ಉತ್ತರಪ್ರದೇಶ ಚುನಾವಣೆ ಹಿನ್ನೆಲೆ: ದಲಿತರ ಮನೆಗೆ ತೆರಳಿ ಊಟ ಮಾಡಿದ ಆದಿತ್ಯನಾಥ್
ಲಕ್ನೋ, ಜ. 14: ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರು ಬಿಜೆಪಿಯನ್ನು ತೊರೆಯುತ್ತಿರುವ ನಡುವೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಗೋರಖ್ಪುರದ ದಲಿತರ ಮನೆಯಲ್ಲಿ ಶುಕ್ರವಾರ ಭೋಜನ ಮಾಡಿದ್ದಾರೆ.
ಈ ಸಂದರ್ಭ ಮಾತನಾಡಿದ ಆದಿತ್ಯನಾಥ್ ಅವರು ಸಮಾಜವಾದಿ ಪಕ್ಷದ ಆಡಳಿಲ್ಲಿ ‘ಸಾಮಾಜಿಕ ಶೋಷಣೆ’ ಸಾಮಾನ್ಯವಾಗಿತ್ತೇ ಹೊರತು ‘ಸಾಮಾಜಿಕ ನ್ಯಾಯ’ವಲ್ಲ ಎಂದಿದ್ದಾರೆ. ಆದರೆ, ಬಿಜೆಪಿ ಸರಕಾರ ಯಾವುದೇ ತಾರತಮ್ಯ ಮಾಡದೆ ಸಮಾಜದ ಎಲ್ಲ ವರ್ಗದ ಅಭಿವೃದ್ಧಿಗೆ ಕೆಲಸ ಮಾಡಿದೆ ಎಂದು ಅವರು ಹೇಳಿದರು.
ಕುಟುಂಬ ರಾಜಕೀಯದ ಹಿಡಿತದಲ್ಲಿರುವರು ಸಮಾಜದ ಯಾವುದೇ ವರ್ಗಕ್ಕೆ ನ್ಯಾಯ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಸಮಾಜವಾದಿ ಪಕ್ಷ ಸರಕಾರ ದಲಿತರು ಹಾಗೂ ಬಡವರ ಹಕ್ಕುಗಳ ಮೇಲೆ ದರೋಡೆ ನಡೆಸಿದೆ ಎಂದು ಅವರು ಹೇಳಿದರು. ಮೌರ್ಯ, ಚೌಹಾಣ್ ಹಾಗೂ ಇತರ ಎಲ್ಲ ಬಂಡಾಯ ಶಾಸಕರು, ರಾಜ್ಯ ಸರಕಾರ ದಲಿತರು ಹಿಂದುಳಿದದ ವರ್ಗದವರ ಕಲ್ಯಾಣದ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ಬಿಜೆಪಿ ತ್ಯಜಿಸಲು ಕಾರಣ ಎಂದು ಹೇಳಿದ್ದಾರೆ.