ಬೆಂಗಳೂರು: ಇಂಜಿನಿಯರ್ ಅಪಹರಣ ಪ್ರಕರಣ; 6 ಮಂದಿಯ ಬಂಧನ

Update: 2022-02-03 12:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.2: ಕೆಲಸ ಮಾಡಿಸಿಕೊಂಡು ಹಣ ಕೊಡದಿದ್ದರಿಂದ ಆಕ್ರೋಶಗೊಂಡು ಇಂಜಿನಿಯರ್ ನನ್ನು ಅಪಹರಿಸಿದ್ದ ಆರು ಮಂದಿಯನ್ನು ಇಲ್ಲಿನ ಯಲಹಂಕ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಡಿಶಾ ಮೂಲದ ಸಿವಿಲ್ ಇಂಜಿನಿಯರ್ ಆಗಿದ್ದ ಮಾನಸ್ ಅವರನ್ನು ಅಪಹರಿಸಿದ ಆರೋಪದಡಿ ನಂದ, ಸುನಿಲ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಡಿಸಿಪಿ ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ಕಟ್ಟಡ ಕಾಂಟ್ರಾಕ್ಟರ್ ಹಾಗೂ ಸಿವಿಲ್ ಇಂಜಿನಿಯರ್ ಆಗಿದ್ದ ಮಾನಸ್‍ಗೆ ಕಳೆದ ವರ್ಷ ಫೆಬ್ರವರಿಯಲ್ಲಿ ಆರೋಪಿ ನಂದ ಮತ್ತು ಅವರ ತಂಡವು ಪರಿಚಯವಾಗಿತ್ತು. ಇವರು ಪರಸ್ಪರ ಮಾತನಾಡಿಕೊಂಡು ನಗರದಲ್ಲೆಡೆ ಕಟ್ಟಡ ನಿರ್ಮಾಣ ಕೆಲಸಗಳ ಗುತ್ತಿಗೆ ಪಡೆದು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅದೇರೀತಿ ಆರೋಪಿಗಳು ಕೆಲಸಕ್ಕಾಗಿ ಜೆಸಿಬಿ ಹಾಗೂ ಇಟಾಚಿ ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಬಾಣಸವಾಡಿಯಲ್ಲಿ ಕೈಗೆತ್ತಿಕೊಂಡಿದ್ದ ಯೋಜನೆ ವಿಚಾರದಲ್ಲಿ ನಂದ ಹಾಗೂ ಮಾನಸ್ ನಡುವೆ ಹಣಕಾಸಿನ ವೈಮನಸ್ಸು ಉಂಟಾಗಿತ್ತು. ಕೆಲಸ ಮಾಡಿದ್ದಕ್ಕಾಗಿ 30 ಲಕ್ಷ ಹಣ ಕೇಳಲು ಹೋದ ಆರೋಪಿಗಳಿಗೆ ನೀವೂ ಸರಿಯಾಗಿ ಕೆಲಸ ಮಾಡಿಲ್ಲ, ಅದೇ ಕೆಲಸವನ್ನು ಬೇರೆಯವರಿಂದ ಮಾಡಿಸಿದ್ದೇನೆ ಎಂದು ಹೇಳಿ ಮಾನಸ್ ಹಣ ಕೊಡಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.

ಇದರಿಂದ ಆಕ್ರೋಶಗೊಂಡ ನಂದ ಹಾಗೂ ಆತನ ಸಹಚರರು ಮಾನಸ್ ಅಪಹರಣಕ್ಕೆ ಸಂಚು ರೂಪಿಸಿದ್ದು, ಬುಧವಾರ ಬೆಳಗ್ಗೆ ಯಲಹಂಕದ ರೈತರ ಸಂತೆ ಬಳಿ ಕಾರಿನಲ್ಲಿ ಅಪಹರಿಸಿದ್ದಾರೆ. ಅಪಹರಣ ವೇಳೆ ಮಾನಸ್ ಜೊತೆಗಿದ್ದ ಯುವತಿ ಕೂಡಲೇ ಯಲಹಂಕ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News