ಕೋಮು ಗಲಭೆಗಳು ಮತ್ತು ಪೊಲೀಸರು

Update: 2022-05-10 03:44 GMT

ದೇಶದ ಅನೇಕ ಕಡೆ ನಡೆಯುತ್ತಿರುವ ಕೋಮು ಗಲಭೆ ಮತ್ತು ಹಿಂಸಾಚಾರಗಳನ್ನು ನಿಯಂತ್ರಿಸುವಲ್ಲಿ ಸರಕಾರ ಅಂದರೆ ಪೊಲೀಸ್ ಇಲಾಖೆ ವಿಫಲವಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಕೆಲವೆಡೆ ಪೊಲೀಸರೂ ಗಲಭೆಕೋರರೊಂದಿಗೆ ಶಾಮೀಲಾದ ಪ್ರಕರಣಗಳು ಕಂಡು ಬಂದಿವೆ. ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿಯ ದಿನದಂದು ನಡೆದ ಕೋಮು ಗಲಭೆಯ ಸಂಚು ಪೊಲೀಸರಿಗೆ ಗೊತ್ತಿಲ್ಲದೆ ಇರಲಿಲ್ಲ. ಆದರೆ ಅದನ್ನು ತಡೆಯಲು ಅವರು ವಿಫಲಗೊಂಡರು ಎಂದು ನ್ಯಾಯಾಲಯ ದಿಲ್ಲಿಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಅಂದು ಹಿಂಸಾಚಾರಕ್ಕೆ ಕಾರಣವಾದ ಮೆರವಣಿಗೆಯನ್ನು ತಡೆಯಬೇಕಾದ ಪೊಲೀಸರು ಕರ್ತವ್ಯ ಪಾಲನೆಯಲ್ಲಿ ವಿಫಲಗೊಂಡರು ಮಾತ್ರವಲ್ಲ ಮೆರವಣಿಗೆ ಮಾಡುವವರೊಂದಿಗೆ ಶಾಮೀಲಾದರು ಎಂದು ದಿಲ್ಲಿಯ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗಗನ್‌ದೀಪ್ ಸಿಂಗ್ ಹೇಳಿದ್ದಾರೆ.

ಹನುಮ ಜಯಂತಿಯ ದಿನ ಗಲಭೆಗೆ ಕಾರಣವಾದ ಮೆರವಣಿಗೆಗೆ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ. ಈ ಮೆರವಣಿಗೆ ಅಕ್ರಮವಾಗಿತ್ತು ಎಂದು ಸರಕಾರ ಕೂಡ ಈಗಾಗಲೇ ಒಪ್ಪಿಕೊಂಡಿದೆ. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ, ಅನುಮತಿ ಪಡೆಯದ ಮೆರವಣಿಗೆಯನ್ನು ತಡೆಯಲು ಪೊಲೀಸರು ವಿಫಲಗೊಂಡಿದ್ದಾರೆ ಮಾತ್ರವಲ್ಲ, ಕಾನೂನು ಉಲ್ಲಂಘನೆ ಮಾಡಿದವರೊಂದಿಗೆ ಶಾಮೀಲಾಗಿದ್ದಾರೆ ಎಂಬ ಸಂದೇಹ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಅನುಮತಿ ಪಡೆಯದ ಅಕ್ರಮ ಮೆರವಣಿಗೆಯನ್ನು ತಡೆಯಬೇಕಾದ ಜಹಾಂಗೀರ್‌ಪುರಿ ಪೊಲೀಸ್ ಇನ್‌ಸ್ಪೆಕ್ಟರ್ ರಾಜೀವ್ ರಂಜನ್ ಮತ್ತು ಇತರ ಪೊಲೀಸ್ ಸಿಬ್ಬಂದಿ ತಾವೇ ಸ್ವತಃ ಮೆರವಣಿಗೆಯಲ್ಲಿ ಪಾಲುಗೊಂಡರು ಎಂಬುದು ಎಫ್‌ಐಆರ್‌ನಿಂದ ಖಚಿತವಾಗಿದೆ. ಇದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಗಿದೆ.

ಕೋಮು ಗಲಭೆಗಳ ಸಂದರ್ಭಗಳಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ವಿಫಲಗೊಂಡದ್ದು ಮಾತ್ರವಲ್ಲದೆ ಗಲಭೆಕೋರರೊಂದಿಗೆ ಶಾಮೀಲಾದ ಘಟನೆ ಇದೇ ಮೊದಲಲ್ಲ. ಭಾಗಲ್ಪುರ ಗಲಭೆ ನಡೆದಾಗ ಮತ್ತು ಗುಜರಾತ್ ಹತ್ಯಾಕಾಂಡ ನಡೆದಾಗ ಪೊಲೀಸರು ಯಾವ ರೀತಿ ವರ್ತಿಸಿದರೆಂಬುದು ಎಲ್ಲರಿಗೂ ತಿಳಿದ ಸಂಗತಿ. ಕರ್ನಾಟಕದ ಕರಾವಳಿ ಜಿಲ್ಲೆಗಳ ಪೊಲೀಸರು ಕೋಮುವಾದಿಗಳ ಕಣ್ಸನ್ನೆಯಂತೆ ಕೆಲಸ ಮಾಡುತ್ತಿರುವ ಬಗ್ಗೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿವೆ. ಇತ್ತೀಚೆಗೆ ನ್ಯಾಯಾಲಯಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಪೊಲೀಸರ ಈ ವರ್ತನೆ ಆತಂಕಕಾರಿಯಾಗಿದೆ.

ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮಗಳು ಹಿಂಸಾಚಾರವನ್ನು ಪ್ರಚೋದಿಸುವ ವೇದಿಕೆಗಳಾಗಿ ಬಳಕೆಯಾಗುತ್ತಿವೆ. ಈ ಬಗ್ಗೆ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ 'ಧಾರ್ಮಿಕ' ಎಂದು ಕರೆಸಿಕೊಳ್ಳುವ ವೇದಿಕೆಗಳಲ್ಲಿ ಕೋಮು ಪ್ರಚೋದಕ ಮಾತುಗಳನ್ನು ಆಡುವುದನ್ನು ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ತಿಳಿಸುವಂತೆ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸರಕಾರಗಳಿಗೆ ಆದೇಶಿಸಿದ್ದನ್ನು ಇಲ್ಲಿ ಗಮನಿಸಬಹುದು.

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹರಿದ್ವಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಗಾಝಿಯಾಬಾದ್‌ನ ದೇವಾಲಯದ ಮುಖ್ಯ ಅರ್ಚಕ ನರಸಿಂಹಾನಂದ ಸರಸ್ವತಿ ಎಂಬಾತ ಮುಸಲ್ಮಾನರ ಸಾಮೂಹಿಕ ಹತ್ಯೆಗೆ ಕರೆ ನೀಡಿದಾಗ ಆತನನ್ನು ಬಂಧಿಸಲು ಪೊಲೀಸರು ಹಿಂದೆ ಮುಂದೆ ನೋಡಿದರು. ಹಿಂದೂ ಧರ್ಮ ಅಪಾಯದಲ್ಲಿದೆ, ಅದರ ರಕ್ಷಣೆಗೆ ಶಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕೆಂದು ಕರೆ ನೀಡುವವರ ಬಗ್ಗೆ ಪೊಲೀಸರು ಸೌಮ್ಯ ಧೋರಣೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ಕರ್ನಾಟಕದಲ್ಲಿ ಪ್ರಮೋದ್ ಮುತಾಲಿಕ್ ಮತ್ತು ಜಗದೀಶ್ ಕಾರಂತರು ಇಂತಹ ಮಾತುಗಳಿಗೆ ಹೆಸರಾಗಿದ್ದಾರೆ. ಅವರ ಮೇಲೆ ಕೆಲವು ಕಡೆ ಪ್ರಕರಣಗಳನ್ನು ದಾಖಲಿಸಿದ್ದರೂ ಪ್ರಚೋದನಾಕಾರಿ ಮಾತುಗಳನ್ನು ತಡೆಯಲು ಸಾಧ್ಯವಾಗಿಲ್ಲ.

ಎಲ್ಲೆಡೆ ದ್ವೇಷ ಭಾಷಣಗಳು ನಡೆಯುತ್ತಿದ್ದರೂ ಪ್ರಧಾನ ಮಂತ್ರಿಯವರ ಜಾಣ ಮೌನದ ಬಗ್ಗೆ ಇತ್ತೀಚೆಗೆ ನೂರು ಮಂದಿ ನಿವೃತ್ತ ಸರಕಾರಿ ಅಧಿಕಾರಿಗಳು ಮತ್ತು ಮಾಜಿ ರಾಯಭಾರಿಗಳು ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ನಮ್ಮ ರಾಜ್ಯದ ಮುಖ್ಯ ಮಂತ್ರಿಯಂತೂ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತಹ ಹೇಳಿಕೆಗಳನ್ನು ನೀಡುವ ಮೂಲಕ ಕೋಮು ಗಲಭೆ ಪ್ರಚೋದ ಕರ ಬಗ್ಗೆ ಸೌಮ್ಯ ಧೋರಣೆ ತಾಳಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.

ಧರ್ಮವೀರ ಆಯೋಗದ ವರದಿಯ ಪ್ರಕಾರ ನಮ್ಮ ಪೊಲೀಸ್ ಇಲಾಖೆಯನ್ನು ಸಮಗ್ರವಾಗಿ ಮಾರ್ಪಡಿಸಬೇಕಾಗಿದೆ. ಇಲಾಖೆಯ ಒಳಗೆ ನುಸುಳಿರುವ ಕೋಮುವಾದಿ ಶಕ್ತಿಗಳನ್ನು ಹೊರದಬ್ಬಬೇಕಾಗಿದೆ. ಪೊಲೀಸರನ್ನು ನೇಮಕಾತಿ ಮಾಡಿಕೊಳ್ಳುವಾಗ ಮತ ನಿರಪೇಕ್ಷ ಮೌಲ್ಯಗಳ ಬಗ್ಗೆ ಮತ್ತು ಸಂವಿಧಾನದ ಆಶಯಗಳ ಬಗ್ಗೆ ಅವರಿಗೆ ತರಬೇತಿ ನೀಡುವುದು ಅತ್ಯಗತ್ಯವಾಗಿದೆ. ಬೇಲಿಯೇ ಹೊಲವನ್ನು ಮೇಯ್ದಂತೆ ಪೊಲೀಸರೇ ಮೌನ ಪ್ರೇಕ್ಷಕರಾದರೆ, ಗಲಭೆಕೋರರೊಂದಿಗೆ ಶಾಮೀಲಾದರೆ ದೇಶದಲ್ಲಿ ಅರಾಜಕ ವಾತಾವರಣ ಉಂಟಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವುದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News