ಮಕ್ಕಳ ಮೇಲೆ ಮಾರಿ ಕಣ್ಣು!

Update: 2022-01-24 03:55 GMT

ಮತ್ತೊಮ್ಮೆ ಕೊರೋನ ಹೆಸರಲ್ಲಿ ಗದ್ದಲ ಎಬ್ಬಿಸಿ, ಕರ್ಫ್ಯೂ, ಲಾಕ್‌ಡೌನ್ ಎಂದು ಬೆದರಿಸಿ ಜನರ ಮೇಲೆ ಬಲವಂತವಾಗಿ ಲಸಿಕೆಗಳನ್ನು ಹೇರುವ ಸರಕಾರದ ತಂತ್ರ ಸಂಪೂರ್ಣ ವಿಫಲವಾಗಿದೆ. ಜನರು ಜಾಗೃತರಾಗಿ, ಸರಕಾರವನ್ನು ಪ್ರಶ್ನಿಸಲು ತೊಡಗಿದಂತೆಯೇ, ವಾರಂತ್ಯದ ಕರ್ಫ್ಯೂ ಹಿಂದೆಗೆದುಕೊಂಡಿದೆ. ಇದೀಗ ಸಚಿವರೇ ‘ಕೊರೋನ ಶೀಘ್ರದಲ್ಲೇ ಇಳಿಕೆಯಾಗಲಿದೆ’ ಎಂದೂ ಹೇಳಿಕೆ ನೀಡಿದ್ದಾರೆ. ವಾರಾಂತ್ಯದ ಕರ್ಫ್ಯೂ ಹಿಂದೆಗೆದುಕೊಂಡ ಹಿನ್ನೆಲೆಯಲ್ಲಿ ಕೊರೋನ ಕೂಡ, ‘ಕದನ ವಿರಾಮ’ ಘೋಷಿಸಿರುವ ಸಾಧ್ಯತೆಗಳಿವೆ. ಆದರೂ, ರಾತ್ರಿ ಹತ್ತು ಗಂಟೆಯ ಬಳಿಕ ಓಡಾಡುವ ಸಣ್ಣ ರಿಯಾಯಿತಿಯನ್ನು ಕೊರೋನಾ ವೈರಸ್‌ಗೆ ನೀಡಲಾಗಿದೆ. ಅದಕ್ಕಾಗಿ ಬೆಳಗ್ಗೆ 5ಗಂಟೆಯವರೆಗೆ ಕರ್ಫ್ಯೂ ಹೇರಿದೆ. ‘ರಾತ್ರಿ ಕರ್ಫ್ಯೂ ಅವೈಜ್ಞಾನಿಕ’ ಎಂದು ಹಲವು ತಜ್ಞರು ಈಗಾಗಲೇ ಹೇಳಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ದೈನಂದಿನ ವ್ಯವಹಾರದಲ್ಲಿ ಪರಸ್ಪರ ಬೆರೆತು ರಾತ್ರಿ ಜನರು ಮನೆ ಸೇರಿದ ಬಳಿಕ ಕೊರೋನ ಯಾಕೆ ಎಚ್ಚೆತ್ತುಕೊಳ್ಳುತ್ತದೆ ಎನ್ನುವುದರ ಬಗ್ಗೆ ಸ್ವತಃ ಸರಕಾರದ ಬಳಿಯೂ ವಿವರಗಳಿಲ್ಲ. ಈ ಬಗ್ಗೆ ಸಲಹೆ ನೀಡಿದ ಆ ನಿಗೂಢ ತಜ್ಞರ ಕುರಿತಂತೆ ಸರಕಾರ ಇನ್ನೂ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಬಹುಶಃ ಕೊರೋನಕ್ಕೂ ಬಾವಲಿಗೂ ಸಂಬಂಧ ಕಲ್ಪಿಸಿ ಸರಕಾರ ರಾತ್ರಿ ಹತ್ತುಗಂಟೆಯಿಂದ ಕರ್ಫ್ಯೂ ಹೇರಿರಬಹುದೇ ಎನ್ನುವುದು ಅಧ್ಯಯನಕ್ಕೆ ಯೋಗ್ಯವಾದ ವಿಷಯ.

ಒಟ್ಟಿನಲ್ಲಿ ಮೂರನೇಯ ಅಲೆಯೊಂದನ್ನು ಸೃಷ್ಟಿಸಿ ಜನರಲ್ಲಿ ಗಾಬರಿ ಆತಂಕ ಬಿತ್ತುವಲ್ಲಿ ಸರಕಾರ ಭಾಗಶಃ ವಿಫಲವಾಗಿರುವುದು ಕೊರೋನ ಮತ್ತು ಲಾಕ್‌ಡೌನ್ ವಿರುದ್ಧ ಜನಸಾಮಾನ್ಯರಿಗೆ ಸಂದ ವಿಜಯವೇ ಸರಿ. ಜನರು ಸರಕಾರದ ಹುನ್ನಾರಗಳ ಬಗ್ಗೆ ಜಾಗೃತಗೊಂಡು ಮಾತನಾಡತೊಡಗಿದಂತೆಯೇ, ಕೊರೋನ ಕೂಡ ನಿಧಾನಕ್ಕೆ ಹಿಂಜರಿಯತೊಡಗುತ್ತದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಲಸಿಕೆ ಮಾಫಿಯಾದ ಹಿಂದಿರುವ ಶಕ್ತಿಗಳು ಈ ಬಾರಿ ವಿಫಲಗೊಂಡಿವೆಯಾದರೂ, ಇನ್ನೊಂದು ಹೊಸ ರೂಪದ ಜೊತೆಗೆ ಅವು ಮರಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಯಾಕೆಂದರೆ, ಈಗಾಗಲೇ ಲಸಿಕೆಗಳಿಗಾಗಿ ಕೋಟ್ಯಂತರ ರೂಪಾಯಿ ಹೂಡಿರುವುದು ವ್ಯರ್ಥವಾಗಬಾರದಲ್ಲ. ಆತಂಕದ ವಿಷಯವೆಂದರೆ, ಜನರು ಜಾಗೃತರಾಗಿರುವುದು ಕಂಡು, ಇದೀಗ ಕೊರೋನ ಮೆಲ್ಲಗೆ ಶಾಲೆಗಳ ಕಾಂಪೌಂಡ್ ಒಳಗೆ ಕಾಲಿಟ್ಟಿರುವುದು. ವಿದ್ಯಾರ್ಥಿಗಳಿಗೆ ಶಿಕ್ಷಣ ಅನಿವಾರ್ಯ ಎನ್ನುವುದು ಕಂಡುಕೊಂಡ ಕಾರಣ, ಇದೀಗ ದೊಡ್ಡವರನ್ನು ಬಿಟ್ಟು ಸಣ್ಣವರ ಮೇಲೆ ಕಣ್ಣಿಟ್ಟಿದೆ.

ಹತ್ತನೇ ತರಗತಿ ಮತ್ತು ಅದರ ಮೇಲಿನ ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬಹುದು ಎಂದು ಸರಕಾರ ಆತುರವಾಗಿ ಘೋಷಿಸಿದೆ. ಕೋವ್ಯಾಕ್ಸಿನ್ ಕುರಿತಂತೆ ಇನ್ನೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪೂರ್ಣ ಪ್ರಮಾಣದ ಅನುಮೋದನೆ ದೊರಕದೆ ಇರುವ ಹೊತ್ತಿನಲ್ಲಿ, ಆತುರಾತುರವಾಗಿ ಈ ಲಸಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ. ಪೋಷಕರು ಈ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಮೇಲ್ನೋಟಕ್ಕೆ ಇದು ಐಚ್ಛಿಕವಾಗಿ ಕಂಡು ಬಂದರೂ, ಶಾಲೆಗಳಿಗೆ ಒತ್ತಡ ಹೇರುವ ಮೂಲಕ, ವಿದ್ಯಾರ್ಥಿಗಳಿಗೆ ಈ ಲಸಿಕೆಗಳನ್ನು ಕಡ್ಡಾಯಗೊಳಿಸಿದೆ. ಶಾಲೆಗಳಲ್ಲಿ ಕೊರೋನ ಸೋಂಕು ಪತ್ತೆಯಾದರೆ ಶಾಲೆಗಳನ್ನು ಮುಚ್ಚಲಾಗುವುದು ಎನ್ನುವ ಬೆದರಿಕೆಯನ್ನು ಈಗಾಗಲೇ ಸರಕಾರ ನೀಡಿದೆ. ಇದು ನೇರವಾಗಿ ಪೋಷಕರು ಮತ್ತು ಶಾಲೆಗಳಿಗೆ ‘ಮರ್ಯಾದೆಯಲ್ಲಿ ಲಸಿಕೆಗಳನ್ನು ವಿದ್ಯಾರ್ಥಿಗಳಿಗೆ ಹಾಕಿಸಿ’ ಎನ್ನುವ ಒತ್ತಡವೇ ಆಗಿದೆ. ಆರಂಭದಲ್ಲಿ ಪೋಷಕರಿಗೆ ಕಡ್ಡಾಯ ಮಾಡಲಾಗಿತ್ತು. ಪೋಷಕರು ಲಸಿಕೆ ಹಾಕಿಸಿಕೊಳ್ಳದೇ ಇದ್ದರೆ ಮಕ್ಕಳು ಶಾಲೆಗೆ ಹೋಗುವಂತಿಲ್ಲ ಎಂದು ಸರಕಾರ ತಿಳಿಸಿತ್ತು. ಆದರೆ ಈ ನಿರ್ಧಾರದ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾದ ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಈಗ ಪೋಷಕರನ್ನು ಬಿಟ್ಟು ಶಾಲೆಗಳ ವ್ಯವಸ್ಥಾಪನಾ ಮಂಡಳಿಗೆ ವಿವಿಧ ರೀತಿಯ ಒತ್ತಡಗಳನ್ನು ಹಾಕಲಾಗುತ್ತಿದೆ. ಈಗಾಗಲೇ ಹಲವು ಶಾಲೆಗಳಿಂದ ಪೋಷಕರಿಗೆ ಸಂದೇಶಗಳನ್ನು ಕಳುಹಿಸಲಾಗಿದ್ದು, ಮಕ್ಕಳಿಗೆ ಲಸಿಕೆಗಳನ್ನು ಕೊಡಲು ಅನುಮತಿ ನೀಡಬೇಕು ಎಂದು ಅದರಲ್ಲಿ ಒತ್ತಾಯಿಸಲಾಗಿದೆ. ಒಂದು ವೇಳೆ ಲಸಿಕೆ ನೀಡದೇ ಇದ್ದರೆ ತಮ್ಮ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೂರಲು ಸಮಸ್ಯೆಯಾಗಬಹುದು ಎಂಬ ಆತಂಕದಲ್ಲಿ ಪೋಷಕರು ಅನಿವಾರ್ಯವಾಗಿ ಲಸಿಕೆ ನೀಡಲು ಅನುಮತಿಯನ್ನು ನೀಡುತ್ತಿದ್ದಾರೆ. ಅನುಮತಿಯನ್ನು ನೀಡದ ಪೋಷಕರಿಗೆ ಶಾಲೆಗಳು ಪರೋಕ್ಷ ಒತ್ತಡವನ್ನು ಹಾಕುತ್ತಿರುವ ಕುರಿತಂತೆ ವ್ಯಾಪಕ ಅಸಮಾಧಾನ ಕೇಳಿ ಬರುತ್ತಿವೆ.

ರೋಗ ಲಕ್ಷಣ ಇರುವವರಿಗೆ ಮಾತ್ರ ಕೊರೋನ ಪರೀಕ್ಷೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮೂಹಿಕ ಕೊರೋನ ಪರೀಕ್ಷೆ ನಡೆಸುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಮಕ್ಕಳು ಈವರೆಗೆ ಪಠ್ಯ ಪುಸ್ತಕಗಳ ಪರೀಕ್ಷೆಗಳಿಗೆ ಹೆದರುವ ಸನ್ನಿವೇಶವಿತ್ತು. ಇದೀಗ ಕೊರೋನ ಪರೀಕ್ಷೆಗೆ ಒಳಗಾಗಿ ಆತಂಕದಿಂದ ಫಲಿತಾಂಶಕ್ಕೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಕೊರೋನ ಪಾಸಿಟಿವ್ ವರದಿ ಬಂದರೆ ಆ ಮಕ್ಕಳ ಸ್ಥಿತಿಯೇನಾಗಬೇಕು? ಒಟ್ಟಿನಲ್ಲಿ ಲಸಿಕೆಗಳ ಹಿಂದಿರುವ ಶಕ್ತಿಗಳು ಮಕ್ಕಳ ಅಸಹಾಯಕತೆ, ಅನಿವಾರ್ಯತೆಗಳನ್ನು ಗುರುತಿಸಿ ಅವರನ್ನು ತಮ್ಮ ಬಂಡವಾಳವನ್ನಾಗಿಸಲು ಮುಂದಾಗಿದೆ. ಇವೆಲ್ಲವು ಅಂತಿಮವಾಗಿ ಮಕ್ಕಳ ಶಿಕ್ಷಣದ ಮೇಲೆ ಭಾರೀ ದುಷ್ಪರಿಣಾಮ ಬೀರಲಿವೆ. ಆದುದರಿಂದ, ಶಾಲೆಗಳ ಮೂಲಕ ಲಸಿಕೆ ನೀಡುವ ವ್ಯವಸ್ಥೆಯನ್ನೇ ಹಿಂದಕ್ಕೆ ಪಡೆಯಬೇಕು. ತಮ್ಮ ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ಪೋಷಕರು ಬಯಸಿದರೆ, ಅವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ ಲಸಿಕೆಯನ್ನು ಪಡೆಯಲಿ. ಶಿಕ್ಷಣವನ್ನು ಮುಂದಿರಿಸಿಕೊಂಡು ಮಕ್ಕಳಿಗೆ ಲಸಿಕೆ ಮಾರುವ ದಂಧೆ ನಿಲ್ಲಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News