ಕಾಂಗ್ರೆಸ್ ಬೇಜವಾಬ್ದಾರಿ ನಡೆಯನ್ನು ಜನ ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ: ಡಾ.ಕೆ.ಸುಧಾಕರ್

Update: 2022-01-14 12:35 GMT

ಬೆಂಗಳೂರು, ಜ.14: ಕಾಂಗ್ರೆಸ್ ಪಾದಯಾತ್ರೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ನಿರ್ದೇಶನವನ್ನು ಸ್ವಾಗತಿಸುತ್ತೇನೆ. ಇದು ರಾಜ್ಯ ಹಾಗೂ ಕೇಂದ್ರ ಸರಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗೆ ಪೂರಕವಾಗಿದೆ. ಕೋವಿಡ್ ಪ್ರಕರಣ ಹೆಚ್ಚಿರುವ ಈ ಸಮಯದಲ್ಲಿ ಇದು ಸೂಕ್ತವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಶುಕ್ರವಾರ ನಗರದಲ್ಲಿರುವ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾದಯಾತ್ರೆ ಕೈಗೊಂಡ ಕಾಂಗ್ರೆಸ್‍ನ ಬೇಜವಾಬ್ದಾರಿ ನಡೆಯನ್ನು ರಾಜ್ಯದ ಜನ ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ ಎಂದರು.
ಲಸಿಕಾಕರಣದಿಂದ ಮಾತ್ರ ಕೋವಿಡ್‍ನಿಂದ ದೂರವಿರಲು ಸಾಧ್ಯ. ಆದುದರಿಂದ, ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕಾಕರಣ ಒಂದರಿಂದಲೇ ರಕ್ಷಣೆ ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಹೇಳಿದ್ದು, ಪ್ರಧಾನಿಯವರು ನಿನ್ನೆ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲೂ ಅದನ್ನೇ ಪುನರುಚ್ಚಾರ ಮಾಡಿದ್ದಾರೆ. ಆದುದರಿಂದ, ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯುವ ಪ್ರತಿಜ್ಞೆ ಮಾಡೋಣ ಎಂದು ಸುಧಾಕರ್ ಹೇಳಿದರು.

ರಾಜ್ಯದ ಜನರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಈ ಉತ್ತರಾಯಣದ ಪುಣ್ಯ ಕಾಲದಲ್ಲಿ ಎಲ್ಲರಿಗೂ ಸಂತಸ, ಆರೋಗ್ಯ, ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಇಂದು ಮೂರನೇ ಕೋವಿಡ್ ಲಸಿಕೆ ಪಡೆದಿದ್ದಾರೆ. 9 ತಿಂಗಳ ಹಿಂದೆ ಅವರು ಎರಡು ಡೋಸ್ ಪಡೆದಿದ್ದರು ಎಂದು ಸುಧಾಕರ್ ತಿಳಿಸಿದರು.

ಬಿಎಂಸಿಆರ್ ಐನಲ್ಲಿ ಈವರೆಗೆ 83,937 ಡೋಸ್‍ಗಳನ್ನು ನೀಡಲಾಗಿದೆ. ಈ ಪೈಕಿ 420 ಬಾಣಂತಿ, 1,179 ಗರ್ಭಿಣಿಯರಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಸಿಬ್ಬಂದಿ ಸೇರಿದಂತೆ ಅರ್ಹರು ಮುನ್ನೆಚ್ಚರಿಕೆ ಲಸಿಕೆಯನ್ನು ಪಡೆಯಬೇಕು ಎಂದು ಅವರು ಮನವಿ ಮಾಡಿದರು. 

ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೂ ಶೇ.5-6ರಷ್ಟು ರೋಗಿಗಳು ಮಾತ್ರ ಆಸ್ಪತ್ರೆ ಸೇರುತ್ತಿದ್ದಾರೆ. ನರ್ಸ್‍ಗಳು ಕೂಡಾ ಸೋಂಕಿಗೊಳಗಾಗುತ್ತಿರುವುದು ಆತಂಕದ ವಿಚಾರವಾಗಿದೆ. ಹೀಗಾಗಿ ಮತ್ತಷ್ಟು ಎಚ್ಚರಿಕೆ ಅವಶ್ಯಕತೆ ಇದೆ. 15-18 ವರ್ಷದೊಳಗಿನ ಮಕ್ಕಳು ಲಸಿಕೆಯನ್ನು ಪಡೆಯಬೇಕು ಎಂದು ಸುಧಾಕರ್ ಹೇಳಿದರು.

ರಾಜ್ಯದಲ್ಲಿ ಕೊರೋನ ಇನ್ನು ಪೀಕ್‍ಗೆ ಹೋಗಿಲ್ಲ ಎಂದು ತಜ್ಞರು ಕೂಡಾ ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಪೀಕ್‍ಗೆ ಹೋಗುವ ಸಾಧ್ಯತೆ ಇದೆ. 3-4ನೇ ವಾರದಿಂದ ಕಡಿಮೆ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ ಎಂದು ಸುಧಾಕರ್ ತಿಳಿಸಿದರು.

ಕಳೆದ ವಾರದಿಂದ ವೀಕೆಂಡ್ ನಿರ್ಬಂಧ ತರಲಾಗಿದೆ. ಆದರೆ 7 ದಿನಕ್ಕೆ ಸೋಂಕು ಕಡಿಮೆ ಆಗುವುದಿಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಆದರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಬಾರಿಯ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಇನ್ನು ಸ್ವಲ್ಪ ದಿನದಲ್ಲಿ ವೀಕೆಂಡ್ ಕಫ್ರ್ಯೂನಿಂದಾದ ಫಲಿತಾಂಶ ದೊರೆಯಬಹುದು ಎಂದು ಅವರು ಹೇಳಿದರು.

ಇನ್ನೊಂದು ವಾರ ಮಾತ್ರ ವೀಕೆಂಡ್ ಕಫ್ರ್ಯೂ ಪಾಲನೆ ಮಾಡುತ್ತೇವೆ ಎಂದು ಹೊಟೇಲ್, ಬಾರ್ ಮಾಲಕರು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ನಿರ್ಬಂಧಗಳಿಂದ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಇರೋದನ್ನು ಒಪ್ಪುತ್ತೇನೆ. ಆದರೆ, ಜನರ ಆರೋಗ್ಯ, ಪ್ರಾಣ ರಕ್ಷಣೆಗಾಗಿ ಸರಕಾರ ಸಮಯೋಚಿತವಾಗಿ ಕೈಗೊಳ್ಳುವ ತೀರ್ಮಾನಗಳನ್ನು ಎಲ್ಲರೂ ಗೌರವಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News