕಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪೆನಿ ಸಾಲ ಕೊಡುವುದಾಗಿ ಆಸೆ ತೋರಿಸಿದೆ. ಈ ಬಗ್ಗೆ ತರುಣ್ ಗಾಂಧಿ ತಮ್ಮ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸಂಬಂಧಿಕರ ಮಾಹಿತಿಯನ್ನಾಧರಿಸಿ ಉದ್ಯಮಿ ತರುಣ್ ಗಾಂಧಿ ಕಂಪೆನಿ ಸಂಪರ್ಕಿಸಿದ್ದರು. ಈ ವೇಳೆ ನೂರು ಕೋಟಿ ಸಾಲ ಕೊಡಬೇಕಾದ್ರೆ ಮೂರು ತಿಂಗಳ ಬಡ್ಡಿ ಮುಂಗಡವಾಗಿ ನೀಡಬೇಕು ಎಂದಿತ್ತು ಕಂಪೆನಿ. ಅದನ್ನು ನಂಬಿ ಮೂರು ತಿಂಗಳ ಬಡ್ಡಿ 1 ಕೋಟಿ 80 ಲಕ್ಷ ರೂ. ಗಳನ್ನು ತರುಣ್ ಗಾಂಧಿ ತಕ್ಷಣವೇ ನೀಡಿ ಬಂದಿದ್ದರು. ಆದರೆ, ನಂತರ ಸಾಲವೂ ನೀಡದೆ, ತಾನು ನೀಡಿದ್ದ ಬಡ್ಡಿ ಹಣವನ್ನೂ ಕೊಡದೆ ಕಂಪೆನಿ ಅಧಿಕಾರಿಗಳು ಪರಾರಿಯಾಗಿದ್ದರು. ಕಂಪೆನಿಯ ಮುಖ್ಯಸ್ಥ ಕಾರ್ತಿವೇಲನ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಅಡಗಿ ಕುಳಿತಿದ್ದ. ಈ ಹಿನ್ನೆಲೆಯಲ್ಲಿ ಮಂಥೆನಾ ತರುಣ್ ಗಾಂಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಪ್ರಕರಣದ ಮುಖ್ಯ ಆರೋಪಿ ಕಾರ್ತಿವೇಲನ್‍ಗಾಗಿ ಹುಡುಕಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News