ಅಂಬೇಡ್ಕರ್ ಮತ್ತು ಕಾಶ್ಮೀರ: ಸಂಘ ಪರಿವಾರದ ಮಿಥ್ಯೆಗಳು-ಸಾರ್ವತ್ರಿಕ ಸತ್ಯಗಳು

Update: 2022-02-02 05:55 GMT

ಭಾಗ-1

ಬಿಜೆಪಿ ಸರಕಾರ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಖಾತರಿಗೊಳಿಸಿದ್ದ ಅರ್ಟಿಕಲ್ 370 ಅನ್ನು ರದ್ದುಗೊಳಿಸಿ, ಜಮ್ಮು-ಕಾಶ್ಮೀರವನ್ನು ವಿಭಜಿಸಿ, ಕಾಶ್ಮೀರಕ್ಕೆ ರಾಜ್ಯದ ಸ್ಥಾನವನ್ನು ಕಿತ್ತು ಇದೇ ಪ್ರಾಂತವನ್ನು ರಾಷ್ಟ್ರಪತಿ ಆಡಳಿತದಡಿ ತಂದು ಮೂರುವರ್ಷಗಳಾಗುತ್ತಾ ಬಂತು. ಜಮ್ಮು-ಕಾಶ್ಮೀರವನ್ನು ಹಿಂದೂಕರಿಸುವ ಎರಡನೇ ಹೆಜ್ಜೆಯಾಗಿ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಮೋದಿ ಸರಕಾರ, ಬಿಜೆಪಿ ಪ್ರಭಾವ ಹೆಚ್ಚಿರುವ ಜಮ್ಮು ಪ್ರಾಂತಕ್ಕೆ ಹೆಚ್ಚಿನ ಶಾಸನಸಭಾ ಸ್ಥಾನಗಳನ್ನೂ, ಮುಸ್ಲಿಂ ಬಾಹುಳ್ಯವಿರುವ ಕಾಶ್ಮೀರ ಕಣಿವೆಗೆ ಸರಾಸರಿ ಮೊದಲಿನಷ್ಟೇ ಶಾಸನ ಸಭಾ ಸ್ಥಾನಗಳನ್ನು ನಿಗದಿಗೊಳಿಸಿದೆ. ಮತ್ತೊಂದು ಕಡೆ ಅಲ್ಲಿನ ಎಲ್ಲಾ ರಾಜಕೀಯ ಪ್ರಕ್ರಿಯೆಗಳನ್ನು ನಿರ್ಬಂಧಿಸಿರುವ ಮೋದಿ ಸರಕಾರ ಅಲ್ಲಿನ ಜನಪ್ರಿಯ ಪಕ್ಷಗಳ ನಾಯಕರನ್ನು ಹೆಚ್ಚು ಕಡಿಮೆ ಮೂರು ವರ್ಷಗಳಿಂದ ಗೃಹಬಂಧನದಲ್ಲಿಟ್ಟಿದೆ. ಸರಕಾರದ ವಿರುದ್ಧ ಭಿನ್ನಮತವನ್ನು ವ್ಯಕ್ತಪಡಿಸುವ ಎಲ್ಲಾ ಸ್ವತಂತ್ರ ದಾರಿಗಳನ್ನು ಬರಖಾಸ್ತುಗೊಳಿಸಲಾಗಿದೆ.

ಮೊನ್ನೆಮೊನ್ನೆ, ಕಾಶ್ಮೀರದ ಅಳಿದುಳಿದ ಸ್ವತಂತ್ರ ಧ್ವನಿಯಾಗಿದ್ದ ಶ್ರೀನಗರದ ಕಾಶ್ಮೀರ ಪ್ರೆಸ್ ಕ್ಲಬ್ ಅನ್ನು ಸರಕಾರಿ ಚೇಲಾಗಳು ಬಹಿರಂಗ ಸರಕಾರಿ ಬೆಂಬಲದೊಂದಿಗೆ ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ಸುಪ್ರೀಂ ಕೋರ್ಟು ಬಹಿರಂಗವಾಗಿ ನಡೆಯುತ್ತಿರುವ ದಿನನಿತ್ಯದ ಪ್ರಾಣ-ಮಾನ ಹರಣಗಳ ಬಗ್ಗೆ ಹಾಗೂ ಆ ಬಗ್ಗೆ ದಾಖಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಗಳ ನಿಧಾನ ನೀತಿಯನ್ನು ಅನುಸರಿಸುತ್ತಾ ಮೋದಿ ಸರಕಾರದ ಕೇಸರಿ ಪಾರುಪತ್ಯಕ್ಕೆ ಪರೋಕ್ಷ ಕುಮ್ಮಕ್ಕು ಕೊಡುತ್ತಿದೆ. ಸಾರಾಂಶದಲ್ಲಿ ಕಾಂಗ್ರೆಸ್ ಸರಕಾರಗಳು ಕಾಶ್ಮೀರಿಗಳಿಗೆ ಮಾಡುತ್ತಾ ಬಂದಿದ್ದ ಗಾಯವನ್ನು ಬಿಜೆಪಿ ಸರಕಾರ ಇನ್ನಷ್ಟು ಬಗೆದು ಕಾಶ್ಮೀರದ ಹೃದಯಕ್ಕೆ ಆಳವಾಗಿ ಇರಿಯುತ್ತಿದೆ. ಆದರೂ ಈ ಕ್ರಮದಿಂದ ಅಲ್ಲಿ ಶಾಂತಿ ನೆಲಸಲಿದೆ ಮತ್ತು ಅಭಿವೃದ್ಧಿ ಆಗಲಿದೆ ಎಂದು ಬೊಗಳೆ ಬಿಡುತ್ತಿರುವ ಮೋದಿ ಸರಕಾರ ತಾನು ಮಾಡಿರುವ ಈ ಬರ್ಬರ ಕೊಲೆಗೆ ಸುಂದರ ಹೊದಿಕೆಯನ್ನು ಹೊದಿಸಲು ಪ್ರಯತ್ನಿಸುತ್ತಿದೆ. ಈ ಆರ್ಟಿಕಲ್ 370ರಿಂದಲೇ ಕಾಶ್ಮೀರದಲ್ಲಿ ನಿರುದ್ಯೋಗ, ಭಯೋತ್ಪಾದನೆ, ಅನಭಿವೃದ್ಧಿ ಎಲ್ಲವೂ ಸಂಭವಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ವಾಸ್ತವವೆಂದರೆ, ಆರ್ಟಿಕಲ್ 370 ಇದ್ದರೂ ಕಾಶ್ಮೀರ ಹಲವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತಿಗಿಂತ ಮುಂದಿದೆ. ಆರ್ಟಿಕಲ್ 370 ಇಲ್ಲದಿದ್ದರೂ, ಬಿಜೆಪಿ ಆಡಳಿತವೇ ಇದ್ದರೂ ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಜಾರ್ಖಂಡ್ ಇನ್ನಿತರ ರಾಜ್ಯಗಳು ಅಭಿವೃದ್ಧಿಯಲ್ಲಿ ಕಾಶ್ಮೀರಕ್ಕಿಂತ ಬಹಳ ಹಿಂದೆ ಇದೆ. ಹೀಗಾಗಿ ಆರ್ಟಿಕಲ್ 370ಕ್ಕೂ ಕಾಶ್ಮೀರದ ಆರ್ಥಿಕ ಸಮಸ್ಯೆಗಳಿಗೂ ಯಾವ ಸಂಬಂಧವೂ ಇಲ್ಲ. ವಾಸ್ತವದಲ್ಲಿ ಆರ್ಟಿಕಲ್ 370ರ ಜೊತೆಗೆ ಅಲ್ಲಿ ಆಸ್ತಿಪಾಸ್ತಿ ಖರೀದಿ ಮಾಡಲು ಹಾಗೂ ಬಂಡವಾಳ ಹೂಡಿಕೆ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಆರ್ಟಿಕಲ್ 35-ಎ ಅನ್ನು ರದ್ದುಗೊಳಿಸಲಾಯಿತು. ಆದರೆ ಈವರೆಗೆ ಹೊರಗಿನಿಂದ ಒಂದು ನಯಾ ಪೈಸೆಯ ಬಂಡವಾಳವೂ ಬಂದಿಲ್ಲ.

ಕಾಶ್ಮೀರದಲ್ಲಿ ಎಂದಾದರೂ ಆರ್ಟಿಕಲ್ 370 ಜಾರಿಯಲ್ಲಿತ್ತೇ?

ಹಾಗೆ ನೋಡಿದರೆ ಆರ್ಟಿಕಲ್ 370 ಕೂಡಾ ಕಾಶ್ಮೀರಿಗಳಿಗೆ ಸ್ವಾಯತ್ತ ಅಧಿಕಾರವನ್ನೇನೂ ಕೊಟ್ಟಿರಲಿಲ್ಲ. ಆರ್ಟಿಕಲ್ 370ರಿಂದಾಗಿ ವಿದೇಶಾಂಗ, ರಕ್ಷಣೆ ಮತ್ತು ಸಂಪರ್ಕದ ವಿಷಯಗಳನ್ನು ಬಿಟ್ಟು ಭಾರತ ಸಂವಿಧಾನದ ಏಳನೇ ಶೆಡ್ಯೂಲಿನಲ್ಲಿರುವ ಯಾವುದೇ ಬಾಬತ್ತಿನ ಬಗ್ಗೆ ಶಾಸನ ರೂಪಿಸುವ ಸರ್ವಾಧಿಕಾರ ಕಾಶ್ಮೀರದ ಶಾಸನಸಭೆಗೆ ದಕ್ಕಬೇಕಿತ್ತಾದರೂ ಆ ಅವಕಾಶಗಳನ್ನು ಕಳೆದ 70 ವರ್ಷಗಳಲ್ಲಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಲೇ ಬರಲಾಗಿದೆ. ಆದರೆ ವಾಸ್ತವವಾಗಿ ನಡೆದದ್ದೇ ಬೇರೆ. ಕಾಂಗ್ರೆಸ್ ಸರಕಾರವೂ 1953 ರಿಂದ ಮಾಡುತ್ತಾ ಬಂದ ವಂಚನೆಯಿಂದಾಗಿ ಏಳನೇ ಶೆಡ್ಯೂಲಿನಲ್ಲಿ ಕೇಂದ್ರದ ಪಟ್ಟಿಯಲ್ಲಿರುವ 97 ವಿಷಯಗಳಲ್ಲಿ 94 ವಿಷಯಗಳು ಈಗಾಗಲೇ ಕಾಶ್ಮೀರಕ್ಕೆ ಅನ್ವಯವಾಗುತ್ತಿದೆ. ಸಮವರ್ತಿ ಪಟ್ಟಿಯಲ್ಲಿರುವ 47 ವಿಷಯಗಳಲ್ಲಿ 27 ವಿಷಯಗಳ ಕೇಂದ್ರದ ಶಾಸನವೇ ಕಾಶ್ಮೀರಕ್ಕೂ ಅನ್ವಯಿಸುತ್ತದೆ. ಹಾಗೆಯೇ ಭಾರತದ ಸಂವಿಧಾನದಲ್ಲಿರುವ 395 ಕಲಮುಗಳಲ್ಲಿ 260 ಕಲಮುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿವೆ. ಬಾಕಿ 135 ಕಲಮುಗಳು ಈಗಾಗಲೇ ಕಾಶ್ಮೀರದ ಸಂವಿಧಾನದಲ್ಲಿದ್ದವು. ಹೀಗಾಗಿ ಕಾಶ್ಮೀರದಲ್ಲಿದ್ದದ್ದು ಪ್ರಾಣವನ್ನು ಕಳೆದುಕೊಂಡ ಆರ್ಟಿಕಲ್ 370 ಮಾತ್ರ. ಈಗ ಬಿಜೆಪಿ ಆ ಅಸ್ಥಿಪಂಜರವನ್ನು ಹೊಡೆದು ಪುಡಿ ಮಾಡಿದೆ. ಅಷ್ಟು ಮಾತ್ರವಲ್ಲ ಭಾರತದ ಬೇರೇ ಯಾವ ರಾಜ್ಯಗಳೂ ಅನುಭವಿಸದಷ್ಟು ಮಿಲಿಟರಿ ದಮನವನ್ನು ಹೇರುವಂತಹ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ 1958ರಿಂದಲೂ ಕಾಶ್ಮೀರದಲ್ಲಿ ಜಾರಿಯಲ್ಲಿದೆ. ಭಾರತದ ಬೇರೆ ಯಾವ ಸಾಮಾನ್ಯ ರಾಜ್ಯಗಳು ಅನುಭವಿಸದಷ್ಟು ಕಾಲ ರಾಷ್ಟ್ರಪತಿ ಆಳ್ವಿಕೆಯನ್ನು ಕಾಶ್ಮಿರ ಅನುಭವಿಸಿದೆ. ಆರ್ಟಿಕಲ್ 370 ರದ್ದು ಮಾಡುವ ಮೂಲಕ ಮೋದಿ ಸರಕಾರ ಈ ಹಿಂದಿನ ಸರಕಾರಗಳು ಮಾಡುತ್ತಾ ಬಂದ ವಂಚನೆ, ದ್ರೋಹ ಹಾಗೂ ದಮನಗಳನ್ನು ಅಧಿಕೃತಗೊಳಿಸಿದೆ ಮತ್ತು ಕೇಸರೀಕರಿಸಿದೆ.

ಮೋಸಗಳಿಗೆಲ್ಲಾ ಅಂಬೇಡ್ಕರ್ ಮುಖವಾಡವೇಕೆ?

ಆದರೆ ಅದಕ್ಕೆ ಭಾರತೀಯರ ಸಮ್ಮತಿಯನ್ನು ಪಡೆದುಕೊಳ್ಳಲು ದೇಶದ ಭದ್ರತೆ, ಉಗ್ರಗಾಮಿ ಉಪಟಳ ಎಂದೆಲ್ಲಾ ಮುಖವಾಡವನ್ನು ಮೋದಿ ಸರಕಾರ ತೊಡಿಸುತ್ತಿದೆ. ಅದರ ಜೊತೆಗೆ ಭಾರತದ ಜನರ ಮೇಲೆ ತಾನು ನಡೆಸುವ ಘನಘೋರ ಆಕ್ರಮಣಗಳಿಗೆಲ್ಲಾ ಬಾಬಾ ಸಾಹೇಬ್ ಅಂಬೇಡ್ಕರರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಕುತಂತ್ರವನ್ನು ಬಿಜೆಪಿ ಮಾಡುತ್ತಿದೆ. ಈ ಹಿಂದೆ 2016ರಲ್ಲಿ ನೋಟು ನಿಷೇಧ ಮಾಡಿದಾಗಲೂ, ಇತ್ತೀಚೆಗೆ ಸಂಸ್ಕೃತ ಹೇರಿಕೆಯನ್ನು ಸಮರ್ಥಿಸಿಕೊಳ್ಳುವಾಗಲೂ ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿತ್ತು.

ಅದೇ ರೀತಿ, ಆರ್ಟಿಕಲ್ 370 ಅನ್ನು ರದ್ದುಗೊಳಿಸಿ, ಕಾಶ್ಮೀರದ ಮೇಲೆ ಮಾಡಿರುವ ಬರ್ಬರ ರಾಜಕೀಯ ದಾಳಿಗೆ ಅಂಬೇಡ್ಕರ್ ಅವರ ದೃಷ್ಟಿಕೋನವೂ ಪ್ರೇರಣೆ ಎಂದು ಹೇಳುವಷ್ಟು ಧಾರ್ಷ್ಟವನ್ನು ಆರೆಸ್ಸೆಸ್-ಬಿಜೆಪಿ ತೋರುತ್ತಿದೆ. ಅವರು ಮೂರು ಸುಳ್ಳುಗಳನ್ನು ಹೇಳುತ್ತಿದ್ದಾರೆ:

1. ಅಂಬೇಡ್ಕರ್ ಅವರಿಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡಲು ಇಷ್ಟವಿರಲಿಲ್ಲ. ಆರ್ಟಿಕಲ್ 370 ರದ್ದು ಮಾಡುವುದು ಸರ್ದಾರ್ ಪಟೇಲ್ ಮತ್ತು ಅಂಬೇಡ್ಕರ್ ಇಬ್ಬರ ಕನಸೂ ಆಗಿತ್ತು .
2. ಆದ್ದರಿಂದಲೇ ಅಂಬೇಡ್ಕರ್ ಅವರು 370ನೇ ವಿಧಿಯನ್ನು ರಚಿಸಲು ಒಪ್ಪಿರಲಿಲ್ಲ ಮತ್ತು ತಮ್ಮ ಸಹಾಯ ಕೇಳಿ ಬಂದಿದ್ದ ಶೇಕ್ ಅಬ್ದುಲ್ಲಾ ಅವರನ್ನು ಗದರಿಸಿ ಕಳಿಸಿದ್ದರು.
3. ಅಂಬೇಡ್ಕರ್ ಅವರು ಆರೆಸ್ಸೆಸ್ಸಿಗರ ರೀತಿಯಲ್ಲೇ ಮುಸ್ಲಿಂ ವಿರೋಧಿ, ಕಾಶ್ಮೀರ ಪ್ರತ್ಯೇಕತಾ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ದೇಶಭಕ್ತರಾಗಿದ್ದರು.

ಇತಿಹಾಸ ಗೊತ್ತಿಲ್ಲದವರು ಮತ್ತು ಚರಿತ್ರೆ ತಿರುಚುವ ದುರುದ್ದೇಶ ಉಳ್ಳವರು ಮಾತ್ರ ಹೀಗೆ ಹೇಳಲು ಸಾಧ್ಯ. ಹೀಗಾಗಿ ಕನ್ನಡಕಗಳನ್ನು ಕಳಚಿಟ್ಟು ಚರಿತ್ರೆಯನ್ನು ಅರಿಯೋಣ.

ಆರ್ಟಿಕಲ್ 370 ಮತ್ತು ಭಾರತದ ಸರ್ವಸಮ್ಮತಿ

ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಅವರ ನೇರ ಆಳ್ವಿಕೆಯಲ್ಲಿದ್ದ ಪ್ರದೇಶಗಳು ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಗೊಂಡವು ಮತ್ತು ಉಳಿದ 480 ಸಂಸ್ಥಾನಗಳಿಗೆ ಭಾರತ ಅಥವಾ ಪಾಕಿಸ್ಥಾನ ಸೇರುವ ಅಥವಾ ತಟಸ್ಥವಾಗುಳಿಯುವ ಅವಕಾಶವನ್ನು ನೀಡಲಾಗಿತ್ತು. ಆದರೆ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್ ಪ್ರತ್ಯೇಕವಾಗುಳಿಯುವ ತೀರ್ಮಾನ ಮಾಡಿದ್ದರು. ಅದಕ್ಕೆ ತದ್ವಿರುದ್ಧವಾಗಿ ಅಲ್ಲಿನ ಬಹುಸಂಖ್ಯಾತ ಮುಸ್ಲಿಂ ರೈತಾಪಿ ಜನರು ಶೇಕ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ಭಾರತವನ್ನು ಸೇರಬೇಕೆಂದು ರಾಜನ ಮೇಲೆ ಒತ್ತಾಯ ಹಾಕುತ್ತಿದ್ದರು. ಅದೇ ಸಮಯದಲ್ಲಿ ಪಾಕಿಸ್ತಾನದ ಸರಕಾರದ ಬೆಂಬಲದೊಂದಿಗೆ ಗುಡ್ಡಗಾಡು ದಾಳಿಕೋರರು ಕಾಶ್ಮೀರದ ಮೇಲೆ ದಾಳಿ ಮಾಡಿದಾಗ ರಾಜ ಅನಿವಾರ್ಯವಾಗಿ ಭಾರತ ಸೈನ್ಯದ ಸಹಾಯ ಬೇಡಬೇಕಾಯಿತು. ಆ ಕಾರಣದಿಂದಲೇ 1947ರ ಅಕ್ಟೋಬರ್ 27ರಂದು ಭಾರತ ಸರಕಾರ ಮತ್ತು ರಾಜಾ ಹರಿಸಿಂಗ್ ನಡುವೆ ಸೇರ್ಪಡೆ ಒಪ್ಪಂದವಾಯಿತು. ಅದರ ಪ್ರಕಾರ ಕಾಶ್ಮೀರವು ಭಾರತಕ್ಕೆ ಸೇರಿಕೊಳ್ಳುತ್ತದೆ. ಆದರೆ ಕಾಶ್ಮೀರದ ಮೇಲೆ ಭಾರತ ಸರಕಾರದ ಅಧಿಕಾರ ಕೇವಲ ರಕ್ಷಣೆ, ವಿದೇಶಾಂಗ ಮತ್ತು ಸಂಪರ್ಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನುಳಿದ ಎಲ್ಲಾ ಅಧಿಕಾರಗಳು ಕಾಶ್ಮೀರದ ಜನ ರಚಿಸಿಕೊಳ್ಳುವ ಶಾಸನ ಸಭೆಗೆ ಸೇರಿರುತ್ತದೆ. ಕಾಶ್ಮೀರದ ಸಂವಿಧಾನ ಸಭೆ/ ಶಾಸನ ಸಭೆಯ ಒಪ್ಪಿಗೆ ಇಲ್ಲದೆ ಭಾರತವು ಇನ್ಯಾವುದೇ ಅಧಿಕಾರವನ್ನು ಕಾಶ್ಮೀರದ ಮೇಲೆ ಚಲಾಯಿಸುವಂತಿಲ್ಲ ಹಾಗೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ ಮೇಲೆ ಕಾಶ್ಮೀರದ ಜನಾಭಿಪ್ರಾಯದ ಮೇರೆಗೇ ಈ ಒಪ್ಪಂದವನ್ನು ಶಾಶ್ವತಗೊಳಿಸಲಾಗುವುದು ಎಂಬುದು ಭಾರತ ಕೊಟ್ಟ ಆಶ್ವಾಸನೆಯಾಗಿತ್ತು. ಹಾಗೂ ಆ ಸೇರ್ಪಡೆ ಒಪ್ಪಂದದ ತಾತ್ಪರ್ಯವೂ ಆಗಿತ್ತು. ಭಾರತ ಸರಕಾರವು ರಾಜಾ ಹರಿಸಿಂಗ್ ಜೊತೆ ಈ ಒಪ್ಪಂದ ಮಾಡಿಕೊಳ್ಳುವಾಗ ಅಂಬೇಡ್ಕರ್ ಅವರೂ ಭಾರತ ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದರು. ಅವರು ಈ ಒಪ್ಪಂದದ ಬಗ್ಗೆ ಯಾವ ಆಕ್ಷೇಪಣೆಯನ್ನೂ ಮಾಡಿರಲಿಲ್ಲ. ಅಷ್ಟು ಮಾತ್ರವಲ್ಲ, ಇಂದಿನ ಬಿಜೆಪಿಯ ಪಿತಾಮಹ ಶ್ಯಾಮ ಪ್ರಸಾದ್ ಮುಖರ್ಜಿ ಕೂಡಾ ಆಗ ಇದರ ಬಗ್ಗೆ ಚಕಾರವೆತ್ತಿರಲಿಲ್ಲ. ಇನ್ನು ಇಂದು ಬಿಜೆಪಿ ಆರಾಧಿಸುವ ಸರ್ದಾರ್ ವಲಭಭಾಯಿ ಪಟೇಲರೇ ಆ ಮಾತುಕತೆಯ ಒಟ್ಟಾರೆ ಉಸ್ತುವಾರಿ ವಹಿಸಿದ್ದರು. ಆ ನಂತರದಲ್ಲಿ ಈ ಒಪ್ಪಂದವನ್ನು ಆರ್ಟಿಕಲ್ 370ರ (ಆಗ ಆರ್ಟಿಕಲ್ 306-ಎ) ರೂಪದಲ್ಲಿ ಭಾರತ ಸಂವಿಧಾನದಲ್ಲಿ ಸೇರಿಸುವ ಪ್ರಕ್ರಿಯೆ ಪ್ರಾರಂಭವಾಯಿತು.

ಆ ಒಟ್ಟಾರೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವರು ಕಾಶ್ಮೀರದ ರಾಜನಿಂದ ಕಾಶ್ಮೀರದ ತಾತ್ಕಾಲಿಕ ಸರಕಾರದ ಮುಖ್ಯಸ್ಥರಾದ ಶೇಕ್ ಅಬ್ದುಲ್ಲಾ ಮತ್ತು ಇತರರು ಹಾಗೂ ಭಾರತ ಪ್ರಭುತ್ವದ ಕಡೆಯಿಂದ ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್, ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಸದಸ್ಯರಾದ ಗೋಪಾಲ್‌ಸ್ವಾಮಿ ಅಯ್ಯಂಗಾರ್. ಇದರ ಬಹುಪಾಲು ಚರ್ಚೆಗಳು ವಲ್ಲಭಭಾಯಿ ಪಟೇಲರ ಗೃಹ ಕಚೇರಿಯಲ್ಲೇ ನಡೆಯುತ್ತಿದ್ದವು. ಆರ್ಟಿಕಲ್‌ನ ರಚನೆಯನ್ನು ಸಾಂವಿಧಾನಿಕವಾಗಿ ಮಾನ್ಯವಾಗಿಸುವ ಪ್ರಕ್ರಿಯೆಯ ಭಾಗವಾಗಿ 1949ರ ಮೇ ತಿಂಗಳಲ್ಲಿ ಭಾರತದ ಸಂವಿಧಾನ ಸಭೆಗೆ ಕಾಶ್ಮೀರದ ಪ್ರತಿನಿಧಿಗಳಾಗಿ ಶೇಕ್ ಅಬ್ದುಲ್ಲಾ, ಮಿರ್ಜಾ ಮುಹಮ್ಮದ್ ಅಫ್ಝಲ್ ಬೇಗ್, ಮೌಲಾನ ಮುಹಮ್ಮದ್ ಸೈಯದ್ ಮಸೂದಿ ಮತ್ತು ಶ್ರೀ ಮೋತಿ ರಾಂ ಬಾಗ್ಡಾ ಅವರನ್ನು ಸೇರಿಸಿಕೊಳ್ಳಲಾಯಿತು. (Article 370- A Constitutional History Of Jammu And Kasmir- A.G. Noorani)

  ಒಪ್ಪಿತ ಕರಡನ್ನು ಗೋಪಾಲ್‌ಸ್ವಾಮಿ ಅಯ್ಯಂಗಾರ್ ಅವರು 1949ರ ಅಕ್ಟೋಬರ್ 17ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅಂಬೇಡ್ಕರ್ ಅವರು ಆ ಕರಡಿನ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ಮಾಡಲಿಲ್ಲ. ಅಷ್ಟು ಮಾತ್ರವಲ್ಲ ಅಂದು ಸಭೆಯಲ್ಲಿದ್ದ ಶ್ಯಾಂ ಪ್ರಸಾದ್ ಮುಖರ್ಜಿ, ವಲ್ಲಭಬಾಯಿ ಪಟೇಲರಾದಿಯಾಗಿ ಯಾರೂ ಅರ್ಧ ಸಾಲಿನ ತಿದ್ದುಪಡಿಯನ್ನೂ ಹೇಳಲಿಲ್ಲ. ಅಂದು ಭಾರತದ ಸಂವಿಧಾನದ ಪೀಠಿಕೆಯ ಬಗ್ಗೆ ಚರ್ಚೆ ಮಾಡಬೇಕಿದ್ದರಿಂದ ಈ ಆರ್ಟಿಕಲ್ ಸೇರ್ಪಡೆ ಮಾಡಲು ನಮ್ಮ ಸಂವಿಧಾನ ಸಭೆಯು ತೆಗೆದುಕೊಂಡ ಸಮಯ ಅರ್ಧ ದಿನಕ್ಕಿಂತಲೂ ಕಡಿಮೆ! (ಇವೆಲ್ಲವೂ ಸಂವಿಧಾನ ಸಭೆಯ ನಡಾವಳಿಯಲ್ಲಿ ದಾಖಲುಗೊಂಡಿದ್ದು ಆಸಕ್ತರು ಈ ವೆಬ್ ವಿಳಾಸದಲ್ಲಿ ಇದನ್ನು ಪರಿಶೀಲಿಸಬಹುದು: http://164.100.47.194/loksabha/writereaddata/cadebatefiles/C17101949.html)

ಶೇಕ್ ಅಬ್ದುಲ್ಲಾರನ್ನು ಗದರಿದರೆಂಬ ಆರೆಸ್ಸೆಸ್ ಪುಕಾರು

ಹಾಗಿದ್ದಲ್ಲಿ ಅಂಬೇಡ್ಕರ್ ಅವರು ಆರ್ಟಿಕಲ್ 370 ರಚನೆ ಮಾಡಲು ಒಪ್ಪಿರಲಿಲ್ಲವೆಂಬ ಹಾಗೂ ಶೇಕ್ ಅಬ್ದುಲ್ಲಾ ಅವರನ್ನು ಗದರಿ ಕಳಿಸಿದರೆಂಬ ಪುಕಾರು ಎಲ್ಲಿಂದ ಹುಟ್ಟಿಕೊಂಡಿತು? ಇದರ ಬಗ್ಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆಯಲ್ಲಾಗಲೀ ಅಥವಾ ಅಂಬೇಡ್ಕರ್ ಆವರ ಬರಹ ಭಾಷಣಗಳ ಇಡೀ 17 ಸಂಪುಟಗಳಲ್ಲಾಗಲೀ ಅಥವಾ ಅವರ ಸಹಚರರ ಬರಹಗಳಲ್ಲಾಗಲೀ ಎಲ್ಲೂ ಉಲ್ಲೇಖವಿಲ್ಲ. ಇದರ ಬಗ್ಗೆ ಪ್ರಥಮ ಬಾರಿ ಉಲ್ಲೇಖವಾಗುವುದು 1991ರಲ್ಲಿ ಆರೆಸ್ಸೆಸ್‌ನ ಮುಖವಾಣಿಯಾದ ‘ತರುಣ್ ಭಾರತ್’ ಪತ್ರಿಕೆಯ ಸಂಪಾದಕೀಯದಲ್ಲಿ. ಆರೆಸ್ಸೆಸ್ ಮತ್ತು ಬಿಜೆಪಿಯ ಮುಖಂಡರಾದ ಬಲರಾಜ್ ಮುಧೋಕ್ ಅವರು ಈ ರೀತಿ ಎಲ್ಲೋ ಹೇಳಿದ್ದನ್ನು ಉಲ್ಲೇಖಿಸಿ ಆ ಸಂಪಾದಕೀಯವನ್ನು ಬರೆಯಲಾಗಿತ್ತು. ಆದರೆ ಅದು ತನ್ನ ಪ್ರತಿಪಾದನೆಗೆ ಯಾವುದೇ ಪುರಾವೆಯನ್ನು ಒದಗಿಸುವುದಿಲ್ಲ. ಆ ನಂತರ ಈ ಸುಳ್ಳನ್ನು ಪದೇಪದೇ ಹೇಳುತ್ತಾ ಹೇಳುತ್ತಾ ಈಗ ಅದೇ ಸತ್ಯವೇನೋ ಎಂಬಂತಾಗಿಬಿಟ್ಟಿದೆ. ಈ ಹಿಂದೆಯೂ ಇದೇ ರೀತಿ ಅಂಬೇಡ್ಕರ್ ಅವರನ್ನು ‘ತಮ್ಮವರನ್ನಾಗಿ ಸಿಕೊಳ್ಳುವ’ ಪ್ರಕ್ರಿಯೆಯಲ್ಲಿ ಗಾಂಧಿ ಕೊಲೆ ಪ್ರಕರಣದಲ್ಲಿ ನಿಂದಿತರಾಗಿದ್ದ ಸಾವರ್ಕರ್ ಅವರ ವಕೀಲರನ್ನು ಅಂಬೇಡ್ಕರ್ ಅವರು ಖಾಸಗಿಯಾಗಿ ಭೇಟಿಯಾಗಿ ಸಾವರ್ಕರ್‌ಗೆ ತಮ್ಮ ಬೆಂಬಲವನ್ನು ತಿಳಿಸಿದ್ದರು ಎಂಬ ಪುಕಾರನ್ನು ಆರೆಸ್ಸೆಸ್ ಬಣವು ಹರಿಬಿಟ್ಟಿತ್ತು. ಇದನ್ನು ಮೊದಲು ಮುಲ್ಗಾಂವ್ಕರ್ ಎನ್ನುವ ಮರಾಠಿ ಬರಹಗಾರರೊಬ್ಬರು ತಮ್ಮ ಕಲ್ಪನಾ ಲಹರಿಯ ಬರಹದಲ್ಲಿ ತೇಲಿಬಿಟ್ಟಿದ್ದರು. ಆ ನಂತರ ದೇಶದ ಗೃಹಮಂತ್ರಿಯಾಗಿದ್ದಾಗ ಅಡ್ವಾಣಿಯವರು ಮುಲ್ಗಾಂವ್ಕರ್ ಅವರ ಬರಹವನ್ನು ಉಲ್ಲೇಖಿಸಿ ಒಂದು ಭಾಷಣದಲ್ಲಿ ಮಾತನಾಡಿದ್ದರು. ಆ ನಂತರ ಲಕ್ಷ ಲಕ್ಷ ಸಾರಿ ಬಿಜೆಪಿಯ ಬಾಯಿಗಳು ಅದನ್ನೇ ಪುನರುಚ್ಚರಿಸುತ್ತಾ ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನವನ್ನು ಮುಂದುವರಿಸಿವೆ.
(ನಾಳೆಯ ಸಂಚಿಕೆಗೆ)

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News