ಕೋಲ್ಕತಾ ಬಳಿ ಬಿಜೆಪಿ-ಟಿಎಂಸಿ ನಡುವೆ ಸಂಘರ್ಷ: ಬಿಜೆಪಿ ಸಂಸದ ಅರ್ಜುನ ಸಿಂಗ್‌ ರತ್ತ ಕಲ್ಲು ತೂರಾಟ

Update: 2022-01-23 15:56 GMT
photo:twitter/@ArjunsinghWB

ಕೋಲ್ಕತಾ,ಜ.23: ಕೋಲ್ಕತಾ ಸಮೀಪದ ಭಾಟಪಾರಾದಲ್ಲಿ ರವಿವಾರ ಬೆಳಿಗ್ಗೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು,ಸಮೀಪದ ಬರಾಕ್‌ಪುರದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಸಂಸದ ಅರ್ಜುನ ಸಿಂಗ್ ಅವರತ್ತ ಕಲ್ಲುತೂರಾಟ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ಉತ್ತರ 24 ಪರಗಣಗಳ ಜಿಲ್ಲೆಯಲ್ಲಿ ರಾಜಕೀಯ ಅಶಾಂತಿಯ ಕೇಂದ್ರಬಿಂದುವಾಗಿರುವ ಈ ಪ್ರದೇಶದಲ್ಲಿ ಘರ್ಷಣೆಗಳ ಸಂದರ್ಭ ಒಂದು ಪೊಲೀಸ್ ವಾಹನ ಸೇರಿದಂತೆ ಎರಡು ಕಾರುಗಳು ಹಾನಿಗೊಂಡಿವೆ.

ಸಿಂಗ್ ಅವರನ್ನು ರಕ್ಷಿಸಿ,ಅವರ ನಿವಾಸಕ್ಕೆ ಸುರಕ್ಷಿತವಾಗಿ ಸಾಗಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಧ್ರುವಜ್ಯೋತಿ ಡೇ ತಿಳಿಸಿದರು.

ಘಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.

ಶನಿವಾರ ರಾತ್ರಿ ಸಮೀಪದ ಪಾನಿಹಾತಿ ಪ್ರದೇಶದಲ್ಲಿಯ ಟಿಎಂಸಿ ಕಚೇರಿಯ ಮೇಲೆ ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿತ್ತು ಮತ್ತು ಇದು ಘರ್ಷಣೆಗೆ ಕಾರಣವಾಗಿತ್ತು. ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮತ್ತು ಇನ್ನಷ್ಟೇ ಬಂಧನಗಳನ್ನು ಮಾಡಬೇಕಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News