ಕುಂದಾಪುರ ತಾಲೂಕಿನಾದ್ಯಂತ ಭಾರೀ ಗಾಳಿಮಳೆ

Update: 2022-05-17 14:35 GMT

ಕುಂದಾಪುರ: ತಾಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮಾವಿನ ಮರವೊಂದು ಬಿದ್ದು ಅಕ್ಕ ತಂಗಿಯರ ಮನೆಗಳಿಗೆ ಹಾನಿಯಾಗಿರುವ ಘಟನೆ ಕಂದಾವರ ಗ್ರಾಪಂ ವ್ಯಾಪ್ತಿಯ ಸಾಂತಾವರ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿಗಳಾದ ಶಾರದಾ ದೇವಾಡಿಗ ಹಾಗೂ ಅವರ ತಂಗಿ ಬಾಬಿ ದೇವಾಡಿಗ ಎಂಬವರು ಅಕ್ಕಪಕ್ಕದಲ್ಲಿನ ಮನೆ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದು ಮನೆಗಳು ಜಖಂಗೊಂಡಿವೆ. ಈ ಮರ ಬೀಳುವ ವೇಳೆ ತೆಂಗಿನ ಮರ ಹಾಗೂ ಮತ್ತೊಂದು ಮರ ಕೂಡ ಬಿದ್ದಿದೆ. ಎರಡೂ ಮನೆಗಳ ಮೇಲ್ಮಾಡಿನ ಹೆಂಚು, ಪಕ್ಕಾಸು ಕಳಚಿ ಬಿದ್ದಿವೆ.

ಮನೆಯೊಳಗಿನ ಫ್ಯಾನ್, ಟಿವಿ, ಪೀಠೋಪಕರಣ ಸಹಿತ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಇದರಿಂದ ಒಟ್ಟು 70ಸಾವಿರ ರೂ. ನಷ್ಟ ಉಂಟಾಗಿದೆ. ಕೂಲಿ ಕೆಲಸ ಮಾಡುತ್ತಿರುವ ಬಡ ಕುಟುಂಬಗಳು ಈ ಅನಾಹುತ ದಿಂದ ಕಂಗೆಟ್ಟಿವೆ. ಸ್ಥಳಕ್ಕೆ ಕಂದಾವರ ಗ್ರಾಪಂ ಉಪಾಧ್ಯಕ್ಷೆ ಶೋಭಾ, ಸದಸ್ಯ ಸೀನ ಪೂಜಾರಿ, ಗ್ರಾಮ ಲೆಕ್ಕಿಗ ಧೀರಜ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಮಂಗಳವಾರ ಬೆಳೆಗ್ಗೆ ನಿಂದಲೂ ಮೋಡ ಕವಿದ ವಾತಾವರಣದ ಜೊತೆ ಹನಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

9 ತಿಂಗಳ ಮಗು ಸಹಿತ ಮಕ್ಕಳು ಪಾರು!

ಮರ ಬೀಳುವ ವೇಳೆ ಬಾಬಿ ಅವರ ಮನೆಯಲ್ಲಿ ಅವರ ಗಂಡ ಕೃಷ್ಣ, ಇಬ್ಬರು ಗಂಡು ಮಕ್ಕಳಾದ ವಿಶ್ವನಾಥ್, ಸತೀಶ್, ಸೊಸೆ ಹಾಗೂ ಮೊಮ್ಮಕ್ಕಳಾದ 9 ತಿಂಗಳ ಪುಟಾಣಿ ಕಂದಮ್ಮ, 6 ವರ್ಷದ ಗಂಡು ಮಗು ಇದ್ದರೆನ್ನಲಾಗಿದೆ.

ಶಾರದಾರ ಮನೆಯಲ್ಲಿ ಅವರ ಮಕ್ಕಳಾದ ಶೋಭಾ, ಸಂದೇಶ, ಉಮೇಶ್, ಸೊಸೆ ಹಾಗೂ ಉಮೇಶ್ ಅವರ ೩ ವರ್ಷದ ಮಗ, ೮ ವರ್ಷದ ಮಗಳು ಮನೆಯಲ್ಲಿದ್ದರು. ಪುಟಾಣಿಗಳು ಮನೆಯೊಳಕ್ಕಿದ್ದಿದ್ದು ಹಿರಿಯರು ಮನೆ ಸಮೀಪದ ರೈಲು ಹಳಿಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಮನೆಯಿಂದ ಹೊರಕ್ಕಿದ್ದರು. ಮನೆ ಮೇಲೆ ಮರ ಬೀಳುತ್ತಿದ್ದಂತೆ ಮಕ್ಕಳನ್ನು ಪಾರು ಮಾಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News