ಬೆಂಗಳೂರಿನ 8 ವಲಯಗಳಿಗೆ ತಲಾ ಒಂದು ಕಾರ್ಯಪಡೆ ರಚನೆ : ಸಿಎಂ ಬಸವರಾಜ ಬೊಮ್ಮಾಯಿ

Update: 2022-05-20 07:21 GMT

ಬೆಂಗಳೂರು: ಬೆಂಗಳೂರಿನ 8 ವಲಯಕ್ಕೂ ತಲಾ ಒಂದು ಕಾರ್ಯಪಡೆ ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಾದ ರಾಮಮುರ್ತಿನಗರದ ನಾಗಪ್ಪ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾರ್ಯಪಡೆಯಲ್ಲಿ ಒಬ್ಬ ಸಚಿವರನ್ನು ಮುಖ್ಯಸ್ಥರನ್ನಾಗಿ ಮಾಡಿ, ಆ ಭಾಗದ ಶಾಸಕರು, ಸಂಸದರು. ಎಂಎಲ್ ಸಿ ಗಳು , ಹಿರಿಯ ಅಧಿಕಾರಿಗಳು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಈ ಕಾರ್ಯಪಡೆಗಳ ನೇತೃತ್ವದಲ್ಲಿ ಆಯಾ ವಲಯದ ಅಭಿವೃದ್ಧಿ ಕಾರ್ಯಗಳು, ಪ್ರವಾಹದಂತಹ ಸಂದರ್ಭಗಳಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನೀಡಿ ಇಂದೇ ಆದೇಶ ಹೊರಡಿಸಲಾಗುವುದು ಎಂದರು.

ಹೆಬ್ಬಾಳ ವ್ಯಾಲಿಗೆ ಹೆಬ್ಬಾಳ ಮತ್ತು ಯಲಹಂಕದಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ. ನಿನ್ನೆ ವೀಕ್ಷಣೆ ಮಾಡಿದ ಸ್ಥಳಗಳಲ್ಲಿ ಹೆಚ್ಚುವರಿ ಎಸ್ ಟಿ ಪಿ  ಘಟಕಗಳನ್ನು ಹಾಕಲು ತೀರ್ಮಾನಿಸಲಾಗಿದೆ. ರೈಲ್ವೆ ಸೇತುವೆಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡುವ ಕಾಮಗಾರಿಗೆ 42 ಕೋಟಿ ಅನುದಾನ ನೀಡಿದೆ, ವಿನ್ಯಾಸವೂ ಸಿದ್ಧಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುವುದು. ಫೆಬ್ರವರಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಭಾಗದಲ್ಲಿ ಕಾಲುವೆಯ ಮುಂದಿನಭಾಗದ ಅಗಲೀಕರಣಕ್ಕೂ ಆದೇಶ ನೀಡಲಾಗಿದೆ. ಐಟಿಐ ಪ್ರದೇಶದಲ್ಲಿ ಅನುಮತಿ ಪಡೆದು ಸುಮಾರು 900 ಮೀ. ಹೆಚ್ಚುವರಿ ಚರಂಡಿ ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ರಾಮಮೂರ್ತಿನಗರದ 3-4 ಬಡಾವಣೆಗಳಲ್ಲಿ ಸುಲಭವಾಗಿ ನೀರು ಹರಿದುಹೋಗಲು ವ್ಯವಸ್ಥೆಯಾಗುತ್ತದೆ. ಈ ಪ್ರದೇಶದಲ್ಲಿ ಚರಂಡಿಗಳ ಮೇಲೆ ಕಟ್ಟಡಗಳನ್ನು ಕಟ್ಟಿದ್ದು, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News